ಜೂ.21ರಂದು ಪ್ರಧಾನಿ ಮೈಸೂರಿಗೆ: ರಸ್ತೆಗಳಿಗೆ ಡಾಂಬರ್ ಭಾಗ್ಯ
ಮೈಸೂರು, ಜೂ.4: ಯೋಗ ದಿನಾಚರಣೆಯಂದು ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಗುಂಡಿ ಬಿದ್ದ ರಸ್ತೆಗಳಿಗೆ 'ಯೋಗಾಯೋಗ' ಕೂಡಿ ಬಂದಿದೆ. ತಿಂಗಳುಗಟ್ಟಲೆ ದುರಸ್ತಿಯಿಂದ ಅಂದ ಕಳೆದುಕೊಂಡಿದ್ದ ರಸ್ತೆಗಳಿಗೆ ಇದೀಗ ದುರಸ್ತಿ ಭಾಗ್ಯ ಸಿಕ್ಕಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ ಹಾಗೂ ಶಾಸಕರು ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ್ದು, ರಸ್ತೆ ದುರಸ್ತಿಗೆ ಸರಕಾರದಿಂದಲೂ ಹಣ ಮಂಜೂರಾಗುವುದು ಖಾತ್ರಿಯಾಗಿದೆ. ಆ ಮೂಲಕ ಜೂ.21ರೊಳಗೆ ನಗರದ ಒಂದಷ್ಟು ರಸ್ತೆಗಳು ಅಭಿವೃದ್ಧಿ ಕಾಣುವುದು ನಿಶ್ಚಿತವಾಗಿದೆ.
ಮೈಸೂರಿನ ಯೋಗ ದಿನಾಚರಣೆಯ ಕಾರ್ಯಕ್ರಮವನ್ನು ಭಾರತ ಸರ್ಕಾರ ಹಾಗೂ ಆಯುಷ್ ಮಂತ್ರಾಲಯದಿಂದ ಆಯೋಜಿಸಲಾಗುತ್ತಿದೆ. ಯೋಗ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯವಶ್ಯಕ. ಯೋಗವನ್ನು ಸಾಮರಸ್ಯಕ್ಕಾಗಿ ಹಾಗೂ ಮನಃಶಾಂತಿಗಾಗಿ ಮಾಡಬೇಕು. ಮೈಸೂರಿನಲ್ಲಿ ಜೂನ್ 20 ಮತ್ತು 21 ರಂದು ಯೋಗ ವಸ್ತುಪ್ರದರ್ಶನವನ್ನು ಸಹ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಏರ್ಪಡಿಸಲಾಗುತ್ತದೆ. ಈ ವಸ್ತು ಪ್ರದರ್ಶನದಲ್ಲಿ ಡಿಜಿಟಲ್ ಎಕ್ಸಿಬಿಷನ್ ಹಾಗೂ ಸ್ಟಾಲ್ ಎಕ್ಸಿಬಿಷನ್ ಎಂದು ಎರಡು ಭಾಗಗಳಲ್ಲಿ ಇರುತ್ತದೆ. ಜೂ.21ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಮೈಸೂರಿನ ರಸ್ತೆಗಳಿಗೆ ದುರಸ್ತಿ ಭಾಗ್ಯ ಲಭಿಸಿದೆ. ಸದ್ಯ 15 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ಮಾಡುವ ಪ್ರಸ್ತಾವವನ್ನು ನಗರಪಾಲಿಕೆ ಸರಕಾರಕ್ಕೆ ಸಲ್ಲಿಸಿದೆ. ಜೊತೆಗೆ ಕಾಮಗಾರಿ ಶುರು ಮಾಡಲು ಸರಕಾರ ಅನುಮತಿ ನೀಡಿರುವುದರಿಂದ ಪಾಲಿಕೆ ಕೆಲಸವನ್ನು ಚುರುಕುಗೊಳಿಸಿದೆ.

ಜೂ.21ರಂದು ವಿವಿಧ ಆಸನಗಳನ್ನು ಪ್ರಧಾನಿ ಪ್ರದರ್ಶನ
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅರಮನೆ ಮುಂಭಾಗ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿದೆ. ಜೂ.21ರಂದು ವಿವಿಧ ಆಸನಗಳನ್ನು ಪ್ರಧಾನಿ ಪ್ರದರ್ಶನ ಮಾಡುವ ಮೂಲಕ ಯೋಗ ಮಹತ್ವವನ್ನು ಸಾರಲಿದ್ದಾರೆ. ಈ ಹಿನ್ನೆಲೆಯಲ್ಲಿ ಅರಮನೆ ಸುತ್ತಮುತ್ತ ಇರುವ ರಾಜಪಥ ಹಾಗೂ ಮೋದಿ ಅವರು ಸಾಗುವ ರಸ್ತೆ ಮಾರ್ಗಗಳಿಗೆ ದುರಸ್ತಿ ಭಾಗ್ಯ ಲಭಿಸಿದೆ. ಈಗಾಗಲೇ ನಗರಪಾಲಿಕೆ ಆಯುಕ್ತರು ರಾಜಪಥ ರಸ್ತೆಯನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ವರ್ಷಗಟ್ಟಲೆ ದುರಸ್ತಿ ಇಲ್ಲದೆ ಸೊರಗಿದ್ದ ರಾಜಪಥಕ್ಕೆ ಇದೀಗ ಮೋದಿ ಆಗಮನದಿಂದ 'ಯೋಗ' ಬಂದಂತಾಗಿದೆ.

ಮಳೆಗಾಲದ ನಂತರ ಹದಗೆಟ್ಟ ರಸ್ತೆಗಳ ದುರಸ್ತಿ
ಜೂ.21ರೊಳಗೆ ನಗರದ ಹೃದಯ ಭಾಗದ ಹದಗೆಟ್ಟಿರುವ ರಸ್ತೆಗಳನ್ನು ದುರಸ್ತಿಗೆ ಈಗಾಗಲೇ ಕಾಮಗಾರಿ ಶುರುವಾಗಿದೆ. ಕಳೆದ ಮಳೆಗಾಲದ ನಂತರ ಹದಗೆಟ್ಟ ರಸ್ತೆಗಳನ್ನು ದುರಸ್ತಿಗೊಳಿಸಲಾಗುವುದು, ಸದ್ಯದಲ್ಲೇ ಟೆಂಡರ್ ಕರೆಯುತ್ತೇವೆ ಎಂದು ಮೈಸೂರು ಮಹಾನಗರ ಪಾಲಿಕೆ ನೀಡಿದ ಭರವಸೆ ಈಡೇರಿರಲಿಲ್ಲ. ಜತೆಗೆ ಈ ಬಾರಿ ಪೂರ್ವ ಮುಂಗಾರಿನಲ್ಲೂ ಸತತ ಮಳೆಯಾಗಿದ್ದು, ಮುಂದಿನ ತಿಂಗಳೇ ಮುಂಗಾರು ಪ್ರವೇಶ ಮಾಡುವುದರಿಂದ ಅಷ್ಟರೊಳಗೆ ರಸ್ತೆ ದುರಸ್ತಿ ಅಸಾಧ್ಯ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಜತೆಗೆ ಕೆಲ ದಿನಗಳ ಹಿಂದೆ ಕೆಲವು ರಸ್ತೆಗಳಿಗೆ ತೇಪೆ ಹಾಕುವ ಕಾರ್ಯ ನಡೆಯಿತು. ಆದರೆ, ಮಳೆ ಬರುತ್ತಿದ್ದಂತೆ ಉಳಿದ ಭಾಗ ಗುಂಡಿ ಬಿದ್ದಿದೆ. ಗುಂಡಿಗಳಲ್ಲಿ ನೀರು ನಿಂತು ಸಮಸ್ಯೆ ಎದುರಾಗಿದೆ.
''ಪ್ರಧಾನಿ ಮೋದಿ ಅವರು ಅರಮನೆ ಆವರಣದಲ್ಲೇ ಯೋಗ ಪ್ರದರ್ಶನ ಮಾಡುವುದರಿಂದ ರಾಜಪಥವನ್ನು ದುರಸ್ತಿಗೊಳಿಸುವ ಕೆಲಸ ಕೈಗೆತ್ತಿಗೊಂಡಿದ್ದೇವೆ. ರಾಜಪಥದ ಟೈಲ್ಸ್ ಕಿತ್ತು ಬಂದಿದೆ. ಅಲ್ಲಲ್ಲಿ ಗುಂಡಿ ಬಿದ್ದಿದೆ. ಇದನ್ನು ಸರಿಪಡಿಸಲು ಪಾಲಿಕೆ ನಿರ್ಧರಿಸಿದ್ದು, ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದೆ,'' ಎಂದು ನಗರಪಾಲಿಕೆ ಆಯುಕ್ತ ಲಕ್ಷ್ಮೀಕಾಂತರೆಡ್ಡಿ ತಿಳಿಸಿದ್ದಾರೆ.

ಏನೆಲ್ಲಾ ದುರಸ್ತಿ ಆಗಬೇಕು?
ರಾಜಪಥದ ಪಾದಚಾರಿ ಮಾರ್ಗದ ಕೆಳಭಾಗದಲ್ಲಿ ಬಾಕ್ಸ್ ಚರಂಡಿ ನಿರ್ಮಿಸಲಾಗಿತ್ತು. ಅದರ ಮೇಲೆ ಟೈಲ್ಸ್ ಹಾಕಲಾಗಿತ್ತು. ಆ ಮೂಲಕ ಪಾದಚಾರಿಗಳು ಸಂಚಾರ ಮಾಡಲು ಅನುಕೂಲ ಕಲ್ಪಿಸಲಾಗಿತ್ತು. ಆದರೆ, ಟೈಲ್ಸ್ಗಳು ಕಿತ್ತು ಬಂದಿದ್ದು, ಮತ್ತೊಂದು ಕಡೆ ಮುರಿದು ಬಿದ್ದಿದೆ. ರಾತ್ರಿ ಈ ರಸ್ತೆಯಲ್ಲಿ ಹೋಗುವವರು ಗುಂಡಿ ನೋಡದೆ ಕೆಳಗೆ ಬಿದ್ದು, ಗಾಯ ಮಾಡಿಕೊಂಡ ಸಾಕಷ್ಟು ಉದಾಹರಣೆಗಳು ಇವೆ. ನಗರದ ಆಲ್ಬರ್ಟ್ ವಿಕ್ಟರ್ ರಸ್ತೆಯ ರಾಜಕುಮಾರ ಉದ್ಯಾನದ ಬದಿಯೂ ಕೆಲವು ಕಡೆ ಪಾದಚಾರಿ ಮಾರ್ಗ ಅವ್ಯವಸ್ಥೆಯ ಆಗರವಾಗಿದೆ. ಹಾಗಾಗಿ ಈ ಮಾರ್ಗವನ್ನು ಹೊಸದಾಗಿ ವಿನ್ಯಾಸಗೊಳಿಸಲು ನಗರ ಪಾಲಿಕೆ ನಿರ್ಧರಿಸಿದೆ.

ಆಗತ್ಯ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ
ಮೈಸೂರು ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿದೆ. ಯೋಗಕ್ಕೆ ಮೈಸೂರು ಸಾಕಷ್ಟು ಕೊಡುಗೆ ನೀಡಿದೆ. ಸಾಕಷ್ಟು ಯೋಗ ತಜ್ಣರು ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿದೇಶಿ ಪ್ರಜೆಗಳು ಮೈಸೂರಿಗೆ ಆಗಮಿಸಿ ಯೋಗ ಕಲಿಯುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಪ್ರಧಾನಿಯವರು ಯೋಗ ದಿನಾಚರಣೆಗೆ ಮೈಸೂರಿಗೆ ಆಗಮಿಸುತ್ತಿದ್ದು ಇದು ಮೈಸೂರಿನ ಗರಿಮೆಯನ್ನು ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಸಭೆಯ ನಂತರ ಕೇಂದ್ರ ಆಯುಷ್ ಇಲಾಖೆಯ ಅಧಿಕಾರಿಗಳ ತಂಡವು ಅರಮನೆ ಆವರಣಕ್ಕೆ ಭೇಟಿ ನೀಡಿ ಆಗತ್ಯ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಆಯುಷ್ ಇಲಾಖೆಯ ಆಯುಕ್ತರಾದ ರಾಮಚಂದ್ರ, ಮೈಸೂರು ಪೊಲೀಸ್ ಆಯುಕ್ತರಾದ ಚಂದ್ರಗುಪ್ತ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಪೂರ್ಣಿಮಾ, ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಲಕ್ಷ್ಮಿ ಕಾಂತರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್, ಅಪರ ಜಿಲ್ಲಾಧಿಕಾರಿ ಡಾ.ಮಂಜುನಾಥಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಯೋಗ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.












Click it and Unblock the Notifications