ಮೈಸೂರು ನೂತನ ಡಿಸಿ ರೋಹಿಣಿ ಸಿಂಧೂರಿ ವಿರುದ್ಧ ಸಾರಾ ಮಹೇಶ್ ಆರೋಪ
ಮೈಸೂರು, ಅಕ್ಟೋಬರ್ 1: ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿದ್ದಾಗ ರೋಹಿಣಿ ಸಿಂಧೂರಿ ನೆರೆಯ ಆಂಧ್ರಪ್ರದೇಶಕ್ಕೆ ಅನುಕೂಲ ಮಾಡಿಕೊಟ್ಟಿದ್ದರು. ಅದಕ್ಕೆ ಪ್ರತಿಫಲವಾಗಿ ಮೈಸೂರು ಜಿಲ್ಲಾಧಿಕಾರಿಯ ಸ್ಥಾನವನ್ನು ಗಿಫ್ಟ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ ಶಾಸಕ ಸಾ.ರಾ.ಮಹೇಶ್.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಿರುಮಲದಲ್ಲಿ ಕರ್ನಾಟಕದ ಛತ್ರಕ್ಕೆ ಸೇರಿದ 7.05 ಎಕರೆ ಜಾಗದಲ್ಲಿ ಕಲ್ಯಾಣ ಮಂಟಪ ಅಭಿವೃದ್ಧಿಗೆ ಸಂಬಂಧಿಸಿದ 200 ಕೋಟಿಗಳ ವೆಚ್ಚದ ಕಾಮಗಾರಿಯ ವಿನ್ಯಾಸವನ್ನು ಆಂಧ್ರದವರು ತಯಾರಿಸಲಿದ್ದಾರೆ. ಇದರ ಇಂಜಿನಿಯರಿಂಗ್ ವಿನ್ಯಾಸ ಮತ್ತು ತಾಂತ್ರಿಕ ಸೇವೆಗಳನ್ನು ಮೆಸರ್ಸ್ ಡಿಸೈನ್ ವೆಂಚರ್ ಕನ್ಸಲ್ಟೆಂಟ್ ಪ್ರೈವೇಟ್ ಲಿಮಿಟೆಡ್ ಅವರಿಗೆ ಯೋಜನೆಯ ವೃತ್ತಿ ಶುಲ್ಕ 2.5% ರಂತೆ ಎರಡೂ ಸೇರಿ ಅಂದಾಜು ಮೊತ್ತಕ್ಕೆ 5% ರಂತೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆಯಡಿ ವಿನಾಯಿತಿ ನೀಡುವ ಪ್ರಸ್ತಾವನೆಯಾಗಿದೆ ಎಂದು ದೂರಿದರು.

"ಆಂಧ್ರಪ್ರದೇಶಕ್ಕೆ ಅನುಕೂಲ"
ಈ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಮೂಲಕ ಆಂಧ್ರಪ್ರದೇಶಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಜಾಗ ನಮ್ಮದು, ಹಣ ನಮ್ಮದಾಗಿದ್ದು, ನಮ್ಮಲ್ಲೂ ವಿನ್ಯಾಸಕಾರರು ಇರಲಿಲ್ಲವಾ? ನಮ್ಮ ಲೋಕೋಪಯೋಗಿ ಇಲಾಖೆ ಇರಲಿಲ್ವಾ? ಎಂದು ಪ್ರಶ್ನಿಸಿದ ಅವರು ಸದರಿ ಕಾಮಗಾರಿಯನ್ನು ರಾಜ್ಯದ ಲೋಕೋಪಯೋಗಿ ಇಲಾಖೆಗೆ ವಹಿಸಬಹುದಿತ್ತು. ಆದರೆ ಎಲ್ಲವನ್ನೂ ಟಿಟಿಡಿ ಮೇಲ್ವಿಚಾರಣೆ ಮೂಲಕ ಆಂಧ್ರಪ್ರದೇಶದ ಖಾಸಗಿ ಸಂಸ್ಥೆಗೆ ರೋಹಿಣಿ ಸಿಂಧೂರಿ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ದೂರಿದರು.

ರೋಹಿಣಿ ಸಿಂಧೂರಿ ವಿರುದ್ಧ ಆರೋಪ
ಅದರ ಪ್ರತಿಫಲವಾಗಿ ರೋಹಿಣಿ ಸಿಂಧೂರಿಯವರಿಗೆ ಮೈಸೂರು ಜಿಲ್ಲಾಧಿಕಾರಿ ಸ್ಥಾನ ಗಿಫ್ಟ್ ನಂತೆ ಸಿಕ್ಕಿದೆ ಎಂದು ಆರೋಪಿಸಿದರು. ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪ ಮಾಡಿದ ಶಾಸಕರು ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದರು.

200 ಕೋಟಿ ರೂ. ಕಾಮಗಾರಿಯ ನಿರ್ವಹಣೆ ಟಿಟಿಡಿಗೆ
ರೋಹಿಣಿ ಸಿಂಧೂರಿ ಮೈಸೂರು ಡಿಸಿ ಆಗುವುದಕ್ಕೂ ಮುಂಚೆ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಾಗಿದ್ದರು. ಆಂಧ್ರಪ್ರದೇಶದ ತಿರುಮಲದಲ್ಲಿ ವಸತಿ ಗೃಹ, ಕಲ್ಯಾಣ ಮಂಟಪ, ಮೂಲಸೌಕರ್ಯ ಕಲ್ಪಿಸುವುದು ಸಂಬಂಧ ಪ್ರಸ್ತಾವನೆ ಸಲ್ಲಿಸಿದ್ದರು. ಅದರ ಆಧಾರದ ಮೇಲೆ 2020ರ ಜೂನ್ 30ರಂದು ಸರ್ಕಾರ ಆದೇಶ ಮಾಡಿದೆ. 200 ಕೋಟಿ ರೂ. ಕಾಮಗಾರಿಯ ನಿರ್ಮಾಣ, ನಿರ್ವಹಣೆಯನ್ನು ಟಿಟಿಡಿಗೆ ವಹಿಸಿದೆ ಎಂದರು.

"ನಮ್ಮ ರಾಜ್ಯದಲ್ಲೇ ಸಾಕಷ್ಟು ಸ್ಮಾರಕಗಳಿವೆ"
ನಮ್ಮ ರಾಜ್ಯದಲ್ಲೇ ಸಾಕಷ್ಟು ಸ್ಮಾರಕಗಳನ್ನು ಈಗಲೂ ಗುರುತಿಸಲು ಆಗಿಲ್ಲ. ಹೀಗಿರುವಾಗ ಕೇವಲ ಒಂದೇ ಜಾಗಕ್ಕೆ ಇಷ್ಟು ಹಣ ಕೊಟ್ಟಿದ್ದು ಯಾಕೆ? ಈ ವಿಚಾರವನ್ನು ಕೆಲವರು ಗಿಫ್ಟ್ ಅಂತ ಹೇಳುತ್ತಿದ್ದಾರೆ. ಇದಕ್ಕೆ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.












Click it and Unblock the Notifications