ಸಂಪುಟ ವಿಸ್ತರಣೆಯ ಹೊಸ್ತಿಲಲ್ಲಿ ವಿಶ್ವನಾಥ್ ಸಿಡಿಸಿದ ಹೊಸ ಬಾಂಬ್
ಮೈಸೂರು, ಜ 31: ಅಂತೂ, ಇಂತೂ, ಸಚಿವ ಸಂಪುಟ ವಿಸ್ತರಣೆಗೆ ಅಮಿತ್ ಶಾ ಕಡೆಯಿಂದ ಅನುಮತಿ ಸಿಕ್ಕಿದೆ. "ಕೆಲವರನ್ನು ಸಮಾಧಾನ ಪಡಿಸಬೇಕಿದೆ" ಎನ್ನುವ ಮೂಲಕ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕುತೂಹಲವನ್ನು ಹಾಗೇ ಕಾಯ್ದಿರಿಸಿದ್ದಾರೆ.
ಉಪಚುನಾವಣೆಯಲ್ಲಿ ಸೋತವರಿಗೆ ಸಚಿವ ಸ್ಥಾನ ಸದ್ಯಕ್ಕಿಲ್ಲ ಎನ್ನುವ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಎಚ್. ವಿಶ್ವನಾಥ್, " ಸರ್ಕಾರ ರಚನೆಯಾಗಲು ಕಾರಣರಾಗಿರುವ ನಮ್ಮ ಹೋರಾಟಕ್ಕೆ ಸೂಕ್ತ ಗೌರವ ಸಿಗಬೇಕು. ನಮ್ಮದು ಹೋರಾಟವೇ ಹೊರತು ಮಾರಾಟವಲ್ಲ. ಯಡಿಯೂರಪ್ಪ ಸೇರಿದಂತೆ ಎಲ್ಲರೂ ಇದನ್ನು ಅರ್ಥಮಾಡಿಕೊಳ್ಳಬೇಕು' ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು.
ಈ ನಡುವೆ, ಇನ್ನೊಂದು ಬಾಂಬ್ ಸಿಡಿಸಿರುವ ವಿಶ್ವನಾಥ್, "ಆಪರೇಷನ್ ಕಮಲದ ಬಗ್ಗೆ ಸದ್ಯದಲ್ಲೇ ಪುಸ್ತಕವೊಂದನ್ನು ಬಿಡುಗಡೆ ಮಾಡಲಿದ್ದೇನೆ" ಎನ್ನುವ ಮೂಲಕ, ಬಿಜೆಪಿಗೆ ಹೊಸ ತಲೆನೋವು ತಂದಿದ್ದಾರೆ.

"ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿ ಇಷ್ಟೊಂದು ದೊಡ್ಡಮಟ್ಟಕ್ಕೆ ಶಾಸಕರು ಇನ್ನೊಂದು ಪಕ್ಷಕ್ಕೆ ಸೇರಿರಲಿಲ್ಲ. ಹದಿನೇಳು ಶಾಸಕರು ಕೋಟಿಕೋಟಿಗೆ ಮಾರಿಕೊಂಡು ಬಿಟ್ಟರು ಎನ್ನುವ ಆಪಾದನೆಗೆ ಆ ಪುಸ್ತಕದಲ್ಲಿ ಉತ್ತರ ಸಿಗಲಿದೆ" ಎಂದು ವಿಶ್ವನಾಥ್ ಹೇಳಿದರು.
"ಮಾಧ್ಯಮವರು ಕೂಡಾ ಆಪರೇಷನ್ ಕಮಲದ ವಿಚಾರದಲ್ಲಿ ಸರಿಯಾದ ವಿಶ್ಲೇಷಣೆಯನ್ನು ಮಾಡಲಿಲ್ಲ. ಜನರ ಮನಸ್ಸಿನಲ್ಲಿ ಹಲವಾರು ಸಂಶಯಗಳು ಈ ವಿಚಾರದಲ್ಲಿ ಇದೆ. ಅದಕ್ಕೆ ಉತ್ತರ ನೀಡಬೇಕಾಗಿರುವುದು ನಮ್ಮ ಕರ್ತವ್ಯ" ಎಂದು ವಿಶ್ವನಾಥ್ ಹೇಳಿದರು.
"ಮುಂಬೈಗೆ ಹೋಗಿರುವುದು, ಕೋಲ್ಕತ್ತಾಗೆ ಹೋಗಿರುವುದು ಸೇರಿದಂತೆ, ಎಲ್ಲಾ ವಿಷಯಗಳು ಪುಸ್ತಕದಲ್ಲಿ ಇರಲಿದೆ. ಈಗಾಗಲೇ ಬಹುಪಾಲು ಇದನ್ನು ಬರೆದಿದ್ದೇನೆ. ಇದಕ್ಕೆ ಅಂತಿಮ ಶೇಪ್ ನೀಡುವುದು ಬಾಕಿಯಿದೆ" ಎಂದು ಹಳ್ಳಿಹಕ್ಕಿ ಖ್ಯಾತಿಯ ಎಚ್.ವಿಶ್ವನಾಥ್ ಹೇಳಿದರು.












Click it and Unblock the Notifications