ನೇರಪಾವತಿ ಮಾಡದ ಕಾರಣ ಮೈಸೂರು ನಗರ ಪಾಲಿಕೆ ಪೌರಕಾರ್ಮಿಕರಿಂದ ಪ್ರತಿಭಟನೆ
ಮೈಸೂರು, ಆಗಸ್ಟ್ 3: ನೇರಪಾವತಿ ಮತ್ತು ಪಾಲಿಕೆ ಅನುದಾನದ ಪಾವತಿ ಅಡಿಯಲ್ಲಿ ಆಯ್ಕೆಯಾಗಿರುವ ಪೌರಕಾರ್ಮಿಕರಿಗೆ ಜಿಲ್ಲಾಧಿಕಾರಿಗಳು ಆದೇಶ ಮಾಡಿ ಮೂರು ತಿಂಗಳು ಕಳೆದರೂ ನೇರಪಾವತಿ ಮಾಡಿಲ್ಲದಿರುವುದನ್ನು ವಿರೋಧಿಸಿ, ವೇತನ ನೇರಪಾವತಿಗೆ ಒತ್ತಾಯಿಸಿ ಮೈಸೂರು ನಗರ ಪಾಲಿಕೆ ಖಾಯಂ ಹಾಗೂ ಗುತ್ತಿಗೆ ಪೌರಕಾರ್ಮಿಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಇಂದು ಮೈಸೂರು ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿ ಬಳಿಕ, ಮೇಯರ್ ತಸ್ನೀಂ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು, ನೇರಪಾವತಿ ಮತ್ತು ಪಾಲಿಕೆ ಅನುದಾನದ ಪಾವತಿ ಅಡಿಯಲ್ಲಿ ಆಯ್ಕೆಯಾಗಿರುವ ಪೌರಕಾರ್ಮಿಕರಿಗೆ ಜಿಲ್ಲಾಧಿಕಾರಿಗಳು 01/04/2020 ರಂದು ಆದೇಶ ಮಾಡಿದ್ದರೂ ಕೂಡ ಮೂರು ತಿಂಗಳು ಕಳೆದರೂ ಇಲ್ಲಿಯವರೆಗೂ ನೇರಪಾವತಿ ಮಾಡಿರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಬಳವನ್ನು ಪೌರಕಾರ್ಮಿಕರ ಖಾತೆಗೆ ಜಮಾ ಮಾಡಿರುವುದಿಲ್ಲ. ಈ ಕೂಡಲೇ ನೇರ ಪಾವತಿ ಮತ್ತು ಪಾಲಿಕೆ ಅನುದಾನ ಪಾವತಿ ಜಮಾ ಮಾಡಬೇಕು ಎಂದು ಒತ್ತಾಯಿಸಿದರು. ಇಲ್ಲದಿದ್ದಲ್ಲಿ ಎಲ್ಲಾ ವಾರ್ಡಿನ ಸ್ವಚ್ಛತೆ ಕೆಲಸವನ್ನು ಸ್ಥಗಿತಗೊಳಿಸಿ ನಗರ ಪಾಲಿಕೆಯ ಮುಂಭಾಗ ಪ್ರತಿಭಟನೆ ನಡೆಸಲಾಗುವುದು, ಇದಕ್ಕೆ ಆಸ್ಪದ ನೀಡದೆ ಈ ವಿಚಾರವಾಗಿ ಶೀಘ್ರದಲ್ಲಿ ಬಗೆಹರಿಸಿಕೊಡಿ ಎಂದು ಒತ್ತಾಯಿಸಿದರು.












Click it and Unblock the Notifications