ಮೈಸೂರಿನಲ್ಲಿ ಈ ಶನಿವಾರ 'ರಬ್ಡಿ' ನಾಟಕ ಪ್ರದರ್ಶನ
ಮೈಸೂರು, ಜೂನ್ 13: ರಂಗವರ್ತುಲ ರಂಗ ತಂಡ ಪ್ರಸ್ತುತಪಡಿಸುವ ರಾಷ್ಟ್ರ ಪ್ರಶಸ್ತಿ ವಿಜೇತ 'ರಬ್ಡಿ' ಕನ್ನಡ ಹಾಸ್ಯ ನಾಟಕವು ಇದೇ ಜೂನ್ 15, ಶನಿವಾರದಂದು ಮೈಸೂರಿನಲ್ಲಿ ಪ್ರದರ್ಶನಗೊಳ್ಳಲಿದೆ.
ಹಲವಾರು ಯಶಸ್ವೀ ಪ್ರಯೋಗಗಳ ಬೆನ್ನಲ್ಲೇ ರಂಗ ವರ್ತುಲ ರಂಗತಂಡ, 'ರಬ್ಡಿ' ನಾಟಕದ 53ನೇ ಪ್ರಯೋಗವನ್ನು ಇದೇ ಮೊದಲ ಬಾರಿಗೆ ಮೈಸೂರಿನ ರಂಗಾಸಕ್ತರಿಗೆ ಹೊತ್ತುತಂದಿದೆ.
ಮಣ್ಣು ಜಲ್ಲಿ ಹೊತ್ತು ಜೀವನ ಸಾಗಿಸುವ ಸಾವಂತ್ರಿ ಮತ್ತವಳ ಬುದ್ಧಿಮಾಂದ್ಯ ಅಂಗವಿಕಲ ಮಗಳು ಪುಟ್ಟಕ್ಕನ ಸುತ್ತ ರಬ್ಡಿ ಬೆಳೆಯುತ್ತಾ ಸಾಗುತ್ತದೆ. ಪುಟ್ಟಕ್ಕನ ಭವಿಷ್ಯದಲ್ಲಿ ತಾನು ಕಾಣುವ ಕನಸುಗಳು ನನಸಾಗಲು ಸಾಧ್ಯವಿಲ್ಲವೆಂಬ ಅರಿವಿದ್ದರೂ, ಛಲಬಿಡದೆ ಆ ಕನಸುಗಳ ಬೆನ್ನೇರಿ ಮುನ್ನುಗ್ಗುವ ಸಾವಂತ್ರಿಯ ಬದುಕ ಪ್ರೀತಿಸುವ ಬಗೆ ಮಾದರಿಯಾಗಿ ನಿಲ್ಲುತ್ತದೆ.

ಪುಟ್ಟಕ್ಕನನ್ನು ವಿಶೇಷ ಶಾಲೆಗೆ ಸೇರಿಸುವ ಸಲುವಾಗಿ, ಅದಕ್ಕೆ ತಗುಲುವ ವೆಚ್ಚ ಭರಿಸಲು ಓರ್ವ ಐಟಿ ಉದ್ಯೋಗಿ ದಂಪತಿಗಳಿಗೆ ಬಾಡಿಗೆ ತಾಯಿಯಾಗಲು ಸಾವಂತ್ರಿ ಮುಂದಾಗುತ್ತಾಳೆ. ನೈಸರ್ಗಿಕ ಹಾಗು ಪ್ರಾಕೃತಿಕ ಕ್ರಿಯೆಗಳ ವಿರುದ್ಧದ ಮನುಷ್ಯನ ಸೆಣೆಸಾಟ, ತಾಯಿ-ಮಗು ನಡುವಣ ಅವಿನಾಭಾವ ಸಂಬಂಧ ಹಾಗು ತಾಯ್ತನದ ಸೂಕ್ಷ್ಮ ಸಂವೇದನೆಗಳ ಸುತ್ತಾ ರಬ್ಡಿ ತನ್ನನ್ನ ತಾನು ವಿಸ್ತರಿಸಿಕೊಳ್ಳುತ್ತಾ ಸಾಗುತ್ತದೆ. ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯುವ ಆ ಐಟಿ ಉದ್ಯೋಗಿ ದಂಪತಿಗಳ ಪ್ರಯತ್ನ ಸಫಲವಾಗುವುದೆ? ಸಾವಂತ್ರಿಯು ಆ ದಂಪತಿಗಳಿಗೆ ಮಗು ಹೆತ್ತು ಕೊಡುವಳೇ ? ಸಾವಂತ್ರಿಯ ಕನಸುಗಳು ನನಸಾಗುವುದೆ ? ಇವೆಲ್ಲವೂ ನಾಟಕದಲ್ಲಿ ಸೂಕ್ಷ್ಮವಾಗಿ ಮಿಳಿತಗೊಂಡ ಅಂಶಗಳು.
ನಾಟಕದ ಹೆಸರು: ರಬ್ಡಿ
ರಚನೆ - ನೌಶೀಲ್ ಮೆಹ್ತಾ, ನಿತೀಶ್ ಶ್ರೀಧರ್ ಹಾಗು ಹೇಮಲತಾ ಲೋಕೇಶ್
ನಿರ್ದೇಶನ : ನಿತೀಶ್ ಶ್ರೀಧರ್
ಅಭಿನಯಿಸುವ ತಂಡ : ರಂಗ ವರ್ತುಲ
ಸಂಗೀತ: ರಘುನಂದನ್ ರಾಮಕೃಷ್ಣ
ದಿನಾಂಕ ಮತ್ತು ಸಮಯ : ಜೂನ್ 15, 2019, ಶನಿವಾರ ಸಂಜೆ 7:00
ಸ್ಥಳ : ಕಿರು ರಂಗಮಂದಿರ, ಕಲಾಮಂದಿರ, ಮೈಸೂರು
ಟಿಕೆಟ್ ಮುಂಗಡ ಕಾಯ್ದಿರಿಸುವಿಕೆಗೆ : 7349574448












Click it and Unblock the Notifications