ಹೆಚ್.ಡಿ.ಕೋಟೆ ವ್ಯಾಪ್ತಿಯ ಜಲಾಶಯಗಳಲ್ಲೀಗ ಜಲ ನರ್ತನ

ಮೈಸೂರು, ಜುಲೈ 13: ಜಿಲ್ಲೆಯ ಗಡಿ ತಾಲೂಕು, ಕೇರಳಕ್ಕೆ ಹೊಂದಿಕೊಂಡಿರುವ ಎಚ್.ಡಿ.ಕೋಟೆ ತಾಲೂಕು ವ್ಯಾಪ್ತಿಯಲ್ಲಿ ಕಳೆದ 15 ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಪರಿಣಾಮ ಕಬಿನಿ, ನುಗು, ಹೆಬ್ಬಳ್ಳ ಜಲಾಶಯ ಭರ್ತಿಯಾಗಿದ್ದು, ತಾರಕ ಜಲಾಶಯ ಭರ್ತಿಗೆ 1.04 ಟಿಎಂಸಿ ಮಾತ್ರ ಬಾಕಿಯಿದ್ದು, ಹೀಗೆ ಮಳೆ ಸುರಿದಿದ್ದೇ ಆದರೆ ಬಹುಬೇಗ ಭರ್ತಿಯಾಗುವ ಸಾಧ್ಯತೆ ಹೆಚ್ಚಿದೆ.

ಹೆಚ್.ಡಿ.ಕೋಟೆ ತಾಲೂಕು ವ್ಯಾಪ್ತಿಯಲ್ಲಿ ನಾಲ್ಕು ಜಲಾಶಯಗಳಿದ್ದು, ಈ ಜಲಾಶಯಗಳ ಪೈಕಿ ಕಬಿನಿ ಜಲಾಶಯ ಮಾತ್ರ ಈ ಹಿಂದೆ ಭರ್ತಿಯಾಗುತ್ತಿತ್ತು. ಆದರೆ ಕಳೆದ ನಾಲ್ಕು ವರ್ಷಗಳಿಂದ ಎಲ್ಲ ಜಲಾಶಯಗಳು ಭರ್ತಿಯಾಗುತ್ತಿರುವುದು ವಿಶೇಷವಾಗಿದೆ. ಸದ್ಯ ಮಳೆಯಿಂದ ತಾಲ್ಲೂಕಿನ ಎಲ್ಲ ಕೆರೆ, ಕಟ್ಟೆಗಳು, ಹಳ್ಳ ಕೊಳ್ಳ ತೊರೆಗಳು ಮೈದುಂಬಿ ಹರಿಯುತ್ತಿದೆ.

ಆಷಾಢದ ಆರಂಭದಿಂದಲೇ ಮಳೆ ಉತ್ತಮವಾಗಿ ಸುರಿದ ಪರಿಣಾಮ ಜಲಾಶಯಗಳು ಭರ್ತಿಯಾಗಿವೆ. ಕಳೆದ ವರ್ಷ ಹಿಂಗಾರು ಮಳೆ ಡಿಸೆಂಬರ್ ತನಕವೂ ಸುರಿದಿತ್ತು. ಹೀಗಾಗಿ ಕೆರೆಕಟ್ಟೆಗಳು ತುಂಬಿದ್ದವು. ಅಂತರ್ಜಲವೂ ಹೆಚ್ಚಾಗಿತ್ತು. ಇದೀಗ ಮಳೆ ಬೀಳುತ್ತಿದ್ದಂತೆಯೇ ಕೆರೆಕಟ್ಟೆಗಳು ಕೋಡಿ ಬಿದ್ದಿವೆ.

 ಕಪಿಲಾ ನದಿಗೆ 38 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಕಪಿಲಾ ನದಿಗೆ 38 ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಕೇರಳದ ವೈನಾಡು ಹಾಗೂ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಭಾರಿ ಮಳೆ ಆಗುತ್ತಿರುವ ಕಾರಣ ಒಳ ಹರಿವಿನ ಪ್ರಮಾಣ ಹೆಚ್ಚಾಗುತ್ತಿದೆ, ಜಲಾಶಯಕ್ಕೆ 34,200 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು ಜಲಾಶಯದ ಸುರಕ್ಷತೆ ದೃಷ್ಟಿಯಿಂದ ಜಲಾಶಯದ ಸಂಗ್ರಹ ಮಟ್ಟ 2282.12 ಅಡಿಗಳನ್ನು ಕಾಯ್ದಿಟ್ಟುಕೊಂಡು ಸದ್ಯ 38 ಸಾವಿರ ಕ್ಯುಸೆಕ್ ನೀರನ್ನು ಕಪಿಲ ನದಿಗೆ ಬಿಡಲಾಗುತ್ತಿದೆ.

ಪರಿಣಾಮ ಜಲಾಶಯದ ಮುಂದಿನ ಸೇತುವೆ ಮುಳುಗಡೆಯಾಗಿದೆ. ಇದರಿಂದ ಈ ಭಾಗದ ಬಂಡೀಪುರ ರಾಷ್ಟ್ರೀಯ ವನ್ಯಜೀವಿ ವಲಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳಾದ ಬೀದರಹಳ್ಳಿ, ಕೆಂಚನಹಳ್ಳಿ, ನಂದಿನಾಥಪುರ, ಮೊಸರಳ್ಳ, ತೆರಣಿಮುಂಟಿ, ಭೀಮನಕೊಲ್ಲಿ, ಎನ್.ಬೇಗೂರು, ಬೀರಂಬಳ್ಳಿ ಹಾಗೂ ಗಂಡತ್ತೂರು ಗ್ರಾಮಗಳ ಸಂಪರ್ಕ ಕಡಿತವಾಗಿದ್ದು, ಸೇತುವೆ ಮುಳುಗಡೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದೆ.

 ನುಗು ಜಲಾಶಯದಿಂದ ನೀರು ಹೊರಕ್ಕೆ

ನುಗು ಜಲಾಶಯದಿಂದ ನೀರು ಹೊರಕ್ಕೆ

ಇನ್ನೂ ಭಾರಿ ವಾಹನಗಳನ್ನು ಹೊರತುಪಡಿಸಿ ಕಾರು, ದ್ವಿಚಕ್ರ ವಾಹನ ಸೇರಿದಂತೆ ಲಘು ವಾಹನಗಳನ್ನು ಜಲಾಶಯ ಆಣೆಕಟ್ಟೆಯ ಮೇಲೆ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಜಲಾಶಯದ ಹಿನ್ನೀರು ವ್ಯಾಪ್ತಿ ಮತ್ತು ಕೇರಳದ ಮೂಲೆಹೊಳೆ ಹಾಗೂ ಮುತ್ತಂಗ ಪ್ರದೇಶದ ವ್ಯಾಪ್ತಿಯಲ್ಲಿ ಮಳೆ ಸುರಿಯುತ್ತಿರುವ ಪರಿಣಾಮ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದು ನುಗು ಜಲಾಶಯಕ್ಕೆ ತಲುಪುತ್ತಿದ್ದು, ನೀರಿನ ಸಂಗ್ರಹ ಗರಿಷ್ಟ ಮಟ್ಟ 2380 (5.4ಟಿಎಂಸಿ) ಅಡಿಗಳನ್ನೇರಿದೆ. ಹೀಗಾಗಿ ಎರಡು ಕ್ರಷ್ಟ್ ಗೇಟ್‌ಗಳ ಮೂಲಕ ಹೆಚ್ಚಿನ ನೀರನ್ನು ಮುಂಭಾಗದ ನದಿಗೆ ಹೊರ ಬಿಡಲಾಗುತ್ತಿದೆ.

 ಸತತ ಒಂದು ವಾರ ಮಳೆಯಾದರೆ ಹೆಬ್ಬಳ್ಳ ಭರ್ತಿ

ಸತತ ಒಂದು ವಾರ ಮಳೆಯಾದರೆ ಹೆಬ್ಬಳ್ಳ ಭರ್ತಿ

ನಾಗರಹೊಳೆ ಅಭಯಾರಣ್ಯದೊಳಗಿಂದ ಹರಿಯುವ ಹೆಬ್ಬಳ್ಳ ನದಿ ಅಡ್ಡಲಾಗಿ ನಿರ್ಮಾಣವಾಗಿರುವ ಮತ್ತೊಂದು ಹೆಬ್ಬಳ್ಳ ಜಲಾಶಯ 0.428 ಟಿಎಂಸಿ ಸಂಗ್ರಹಮಟ್ಟ ಹೊಂದಿದೆ, ನಾಗರಹೊಳೆ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಸುರಿದ ಮಹಾಮಳೆಗೆ ರಾತ್ರೋರಾತ್ರಿ ತುಂಬಿ ಹರಿದಿತ್ತು, ಹೆಬ್ಬಳ ನದಿಗೆ ಲಕ್ಷ್ಮಣತೀರ್ಥ ಹಾಗೂ ತಾರಕ ಜಲಾಶಯದ ನೀರು ಹರಿದು ಬರುವುದರಿಂದ ಒಂದು ವಾರ ಸತತ ಮಳೆಯಾದರೇ ಸಾಕು ಭರ್ತಿಯಾಗಿ ಬಿಡುತ್ತದೆ. ಇನ್ನು ಇದು ತುಂಬಿ ಹರಿದಾಗ ಕಾಣಸಿಗುವ ದೃಶ್ಯ ಮನಮೋಹಕವಾಗಿರುತ್ತದೆ.

 ಪ್ರವಾಸಿಗರ ದಂಡು

ಪ್ರವಾಸಿಗರ ದಂಡು

ಮತ್ತೊಂದು ತಾರಕ ಜಲಾಶಯ ಗರಿಷ್ಟ ಮಟ್ಟ 2425 (3.947ಟಿಎಂಸಿ) ಅಡಿಗಳ ನೀರಿನ ಸಂಗ್ರಹ ಮಟ್ಟವನ್ನು ಹೊಂದಿದ್ದು, ಸದ್ಯ ಜಲಾಶಯ ಭರ್ತಿಗೆ 10 ಅಡಿಯಷ್ಟು ಬಾಕಿಯಿದೆ. ಈ ಜಲಾಶಯಕ್ಕೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೆಟಿಕುಪ್ಪೆ ವನ್ಯಜೀವಿ ವಲಯದಿಂದ ಹರಿದು ಬರುವ ನೀರು ಬರುತ್ತದೆ. ಜತೆಗೆ ನಾರಹೊಳೆ ಹಾಗೂ ಸಾರಥಿ ಹೊಳೆಯೂ ಇದಕ್ಕೆ ಸೇರುತ್ತದೆ. ಜಲಾಶಯಕ್ಕೆ ಈಗ 500 ಕ್ಯುಸೆಕ್ ನೀರು ಹರಿದು ಬರುತ್ತಿದ್ದು ಜಲಾಶಯದಲ್ಲಿ 2415ಅಡಿಗಳಷ್ಟು (2.9)ಟಿಎಂಸಿ ನೀರು ಸಂಗ್ರವಿದ್ದು ಭರ್ತಿಗೆ 1.04 ಟಿಎಂಸಿ ಬಾಕಿಯಿದೆ. ಈ ವ್ಯಾಪ್ತಿಯಲ್ಲಿ ಉತ್ತಮವಾಗಿ ಮಳೆಯಾದರೆ ಬಹುಬೇಗವೇ ತಾರಕ ಜಲಾಶಯ ಭರ್ತಿಯಾಗಲಿದೆ.

ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ಅತಿ ಹೆಚ್ಚು ಜಲಾಶಯಗಳನ್ನು ಹೊಂದಿರುವ ತಾಲೂಕಾಗಿ ಎಲ್ಲರ ಗಮನಸೆಳೆಯುತ್ತಿದ್ದು, ಕಬಿನಿ ಜಲಾಶಯದಿಂದ ಹೊರಬಿಡುತ್ತಿರುವ ನೀರಿನಿಂದ ಪ್ರವಾಹ ಪರಿಸ್ಥಿತಿ ತಲೆದೋರಿದ್ದರೂ ಇಲ್ಲಿ ಕಾಣಬರುತ್ತಿರುವ ಸುಂದರ ದೃಶ್ಯಗಳು ಎಲ್ಲರ ಗಮನಸೆಳೆಯುತ್ತಿದೆ. ಹೀಗಾಗಿ ಪ್ರವಾಸಿಗರು ಅತ್ತ ತೆರಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+