Breaking; ಸಿಎಂ ಇಳಿಸಲು ಆರ್ಎಸ್ಎಸ್ ತಂತ್ರ; ಸಿದ್ದರಾಮಯ್ಯ
ಮೈಸೂರು, ಮೇ 01; " ಬಸವರಾಜ ಬೊಮ್ಮಾಯಿ ಆರ್ಎಸ್ಎಸ್ನವರು ಅಲ್ಲ. ಅವರು ಜನತಾ ಪರಿವಾರದವರು. ಹೀಗಾಗಿ ಅವರನ್ನು ಬದಲಾಯಿಸಲು ಆರ್ಎಸ್ಎಸ್ನವರು ಹೊರಟಿದ್ದಾರೆ" ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಭಾನುವಾರ ಮೈಸೂರಿನಲ್ಲಿ ಮಾತನಾಡಿದ ಅವರು, "ಬಸವರಾಜ ಬೊಮ್ಮಯಿ ಜನತಾ ಪರಿವಾರದವರು. ನಮ್ಮ ಜೊತೆಯಲ್ಲೇ ಇದ್ದರು. ಆದರೆ ಅವರು ನಮ್ಮ ಪಟ್ಟುಗಳನ್ನು ಕಲಿಯಲಿಲ್ಲ. ರಾಜ್ಯದಲ್ಲಿ ಸರ್ಕಾರ ಸತ್ತು ಹೋಗಿದೆ. ಸಿಎಂ, ಗೃಹ ಸಚಿವರು ಇಬ್ಬರು ಅಶಕ್ತರು" ಎಂದು ಆರೋಪಿಸಿದರು.
"ಗೃಹ ಸಚಿವರು ಅತ್ಯಂತ ಅಸಮರ್ಥರು. ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಇವರಿಗೆ ಆಡಳಿತ ಮಾಡುವುದಕ್ಕೆ ಬರುತ್ತಿಲ್ಲ. ಎಲ್ಲಾ ಪರೀಕ್ಷೆಗಳಲ್ಲೂ ದುಡ್ಡು ದುಡ್ಡು ಎನ್ನುತ್ತಿದ್ದಾರೆ. ದುಡ್ಡು ಕೊಟ್ಟು ಬಂದ ಅಧಿಕಾರಿಗಳು ಇವರ ಮಾತು ಕೇಳುತ್ತಿಲ್ಲ" ಎಂದು ಸಿದ್ದರಾಮಯ್ಯ ಟೀಕಿಸಿದರು.

"ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ಇಲ್ಲ. ಆದರೆ ಸರ್ಕಾರಕ್ಕೆ ಅದನ್ನು ನಿಭಾಯಿಸಲು ಬರುತ್ತಿಲ್ಲ. ಕಲ್ಲಿದ್ದಲು ಹೆಚ್ಚಾಗಿಯೇ ಇದೆ. ಆದರೆ ಅದನ್ನು ಹಂಚಿಕೆ ಮಾಡಲು ಇವರಿಗೆ ಬರುತ್ತಿಲ್ಲ. ಇಂತಹ ಆಡಳಿತದಿಂದ ಕಷ್ಟ ಎದುರಾಗುತ್ತಿದೆ. ಕೃತಕ ಕೊರತೆಯನ್ನು ಸೃಷ್ಟಿಯನ್ನು ಮಾಡುತ್ತಿದ್ದಾರೆ. ದಿಢೀರನೆ ಕಲ್ಲಿದ್ದಲು ಉತ್ಪಾದನೆ ನಿಲ್ಲಲು ಹೇಗೆ ಸಾಧ್ಯ?" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
"ಕಾಂಗ್ರೆಸ್ನಿಂದ ವಂಶ ಪಾರಂಪರ್ಯ ರಾಜಕಾರಣ" ಎಂಬ ಯಡಿಯೂರಪ್ಪ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, "ಯಡಿಯೂರಪ್ಪ ಮತ್ತು ಅವರ ಮಕ್ಕಳು ಯಾರು?. ಅಪ್ಪ-ಮಕ್ಕಳು ಅಲ್ವ?. ಅಂದರೆ ವಂಶ ಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ?" ಎಂದು ಹೇಳಿದರು.












Click it and Unblock the Notifications