Get Updates
Get notified of breaking news, exclusive insights, and must-see stories!

ಹುಣಸೂರು: ಜನ ಮತ ಬಹಿಷ್ಕಾರ ಮಾಡುತ್ತೇವೆ ಎನ್ನಲು ಕಾರಣ ಹಲವು

ಮೈಸೂರು, ಏಪ್ರಿಲ್ 16: ಹನುಮಜಯಂತಿ ವಿಚಾರವಾಗಿ ಇತ್ತೀಚೆಗೆ ಸುದ್ದಿಯಾಗಿದ್ದ ಹುಣಸೂರಿನಲ್ಲಿ ಚುನಾವಣೆಯ ಪ್ರಭಾವ ಅಷ್ಟೇನೂ ದಟ್ಟವಾಗಿಲ್ಲ. ಕೋಮು ಗಲಭೆಯ ತಿರುವು ಪಡೆಯುತ್ತಿರುವ ಈ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಕೈ ತೊರೆದು ತೆನೆ ಹೊತ್ತ ಪಕ್ಷಕ್ಕೆ ಸೇರಿದ ವಿಶ್ವನಾಥ್ ಸ್ಪರ್ಧೆಗಿಳಿಯಲಿದ್ದಾರೆ.

ಚುನಾವಣೆ ವೇಳೆ ಮನೆ - ಮನೆಗೂ ತೆರಳುತ್ತಿರುವ ಜನನಾಯಕರಿಗೆ ಇಲ್ಲಿನ ಮತದಾರ ಪ್ರಭು ಸಮಸ್ಯೆಗಳ ದೊಡ್ಡ ಪಟ್ಟಿಯನ್ನೇ ಸಿದ್ಧಮಾಡಿ ಕೊಡುತ್ತಿದ್ದಾನೆ. ಇನ್ನು ಇಲ್ಲಿನ ಜಗಲಿಕಟ್ಟೆಯ ಮೇಲೆ ಕುಳಿತ ಕೆಲವು ಹಿರಿಯರು ನಮ್ಮ ಸಮಸ್ಯೆ ಬಗೆಹರಿಸದ ಇವರಿಗೆ ನಾವೇಕೆ ಮತ ನೀಡಬೇಕೆಂದು ಪ್ರಶ್ನೆ ಮುಂದಿಡುತ್ತಿದ್ದಾರೆ.

ಹನಿ ನೀರಿಗೂ ತತ್ವಾರ

ಹನಿ ನೀರಿಗೂ ತತ್ವಾರ

ಇವರ ಈ ನಿರ್ಧಾರಕ್ಕೆ ಬಲವಾದ ಕಾರಣವೂ ಇದೆ. ಇಲ್ಲಿನ ನೀರಾವರಿ ಯೋಜನೆಗಳು ಸರಿಯಾಗಿ ಅನುಷ್ಠಾನಗೊಂಡಿಲ್ಲ. ಇಲ್ಲಿನ ಜನ ಕುಡಿಯುವ ಹಾಗೂ ಕೃಷಿಗೆ ನೀರು ಸಿಗದೇ ಸಂಕಟ ಅನುಭವಿಸುತ್ತಿದ್ದಾರೆ.

ಅದು ಈಗ ಉದ್ಭವಿಸಿದ ಸಮಸ್ಯೆಯಲ್ಲ. ಹಲವು ದಶಕಗಳಿಂದಲೂ ಇಲ್ಲಿನ ಜನರನ್ನು ಕಾಡುತ್ತಿದೆ. ಯಾವ ಶಾಸಕರಿಂದಲೂ ಪರಿಹಾರ ಮಾತ್ರ ಸಿಕ್ಕಿಲ್ಲ. ಕೆಲವೊಂದು ಯೋಜನೆ ಅರ್ಧಕ್ಕೆ ನಿಂತಿದ್ದರೆ, ಇನ್ನು ಕೆಲವು ಯೋಜನೆಗಳಿಗೆ ಅನುದಾನವೇ ಬಿಡುಗಡೆಯಾಗಿಲ್ಲ.

ಅಪೂರ್ಣಗೊಂಡ ಕಾಮಗಾರಿಗಳು

ಅಪೂರ್ಣಗೊಂಡ ಕಾಮಗಾರಿಗಳು

ಈವರೆಗೂ ಕ್ಷೇತ್ರದ ಅಭಿವೃದ್ಧಿಗಾಗಿ 1,300 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಅನುದಾನದ ರೂಪದಲ್ಲಿ ತರಲಾಗಿದೆ. ಆದರೆ ಇದ್ಯಾವುದೂ ಪೂರ್ಣಗೊಂಡಿಲ್ಲ. ಹನಗೋಡು ಲಕ್ಷ್ಮಣ ತೀರ್ಥ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಹನಗೋಡು ಅಣೆಕಟ್ಟೆಯ ಮುಖ್ಯ ನಾಲೆ ಉದ್ದೂರು ಕಾಲುವೆ ದುರಸ್ತಿಗೊಳ್ಳದೆ ಅಚ್ಚುಕಟ್ಟು ಪ್ರದೇಶಕ್ಕೆ ಸರಿಯಾಗಿ ನೀರು ಹರಿಯುತ್ತಿಲ್ಲ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿ ಪರದಾಡುವಂತಾಗಿದೆ.

ಬಳಕೆಗೆ ಅಯೋಗ್ಯ ನೀರು

ಬಳಕೆಗೆ ಅಯೋಗ್ಯ ನೀರು

ಲಕ್ಷ್ಮಣ ತೀರ್ಥ ನದಿ ಶುದ್ಧೀಕರಣ ಪೂರ್ಣ ಪ್ರಮಾಣದಲ್ಲಿ ನಡೆಯಲಿಲ್ಲ. ಅದಕ್ಕೆ ಸರಿಯಾಗಿ ಅನುದಾನವೂ ಬಿಡುಗಡೆಯಾಗಿಲ್ಲ. ಕಲುಷಿತಗೊಂಡಿರುವ ಈ ನದಿಯ ಶುದ್ಧೀಕರಣಕ್ಕೆ ಹೋರಾಟ ನಡೆಯುತ್ತಲೇ ಇದೆ.

ಇದರ ನಡುವೆಯೂ ನದಿಗೆ ಹುಣಸೂರು ನಗರದಿಂದ ಕೊಳಚೆ ನೀರು ಹರಿಯುತ್ತಲೇ ಇದೆ. ಬಳಸಲು ಯೋಗ್ಯವಲ್ಲದ ನದಿ ಎಂದು ಪರಿಸರ ಇಲಾಖೆ ಪ್ರಮಾಣಪತ್ರದಲ್ಲಿ ಚಾಟಿ ಬೀಸಿದೆ. ಸಂಪೂರ್ಣ ಹಸಿರು ಪಾಚಿ ಬೆಳೆದು ದುರ್ವಾಸನೆ ಬೀರುವ ಹಂತಕ್ಕೆ ತಲುಪಿದೆ.

ಮತದಾನ ಬಹಿಷ್ಕಾರದ ಬೆದರಿಕೆ

ಮತದಾನ ಬಹಿಷ್ಕಾರದ ಬೆದರಿಕೆ

ಇಲ್ಲಿ ಗಿರಿಜನರ ಸಮಸ್ಯೆಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ. ನಾಗಾಪುರ ಗಿರಿಜನರ ಪುನರ್ವಸತಿ ಕೇಂದ್ರದಲ್ಲಿ ಕುಡಿಯುವ ನೀರಿನ ತತ್ವಾರ ಸೇರಿ ಹಲವು ಸಮಸ್ಯೆಗಳಿವೆ. ಮತದಾನ ಬಹಿಷ್ಕರಿಸುವುದಾಗಿ ಈಚೆಗೆ ಪ್ರತಿಭಟನೆ ಕೂಡ ನಡೆಸಿದ್ದರು.

ನಿತ್ಯ ನರಕ ಬದುಕು

ನಿತ್ಯ ನರಕ ಬದುಕು

ಇತ್ತ ಪಟ್ಟಣ ಬಿಟ್ಟು ಗ್ರಾಮೀಣ ಪ್ರದೇಶದೊಳಗೆ ತೆರಳಿದರೆ ದರ್ಶನವಾಗುವುದು ಹದಗೆಟ್ಟ ರಸ್ತೆಗಳು. ಕೆಲ ರಸ್ತೆಗಳು ಇಂದಿಗೂ ಡಾಂಬರು ಕಂಡಿಲ್ಲ. ಕೆಲ ರಸ್ತೆಗಳ ಟಾರ್ ಕಿತ್ತು ಹೋಗಿ ವರ್ಷಗಳೇ ಉರುಳಿವೆ. ಈ ರಸ್ತೆಗಳು ಈ ಭಾಗದ ಜನರ ಬಾಳಿಗೆ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.

ಆನೆ ಮತ್ತು ಮಾನವ ಸಂಘರ್ಷ ನಿಯಂತ್ರಣಕ್ಕೆ ರೈಲು ಹಳಿ ತಡೆಗೋಡೆ ನಿರ್ಮಿಸಲು 14.50 ಕೋಟಿ ರೂಪಾಯಿ ಈಗಾಗಲೇ ಮಂಜೂರು ಮಾಡಲಾಗಿದೆ. ಅದು ಕೂಡ ಇದುವರೆಗೂ ನಿರ್ಮಾಣವಾಗಿಲ್ಲ.

ಎಲ್ಲಿ ಹೋಯ್ತು ಸಾವಿರಾರು ಕೋಟಿ?

ಎಲ್ಲಿ ಹೋಯ್ತು ಸಾವಿರಾರು ಕೋಟಿ?

ಈ ಕುರಿತಾಗಿ ಮತದಾರರನ್ನು ಕೇಳಿದರೆ, ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಸಾವಿರಾರು ಕೋಟಿ ಅನುದಾನ ತಂದಿರುವುದಾಗಿ ಹೇಳುತ್ತಿದ್ದರೂ ಅಭಿವೃದ್ಧಿ ಕಣ್ಣಿಗೆ ಕಾಣುತ್ತಿಲ್ಲ. ನಗರದಲ್ಲಿ ಸರಿಯಾದ ಶೌಚಾಲಯಗಳಿಲ್ಲ. ಗ್ರಾಮೀಣ ಭಾಗದ ಶಾಲೆಗಳ ದುಸ್ಥಿತಿ ಹೇಳತೀರದು ಎನ್ನುತ್ತಾರೆ.

ಮತ್ತೆ ಗೆಲ್ಲುವ ಭರವಸೆ

ಮತ್ತೆ ಗೆಲ್ಲುವ ಭರವಸೆ

'2013ರಲ್ಲಿ ಕ್ಷೇತ್ರಕ್ಕೆ ನೀಡಿದ ಬಹುತೇಕ ಭರವಸೆಗಳನ್ನು ಈಡೇರಿಸಿದ ತೃಪ್ತಿ ಇದೆ. ರೈತ ಮತ್ತು ಆದಿವಾಸಿ ಗಿರಿಜನರ ಕೃಷಿ ಭೂಮಿಗೆ ಸಾಗುವಳಿ ನೀಡಿದ್ದೇನೆ. ಹೀಗೆ ಅನೇಕ ಜನಾನುರಾಗಿ ಕೆಲಸಗಳನ್ನು ಮಾಡಿದ್ದೇನೆ. ಇದು ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎನ್ನುತ್ತಾರೆ ಶಾಸಕ ಎಚ್.ಪಿ ಮಂಜುನಾಥ್.

ಕಾಂಗ್ರೆಸ್‌ಗೆ ಕೊನೆಯ ಮೊಳೆ

ಕಾಂಗ್ರೆಸ್‌ಗೆ ಕೊನೆಯ ಮೊಳೆ

ಜೆಡಿಎಸ್ ಮುಖಂಡ ಎಚ್. ವಿಶ್ವನಾಥ್ ಅವರನ್ನು ಸಂಪರ್ಕಿಸಿದಾಗ ಅವರು ಹೇಳಿದ್ದಿಷ್ಟು, ತಾಲೂಕಿನಲ್ಲಿ ಶಾಶ್ವತ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. ಸಾವಿರ ಕೋಟಿಗೂ ಅಧಿಕ ಅನುದಾನ ತಂದಿದ್ದೇನೆ ಎನ್ನುವ ಶಾಸಕರು, ಸರ್ಕಾರಿ ನೌಕರರ ಸಂಬಳ ಸೇರಿ ಹೇಳುತ್ತಿರಬೇಕು. ಕಾಂಗ್ರೆಸ್ ಸರ್ಕಾರಕ್ಕೆ ಮತದಾರರ ಕಡೆಯ ಮೊಳೆ ಹೊಡೆಯುವ ಹಂತದಲ್ಲಿ ಹೊಸ ಯೋಜನೆಗಳಿಗೆ ಚಾಲನೆ ನೀಡಿದ್ದು ವಿಪರ್ಯಾಸ ಎನ್ನುತ್ತಾರೆ.

ಒಟ್ಟಾರೆ ಸಮಸ್ಯೆಯನ್ನು ದಾಳವಾಗಿಟ್ಟುಕೊಂಡು ಉಭಯ ಪಕ್ಷಗಳು ಪರಸ್ಪರ ವಾಕ್ಸಮರ ನಡೆಸುತ್ತಿವೆ. ಇನ್ನಾದರೂ ಆಯ್ಕೆಯಾಗುವ ಶಾಸಕರು ಸಮಸ್ಯೆಗಳನ್ನು ಬಗೆಹರಿಸುವತ್ತ ಲಕ್ಷ್ಯ ಹರಿಸಬೇಕು ಎನ್ನುವುದು ಮತದಾರನ ಆಶಯ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+