Get Updates
Get notified of breaking news, exclusive insights, and must-see stories!

ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ನಲ್ಲಿ ಬಂಡಾಯದ ಕಹಳೆ!

ಮೈಸೂರು, ಡಿಸೆಂಬರ್ 01; 2023ರ ವಿಧಾನಸಭಾ ಚುನಾವಣೆಯನ್ನು ರಾಜ್ಯದ ಜನ ಎದುರು ನೋಡುತ್ತಿರುವಾಗಲೇ ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹೊಸ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದ್ದು ರಾಜ್ಯದ 224 ಕ್ಷೇತ್ರಗಳ ಪೈಕಿ ಕೆಲವೇ ಕೆಲವು ಕ್ಷೇತ್ರಗಳು ಎಲ್ಲರ ಗಮಸೆಳೆಯುತ್ತಿವೆ. ಇದೆಲ್ಲದರ ನಡುವೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೋಲಿನ ಬಳಿಕ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದತ್ತ ಜನ ತಿರುಗಿ ನೋಡುವಂತಾಗಿದೆ. ಹೀಗಾಗಿ ಇಲ್ಲಿನ ಬೆಳವಣಿಗೆಗಳು ಹೆಚ್ಚು ಸುದ್ದಿಯಾಗುತ್ತಿವೆ.

ಈ ಕ್ಷೇತ್ರದಲ್ಲಿ 2018ರಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಜೆಡಿಎಸ್‌ನಿಂದ ಸ್ಪರ್ಧಿಸಿದ ಜಿ. ಟಿ. ದೇವೇಗೌಡರು ನಿರೀಕ್ಷೆ ಮೀರಿದ ಗೆಲುವು ಸಾಧಿಸಿ ಜನ ಇತ್ತ ತಿರುಗಿ ನೋಡುವಂತೆ ಮಾಡಿದ್ದರು. ಜಿ. ಟಿ. ದೇವೇಗೌಡರು ಒಬ್ಬ ಮುಖ್ಯಮಂತ್ರಿ ಅಭ್ಯರ್ಥಿಯನ್ನೇ ಸೋಲಿಸಿದ್ದರೂ ಬಳಿಕ ನಡೆದ ರಾಜಕೀಯ ವಿದ್ಯಮಾನದಲ್ಲಿ ಅವರಿಗೆ ಸ್ವಪಕ್ಷದ ನಾಯಕರಿಂದಲೇ ಅವಮಾನವಾಗಿತ್ತು. ಹೀಗಾಗಿ ಸಮ್ಮಿಶ್ರ ಸರ್ಕಾರ ಬಿದ್ದ ನಂತರ ಪಕ್ಷದಲ್ಲಿ ಸಂಪೂರ್ಣ ತಟಸ್ಥರಾದರು.

ಎಚ್. ಡಿ. ಕುಮಾರಸ್ವಾಮಿ ಅವರೊಂದಿಗೆ ಮನಸ್ತಾಪ ಮಾಡಿಕೊಂಡ ಜಿ. ಟಿ. ದೇವೇಗೌಡರು ಪಕ್ಷದ ಚಟುವಟಿಕೆಯಿಂದಲೇ ದೂರವಿದ್ದರು. ಇನ್ನೇನು ಪಕ್ಷವನ್ನು ಬಿಟ್ಟೇ ಬಿಟ್ಟರು ಎನ್ನುವಾಗಲೇ ಜೆಡಿಎಸ್ ವರಿಷ್ಠರಾದ ದೇವೇಗೌಡ ಅವರು ಅಖಾಡಕ್ಕಿಳಿದಿದ್ದರು.

ಅದರ ಪರಿಣಾಮ ಜೆಡಿಎಸ್ ನಲ್ಲಿಯೇ ಉಳಿಯುವಂತಾಯಿತು. ಆದರೆ ಜೆಡಿಎಸ್‌ನಲ್ಲಿ ಜಿ. ಟಿ. ದೇವೇಗೌಡರು ಉಳಿಯುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ಜೆಡಿಎಸ್‌ನ ಚಾಮುಂಡೇಶ್ವರಿ ಕ್ಷೇತ್ರದ ಎರಡನೇ ಹಂತದ ನಾಯಕರಲ್ಲಿ ಅಸಮಾಧಾನದ ಹೊಗೆ ಹೊರಬಂದಿದೆ.

ಜಿಟಿಡಿ ವಿರುದ್ಧ ಬಂಡಾಯನಾ?

ಜಿಟಿಡಿ ವಿರುದ್ಧ ಬಂಡಾಯನಾ?

ಇದೀಗ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆಯೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಜೆಡಿಎಸ್ ಒಳಗಿನ ಭಿನ್ನಾಭಿಪ್ರಾಯಕ್ಕಿಂತ ಜಿ. ಟಿ. ದೇವೇಗೌಡರ ವಿರುದ್ಧದ ಬಂಡಾಯ ಎದ್ದು ನಿಂತಿದ್ದು, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಮುಖಂಡರು, ಬೆಂಬಲಿಗರು, ಕಾರ್ಯಕರ್ತರ ಶಕ್ತಿ ಪ್ರದರ್ಶನ ಮಾಡಿ ಜೆಡಿಎಸ್ ಸದಸ್ಯತ್ವಕ್ಕೆ ಸಾಮೂಹಿಕ ರಾಜೀನಾಮೆ ನೀಡುವ ಮೂಲಕ ಪಕ್ಷ ತೊರೆಯುವುದಾಗಿ ಘೋಷಣೆ ಮಾಡಿರುವುದು ಜೆಡಿಎಸ್‍ ಗೆ ಹಾಕುತ್ತಿರುವ ಸವಾಲಾ? ಅಥವಾ ಜಿ. ಟಿ. ದೇವೇಗೌಡರಿಗೆ ನೀಡಿದ ಎಚ್ಚರಿಕೆಯಾ? ಗೊತ್ತಿಲ್ಲ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶಾಸಕ ಜಿ. ಟಿ. ದೇವೇಗೌಡರಿಂದ ಅಂತರ ಕಾಯ್ದುಕೊಂಡು ಬಂದಿದ್ದ ಜೆಡಿಎಸ್ ನಾಯಕರಾದ ಜಿಪಂ ಮಾಜಿ ಸದಸ್ಯರಾದ ಮಾದೇಗೌಡ, ಬೀರಿಹುಂಡಿ ಬಸವಣ್ಣ, ಮೈಮುಲ್ ಮಾಜಿ ಅಧ್ಯಕ್ಷ ಮಾವಿನಹಳ್ಳಿ ಸಿದ್ಧೇಗೌಡ, ಕ್ಷೇತ್ರದ ಮುಖಂಡರಾದ ಕೃಷ್ಣನಾಯಕ ಸೇರಿ 50ಕ್ಕೂ ಹೆಚ್ಚು ಮಂದಿ ಜೆಡಿಎಸ್ ತೊರೆಯುವ ಘೋಷಣೆ ಮಾಡಿದ್ದಾರೆ. ಇದೊಂದು ಹೊಸ ಬೆಳವಣಿಗೆಯಾಗಿದ್ದು ಇದರ ಹಿಂದಿನ ಉದ್ದೇಶವೇನು ಎಂಬುದು ಸದ್ಯಕ್ಕೆ ಯಾರಿಗೂ ಅರ್ಥವಾದಂತೆ ಕಾಣುತ್ತಿಲ್ಲ. ಆದರೆ ಇದ್ಯಾವುದನ್ನೂ ಜಿ.ಟಿ.ದೇವೇಗೌಡರು ಲೆಕ್ಕಕ್ಕೆ ತೆಗೆದುಕೊಂಡಂತೆ ಕಾಣುತ್ತಿಲ್ಲ.

ಜೆಡಿಎಸ್ ನಾಯಕರ ಅಸಮಾಧಾನಕ್ಕೆ ಕಾರಣವೇನು?

ಜೆಡಿಎಸ್ ನಾಯಕರ ಅಸಮಾಧಾನಕ್ಕೆ ಕಾರಣವೇನು?

ಇಷ್ಟಕ್ಕೂ ಈ ಜೆಡಿಎಸ್ ನಾಯಕರು ಬಂಡಾಯ ಏಳಲು ಕಾರಣವೇನು? ಎಂಬುದನ್ನು ನೋಡಿದ್ದೇ ಆದರೆ ಕಳೆದ ಮೂರು ವರ್ಷಗಳಿಂದ ಪಕ್ಷದ ಸಂಘಟನೆ ಮಾಡದೆ ಮೌನವಾಗಿದ್ದ ಜಿ. ಟಿ. ದೇವೇಗೌಡರನ್ನು ಮತ್ತೆ ಪಕ್ಷದಲ್ಲಿ ಉಳಿಸಿಕೊಳ್ಳುವ ಮೂಲಕ ಪಕ್ಷದ ನಿಷ್ಠಾವಂತ ಮುಖಂಡರು ಮತ್ತು ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ಇದುವರೆಗೆ ಪಕ್ಷಕ್ಕೆ ಏನನ್ನೂ ಮಾಡದೆ ತಟಸ್ಥರಾಗಿದ್ದವರಿಗೆ ಮತ್ತೆ ಮಣೆ ಹಾಕಿ ಪಕ್ಷದಿಂದ ಟಿಕೆಟ್ ನೀಡಿ ಗೆಲುವಿಗೆ ಸಹಕರಿಸುವುದಾದರೆ ಪಕ್ಷಕ್ಕಾಗಿ ದುಡಿದ ತಮಗೇನು ಸಿಕ್ಕಿದಂತಾಯಿತು ಎಂಬುದು ಬಂಡಾಯ ಎದ್ದವರ ಪ್ರಶ‍್ನೆಯಾಗಿದೆ. ಇದೇ ನೆಪ ಮಾಡಿಕೊಂಡಿರುವ ಈ ಮುಖಂಡರು ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ನತ್ತ ಮುಖ ಮಾಡುತ್ತಾರಾ? ಎಂಬ ಸಂಶಯ ಕ್ಷೇತ್ರದಲ್ಲಿ ಕಾಡಲಾರಂಭಿಸಿದೆ.

ಈಗಾಗಲೇ ಬಂಡಾಯ ಮುಖಂಡರು ಒಂದಷ್ಟು ಕಾರ್ಯಕರ್ತರನ್ನು ಕ್ಷೇತ್ರ ಕೇರ್ಗಳ್ಳಿಯ ಸಮುದಾಯ ಭವನದಲ್ಲಿ ಸೇರಿಸಿ ಸ್ವಾಭಿಮಾನಿ ಕಾರ್ಯಕರ್ತರ ಸಭೆ ನಡೆಸಿದ್ದು, ಆ ಸಭೆಯಲ್ಲಿ ಜೆಡಿಎಸ್ ಮತ್ತು ಜಿ. ಟಿ. ದೇವೇಗೌಡರ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಪೈಕಿ ಸಭೆಯನ್ನು ಸಂಘಟಿಸಿದ ಮುಖಂಡ ಬೀರಿಹುಂಡಿ ಬಸವಣ್ಣ ಅವರ ಆಕ್ರೋಶವನ್ನು ಅವರದ್ದೇ ಧಾಟಿಯಲ್ಲಿ ಹೇಳುವುದಾದರೆ ನಮ್ಮನ್ನು ಕಳೆದ ಜಿಪಂ ಚುನಾವಣೆಯಲ್ಲೇ ಸೋಲಿಸುವ ಪ್ರಯತ್ನ ನಡೆದಿತ್ತು, ಮತದಾರರು ಅದನ್ನು ತಪ್ಪಿಸಿದರು. ಲೋಕಸಭೆ, ನಗರಪಾಲಿಕೆ, ಎಪಿಎಂಸಿ, ಸಹಕಾರ ಇಲಾಖೆ, ನಗರಪಾಲಿಕೆ, ಎಂಎಲ್‌ಸಿ ಚುನಾವಣೆಗಳಲ್ಲಿ ಪಕ್ಷಕ್ಕಾಗಿ ದುಡಿದವರು ನಾವು. ಆದರೆ ಶಾಸಕರು ನಮ್ಮ ವಿರುದ್ಧವಾದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದಿನ ನಿರ್ಧಾರಕ್ಕೆ ಶಕ್ತಿ ನೀಡಿ

ಮುಂದಿನ ನಿರ್ಧಾರಕ್ಕೆ ಶಕ್ತಿ ನೀಡಿ

2013ರಲ್ಲಿ ನನಗೆ ಅವಮಾನ ಮಾಡಿದರು. ಬೆಳವಾಡಿ ಶಿವಮೂರ್ತಿಯವರೊಂದಿಗೆ ಜಗಳವಾಯಿತು. ಐತಿಹಾಸಿಕ ದಸರೆಯಲ್ಲಿ ಓರ್ವ ಮಹಿಳೆ ಮೇಯರ್ ಆಗಿ ಪುಷ್ಪಾರ್ಚನೆ ಮಾಡುವುದು ತಪ್ಪಿಸಲಾಯಿತು. ದಡದ ಕಲ್ಲಹಳ್ಳಿಗೆ ಸಿದ್ದರಾಮಯ್ಯರನ್ನು ಕರೆಯಿಸಿ ಮುಂದಿನ ಸಿಎಂ ಆಗಲೆಂದು ಪೂಜೆ ಮಾಡಿಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರು ಯಾರು? ಇಷ್ಟೆಲ್ಲಾ ಆದ ಮೇಲೂ ನಾವು ಜೆಡಿಎಸ್‌ನಲ್ಲೇ ಉಳಿಯಬೇಕೇ ಎಂದು ಪ್ರಶ್ನಿಸಿದರು.

ಇನ್ನೊಬ್ಬ ಮುಖಂಡ ಮಾವಿನಹಳ್ಳಿ ಸಿದ್ದೇಗೌಡ ಮಾತನಾಡಿ, ಮುಂದೆ ನಾವು ಕೈಗೊಳ್ಳುವ ತೀರ್ಮಾನಕ್ಕೆ ನೀವೆಲ್ಲರೂ ಶಕ್ತಿ ತುಂಬಬೇಕು. ನನಗೆ ಹಾಗೂ ನನ್ನಂತಹ ನೂರಾರು ಮಂದಿಗೆ ಆಗಿರುವ ಅನ್ಯಾಯಕ್ಕೆ 2023ರ ಚುನಾವಣೆ ಮೂಲಕ ಉತ್ತರ ಕೊಡಬೇಕಿದೆ. ಹೀಗಾಗಿ ನಾವು ಮುಂದೆ ಕೈಗೊಳ್ಳುವ ನಿರ್ಧಾರಕ್ಕೆ ಶಕ್ತಿ ನೀಡಿ. ಜೆಡಿಎಸ್ ನಾಯಕರ ಬಗ್ಗೆಯಾಗಲಿ, ಪಕ್ಷದ ಬಗ್ಗೆಯಾಗಲಿ ನಮ್ಮ ಅಭ್ಯಂತರವಿಲ್ಲ. ಆದರೆ, ಶಾಸಕ ಜಿ.ಟಿ.ದೇವೇಗೌಡರಿಂದ ಆಗಿರುವ ಅನಾಹುತ ಸರಿಪಡಿಸಬೇಕಿದೆ. ಪಕ್ಷಕ್ಕೆ ಸೇರಿದ ಬಳಿಕವೂ ನಮ್ಮನ್ನು ಕರೆಸಿ ಮಾತನಾಡುವ ನಾಯಕರಿಲ್ಲ. ಹೀಗಾಗಿ ಸ್ವಾಭಿಮಾನಕ್ಕಾಗಿ ಪಕ್ಷ ತೊರೆದಿದ್ದೇವೆ. ಮುಂದೆ ತೆಗೆದುಕೊಳ್ಳುವ ತೀರ್ಮಾನಕ್ಕೆ ನಿಮ್ಮ ಬೆಂಬಲ ಇರಲಿ ಎಂದಿದ್ದಾರೆ.

ಕಾಂಗ್ರೆಸ್‍ ನತ್ತ ಮುಖ ಮಾಡುವುದು ಖಚಿತ

ಕಾಂಗ್ರೆಸ್‍ ನತ್ತ ಮುಖ ಮಾಡುವುದು ಖಚಿತ

ಸಭೆಯಲ್ಲಿ ನಡೆದ ಕೆಲವು ವಿದ್ಯಮಾನವನ್ನು ಗಮನಿಸಿದರೆ ಇಲ್ಲಿ ಸೇರಿದ್ದ ಬಹುತೇಕ ನಾಯಕರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗುವ ಹುಮ್ಮಸ್ಸಿನಲ್ಲಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ಈ ನಾಯಕರಿಗೆ ಯಾವ ಸ್ಥಾನಮಾನ ಸಿಗುತ್ತದೆಯೋ ಗೊತ್ತಿಲ್ಲ. ಸದ್ಯಕ್ಕೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಜಿ. ಟಿ. ದೇವೇಗೌಡರು ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಜೆಡಿಎಸ್‌ನ ನಾಯಕರು ಕೂಡ ಗಂಭೀರವಾಗಿ ಪರಿಗಣಿಸಿಲ್ಲ. ಹಾಗಾಗಿ ಬಂಡಾಯದ ಲಾಭನಷ್ಟಗಳು ಮತ್ತು ಮುಂದಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ತಿಳಿಯ ಬೇಕಾದರೆ ಇನ್ನೊಂದಷ್ಟು ದಿನಗಳ ಕಾಲ ಕಾಯಲೇ ಬೇಕಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+