ಬಿಟ್ ಕಾಯಿನ್ ಕೇಸ್ ಮಾಯಾವಿ ತರ; ವಿಶ್ವನಾಥ್
ಮೈಸೂರು, ನವೆಂಬರ್ 18; " ಬಿಟ್ ಕಾಯಿನ್ ಪ್ರಕರಣದ ಕುರಿತು ಕೇವಲ ಎರಡು ಸಾಕ್ಷಿ ಕೊಡಿ. ತನಿಖೆಗೆ ನಾನೇ ಒತ್ತಾಯ ಮಾಡುತ್ತೇನೆ" ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಿಧಾನ ಪರಿಷತ್ ಸದಸ್ಯ, ಬಿಜೆಪಿ ನಾಯಕ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಗುರುವಾರ ಮೈಸೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, "ಸಿದ್ದರಾಮಯ್ಯ ಆರ್ಥಿಕ ಮಂತ್ರಿಯಾಗಿದ್ದವರು. ರೀಡೋ ಮಾಡಿದವರು. ಬಿಟ್ ಕಾಯಿನ್ ಏನು ಅಂತ ಗೊತ್ತಿದ್ದರೆ ಹೇಳಿ?" ಎಂದು ಸವಾಲು ಹಾಕಿದರು.
"15 ದಿವಸದ ನಂತರ ಸಾಕ್ಷಿ ಕೊಡುತ್ತೇನೆ ಅಂತ ಕುಮಾರಸ್ವಾಮಿ ಹೇಳುತ್ತಾರೆ. ದೊಡ್ಡ ನಾಯಕರು ಹಿಟ್ ಅಂಡ್ ರನ್ ಹೇಳಿಕೆ ನೀಡುತ್ತಿದ್ದಾರೆ. ಅನಾವಶ್ಯಕವಾಗಿ ಮುಖ್ಯಮಂತ್ರಿಗಳನ್ನು ಎಳೆಯುತ್ತಿದ್ದಾರೆ. ಅವರು ಬಹಳ ಸಮಾಧಾನದಿಂದ ರಾಜ್ಯವನ್ನು ಕೊಂಡೊಯ್ಯತ್ತಿದ್ದಾರೆ" ಎಂದರು.

"ಬಿಟ್ ಕಾಯಿನ್ ಹಗರಣದ ಬಗ್ಗೆ ಸಾಕ್ಷಿ, ಆಧಾರ ಇಲ್ಲ. ಬಿಟ್ ಕಾಯಿನ್ ಅಂದರೆ ಏನೂ ಅಂತಾ ಯಾರೂ ಹೇಳುತ್ತಿಲ್ಲ. ಕೇವಲ ಎರಡು ಸಾಕ್ಷಿ ಕೊಡಿ. ತನಿಖೆಗೆ ನಾನೇ ಒತ್ತಾಯ ಮಾಡುತ್ತೇನೆ" ಎಂದು ವಿಶ್ವನಾಥ್ ಹೇಳಿದರು.
"15 ದಿನ ಕಾಯಿರಿ ನಾನು ಸಾಕ್ಷಿ ತರುತ್ತೇನೆ ಎಂದು ಕುಮಾರಸ್ವಾಮಿ ಹೇಳುತ್ತಾರೆ. ಎಲ್ಲಿಂದ ತರ್ತಾರೆ ಸಾಕ್ಷಿನಾ?, ಬಿಟ್ ಕಾಯಿನ್ ಪ್ರಕರಣ ಯಾರಿಗೂ ಗೊತ್ತಿಲ್ಲದೆ ಮಾಯಾವಿ ತರ ಹೋಗುತ್ತಿದೆ. 2016 ರಲ್ಲಿ ಯುಬಿ ಸಿಟಿಯಲ್ಲಿ ಬಿಟ್ ಕಾಯಿನ್ ವಿಚಾರದ ಬಗ್ಗೆ ಗಲಾಟೆ ಆಗಿತ್ತು. ಸಿದ್ದರಾಮಯ್ಯ ಸಿಎಂ ಆಗಿದ್ದಾಗಿನಿಂದನೂ ಇದೆ. ಸಿದ್ದರಾಮಯ್ಯನವರೇ ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ. ಸಾಕ್ಷಿ ಕೊಡಿ ನಾನೇ ಮುಖ್ಯಮಂತ್ರಿಗಳನ್ನು ಒತ್ತಾಯ ಮಾಡುತ್ತೇನೆ" ಎಂದರು.
ಹಂಸಲೇಖ ಹೇಳಿಕೆ; "ಹಂಸಲೇಖ ಶ್ರೀಗಳ ಬಗ್ಗೆ ಯಾವ ರೀತಿ ಹೇಳಿದರೋ ನಮಗೂ ಅರ್ಥ ಆಗುತ್ತಿಲ್ಲ. ಹಂಸಲೇಖ ಕೂಡ ಕ್ಷಮೆ ಕೋರಿದ್ದಾರೆ. ಪೇಜಾವರ ಶ್ರೀಗಳ ಜೊತೆ ನನಗೆ ತುಂಬಾ ಆತ್ಮೀಯತೆ ಇತ್ತು. ಶ್ರೀಗಳ ಬಗ್ಗೆ ಅಪಾರ ಗೌರವ ಇದೆ. ಶ್ರೀಗಳ ಬಗ್ಗೆ, ಆಹಾರದ ಬಗ್ಗೆ ಮಾತನಾಡಿದ್ದಾರೆ. ಆಹಾರ, ಬಟ್ಟೆ, ದೇವರ ಆರಾಧನೆಯ ಬಗ್ಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ" ಎಂದು ವಿಶ್ವನಾಥ್ ಹೇಳಿದರು.
"ಈಗ ಕೆಲವರು ಹುಸಿ ಚಿಂತಕರು ಹುಟ್ಟಿಕೊಂಡಿದ್ದಾರೆ. ಶ್ರೀಗಳು ಬದುಕಿದ್ದರೆ ಏನೋ ಹೇಳುತ್ತಿದ್ದರು. ಆದರೆ ಶ್ರೀಗಳು ಸತ್ತ ಬಳಿಕ ಈ ರೀತಿ ಮಾತನಾಡುವುದು ಸರಿಯಲ್ಲ. ಈ ಪ್ರಕರಣಕ್ಕೆ ಸದ್ಯಕ್ಕೆ ಇತಿಶ್ರೀ ಹಾಡಬೇಕು. ಮತ್ತೆ ಮತ್ತೆ ಕಲುಷಿತ ಮಾಡಬೇಡಿ. ಈ ಪ್ರಕರಣವನ್ನು ಇಲ್ಲಿಗೆ ಬಿಡಿ" ಎಂದು ಕೈ ಮುಗಿದು ಮನವಿ ಮಾಡಿದರು.
ಪರಿಷತ್ ಚುನಾವಣೆ; "ಕಾಂಗ್ರೆಸ್ನಲ್ಲಿ ವಿಧಾನ ಪರಿಷತ್ ಟಿಕೆಟ್ ಪಡೆಯಲು 15 ಕೋಟಿ ಬೇಕು. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಟಿಕೆಟ್ ಬಯಸುವವರಿಗೆ ಈ ಮಾತು ಹೇಳಿದ್ದಾರೆ. ಟಿಕೆಟ್ ಬೇಕಾದರೆ ಒಂದು ಲಕ್ಷ ನಾನ್ ರಿಟನಬಲ್ ಫಂಡ್ ಕೊಡಬೇಕು. 15 ಕೋಟಿ ಬ್ಯಾಂಕ್ ಬ್ಯಾಲೆನ್ಸ್ ತೋರಿಸಿದವರಿಗೆ ಟಿಕೆಟ್ ಎಂದಿದ್ದಾರೆ. ಹೀಗಾದರೆ ಸಾಮಾಜಿಕ ನ್ಯಾಯ ಎಲ್ಲಿ ಸಿಗುತ್ತದೆ ಹೇಳಿ?" ಎಂದು ಪ್ರಶ್ನಿಸಿದರು.
ಸಂದೇಶ್ ನಾಗರಾಜ್ಗೆ ಬಿಜೆಪಿ ಟಿಕೆಟ್ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ಎಚ್. ವಿಶ್ವನಾಥ್, "ಇನ್ನೂ ಬಿಜೆಪಿಗೆ ಸೇರಿಲ್ಲ ಅವರಿಗೆ ಯಾಕೆ ಟಿಕೆಟ್?. ಸಂದೇಶ್ ನಾಗರಾಜ್ಗೂ ಬಿಜೆಪಿಗೂ ಏನು ಸಂಬಂಧ?. ಪಕ್ಷಕ್ಕೆ ಸೇರದವರಿಗೆ ಚುನಾವಣೆ ಟಿಕೆಟ್ ಕೊಡಲು ಹೇಗೆ ಸಾಧ್ಯ. ಕಡೇ ಗಳಿಗೆಯಲ್ಲಿ ಬಿಜೆಪಿ ಸೇರಿದರೆ ಟಿಕೆಟ್ ನೀಡುವುದು ಸರಿಯಲ್ಲ. ಸಂದೇಶ್ ನಾಗರಾಜ್ ಬಿಜೆಪಿ ಸೇರಿ ಕೆಲಸ ಮಾಡಲಿ. ಪಕ್ಷಕ್ಕೆ ದುಡಿಯುವವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬೇಕು" ಎಂದು ಒತ್ತಾಯಿಸಿದರು.












Click it and Unblock the Notifications