ಮೈಸೂರು; ಹೃದಯಾಘಾತದಿಂದ ಜೀವಾವಧಿ ಶಿಕ್ಷೆಯಲ್ಲಿದ್ದ ಕೈದಿ ಸಾವು
ಮೈಸೂರು, ಅಕ್ಟೋಬರ್ 23: ಮೈಸೂರು ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಕೈದಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಮೂಲದ ರಾಮರಾಜ್ ಅಲಿಯಾಸ್ ರಾಮನಾರಾಯಣ (45) ಮೃತ ಕೈದಿ. ಕಾರಾಗೃಹದಲ್ಲಿದ್ದ ರಾಮರಾಜ್ ಗೆ ಸೋಮವಾರ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಕೈದಿಗೆ ಚನ್ನರಾಯಪಟ್ಟಣ ಫಾಸ್ಟ್ ಟ್ರಾಕ್ ಕೋರ್ಟ್ ನಲ್ಲಿ ಐಪಿಸಿ ಸೆಕ್ಷನ್ 302ರ ಅನ್ವಯ ಜೀವಾವಧಿ ಶಿಕ್ಷೆ ಮತ್ತು 20 ಸಾವಿರ ದಂಡ ವಿಧಿಸಿ 2014ರ ಅಕ್ಟೋಬರ್ 16ರಂದು ನ್ಯಾಯಾಧೀಶರು ತೀರ್ಪು ನೀಡಿದ್ದರು. ಮೃತನ ಹುಟ್ಟೂರು ಉತ್ತರ ಪ್ರದೇಶವಾಗಿರುವ ಕಾರಣ ಸಂಬಂಧಿಕರು ಪತ್ತೆ ಆಗಿಲ್ಲ. ಶವವನ್ನು ಕೆ.ಆರ್.ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.

ನಂಜನಗೂಡಿನ ವ್ಯಾಪಾರಿ ಆತ್ಮಹತ್ಯೆ: ಸಾಲಬಾಧೆ ತಾಳಲಾರದೆ ನಂಜನಗೂಡು ನಗರದ ವ್ಯಾಪಾರಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೃತರನ್ನು ಚಾಮುಂಡಿ ಟೌನ್ಶಿಪ್ ಬಡಾವಣೆ ನಿವಾಸಿ, ಸೂರ್ಯ ಟ್ರೇಡರ್ಸ್ ಮಾಲೀಕ ಲೋಹಿತ್ (40) ಎಂದು ಗುರುತಿಸಲಾಗಿದೆ. ವ್ಯಾಪಾರದ ಉದ್ದೇಶಕ್ಕಾಗಿ ಅಂಗಡಿ ಮೇಲೆ ಕೈ ಸಾಲ ತೆಗೆದುಕೊಂಡಿದ್ದಲ್ಲದೆ ಇತ್ತೀಚೆಗೆ ನೂತನವಾಗಿ ಮನೆ ನವೀಕರಣ ಮಾಡುವ ಸಲುವಾಗಿಯೂ ಖಾಸಗಿಯಾಗಿ ಸಾಲ ಮಾಡಿದ್ದರು. ಇದರಿಂದ ಚಿಂತೆಗೊಳಗಾಗಿದ್ದರು.
ಸೋಮವಾರ ರಾತ್ರಿ ಊಟ ಮಾಡಿ ಮಲಗಿದ್ದ ಪತಿ ಬೆಳಗಿನ ಜಾವ ಮನೆಯಲ್ಲಿ ಕಾಣಲಿಲ್ಲ. ಗಾಬರಿಗೊಂಡು ಹುಡುಕಾಟ ನಡೆಸಿದಾಗ ಮನೆಯ ಮೇಲಿನ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ಸ್ಥಳಕ್ಕೆ ಸಿಪಿಐ ಶೇಖರ್ ನೇತೃತ್ವದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮರಣೋತ್ತರ ಬಳಿಕ ವಾರಸುದಾರರಿಗೆ ಹಸ್ತಾಂತರಿಸಿದರು.












Click it and Unblock the Notifications