ರಾಜ್ಯ ರಾಜಕಾರಣದಲ್ಲೇ ಇರಲು ಸಂದೇಶ ಸಿಕ್ಕಿದೆ ಎಂದ ಪ್ರತಾಪ್ ಸಿಂಹ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂಥವರು ನೇಪಥ್ಯಕ್ಕೆ ಸರಿಯುತ್ತಿರುವ ಕಾರಣ ನನ್ನಂಥ 'ಯಂಗ್ ಬ್ಲಡ್' ರಾಜಕೀಯದಲ್ಲಿ ಬರಬೇಕಿದೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಪಾದಯಾತ್ರೆ ವಿಚಾರದಲ್ಲಿ ಒಡೆದ ಮನೆಯಾಗಿರುವ ಬಿಜೆಪಿಯಲ್ಲಿ ಇದೀಗ ಪ್ರತಾಪ್ ಸಿಂಹ ಹೇಳಿಕೆ ಮತ್ತಷ್ಟು ಸಂಚಲನ ಮೂಡಿಸಿದೆ. ಅಲ್ಲದೆ ಮೈಸೂರು ಪಾದಯಾತ್ರೆ ಬಳಿಕ, ಯತ್ನಾಳ್ ಆಯೋಜನೆ ಮಾಡಲು ಉದ್ದೇಶಿಸಿರುವ ಬಿಜೆಪಿ ಪಾದಯಾತ್ರೆ ಬಗ್ಗೆ ಕೂಡ ಪ್ರತಾಪ್ ಸಿಂಹ ಮಾತನಾಡಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪಕ್ಷಕ್ಕೆ ಬ್ಯಾನರ್, ಬಂಟಿಂಗ್ಸ್ ಕಟ್ಟಿಲ್ಲದೆ ಇರಬಹುದು. ಆದರೆ, ಯುವ ಸಮೂಹವನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿದ್ದೇನೆ. ಹಾಗಾಗಿ ಕೇಂದ್ರಕ್ಕೆ ಹೋಗಬೇಡಿ ರಾಜ್ಯದಲ್ಲಿ ಇರಿ ಎಂಬ ಸಂದೇಶ ಸಿಕ್ಕಿದೆ. ಅದಕ್ಕೆ ಇಲ್ಲೇ ಇದ್ದೇನೆ ಎಂದು ಹೇಳಿದರು.

ಬಸವಗೌಡ ಯತ್ನಾಳ್ ಅವರಂತಹ ದೊಡ್ಡ ನಾಯಕರು ಕರೆದ ಕಾರಣ ನಾನು ಸಭೆಗೆ ಹೋಗಿದ್ದೆ. ಯಾರ ನಾಯಕತ್ವ ಪ್ರದರ್ಶನವೂ ಅಲ್ಲ. ಪಾದಯಾತ್ರೆಗೆ ಹೈಕಮಾಂಡ್ ಅನುಮತಿ ಕೊಡುತ್ತದೆ. ಅವರ ಅನುಮತಿಯೊಂದಿಗೆ ಪಾದಯಾತ್ರೆ ಮಾಡುತ್ತೇವೆ. ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಎಲ್ಲರನ್ನು ಪಾದಯಾತ್ರೆಗೆ ಕರೆಯುವ ವಿಶ್ವಾಸವಿದೆ ಎಂದರು.
ನನಗೆ ಟಿಕೆಟ್ ಕೊಟ್ಟಿದ್ದು ಬಿಜೆಪಿಯಲ್ಲ
ನಾನು ಯಾರನ್ನೋ ಓಲೈಸಲು ಅಥವಾ ಮೆಚ್ಚಿಸಲು ರಾಜಕಾರಣ ಮಾಡುವುದಿಲ್ಲ. ಯಾರ ಮನೆ ಬಾಗಿಲೂ ತಟ್ಟಲ್ಲ. ನನಗೆ ಟಿಕೆಟ್ ಕೊಟ್ಟಿದ್ದು ಬಿಜೆಪಿ ಅಲ್ಲ, ರಾಷ್ಟ್ರೀಯ ಸ್ವಯಂ ಸೇವಾ ಸಂಘ. ನಾನು ಅನ್ಯಾಯದ ವಿರುದ್ಧವಷ್ಟೆ ರೆಬೆಲ್. ಪಕ್ಷದ ವಿರುದ್ಧ ರೆಬೆಲ್ ಅಲ್ಲ. ಬಿಜೆಪಿಯ ದೊಡ್ಡ ನಾಯಕರಿಗಿಂತ ನಾನು ಪಕ್ಷಕ್ಕೆ ಹಿರಿಯ. ಯಾಕೆಂದರೆ ನನ್ನ ತಂದೆಯೇ ಆರ್ಎಸ್ಎಸ್ನಲ್ಲಿದ್ದರು ಎಂದು ಹೇಳಿದರು.
ಬೆಳಗಾವಿಯಲ್ಲಿ ನಡೆದದ್ದು ಬಿಜೆಪಿ ಅತೃಪ್ತರ, ಬಂಡಾಯಗಾರರ ಸಭೆ ಅಲ್ಲ. ಬಿಜೆಪಿಯ ಜನಪ್ರಿಯ ನೇತಾರ ಬಸವಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ನಡೆದ ಸಭೆ. ನಾವು ಮೈಸೂರು ಚಲೋ ಪಾದಯಾತ್ರೆ ಅನುಭವ ಹಂಚಿಕೊಂಡಿದ್ದೇವೆ. ವಾಲ್ಮೀಕಿ ಹಗರಣದ ವಿರುದ್ಧ ಸರಿಯಾದ ಹೋರಾಟ ನಡೆದರೆ ಸಿಎಂ ಕುರ್ಚಿ ಅಲ್ಲಾಡುತ್ತದೆ. ಹಾಗಾಗಿ ಸೆಪ್ಟೆಂಬರ್ 17ಕ್ಕೆ ವಾಲ್ಮೀಕಿ ಹಗರಣ ವಿಚಾರದಲ್ಲಿ ಪಾದಯಾತ್ರೆ ಮಾಡಲು ನಿರ್ಧಾರವಾಗಿದೆ ಎಂದು ಮಾಹಿತಿ ನೀಡಿದರು.
ಗೌರಿ ಲಂಕೇಶ್ ಹತ್ಯೆ ಆರೋಪಿಯ ಭೇಟಿಯಾದ ವಿಚಾರ ಸಚಿವ ದಿನೇಶ್ ಗುಂಡೂರಾವ್ ಟ್ವೀಟ್ಗೆ ಪ್ರತಿಕ್ರಿಯಿಸಿ ಪ್ರತಾಪಸಿಂಹ, ರಾಜಕಾರಣಿಗಳ ಮಕ್ಕಳಿಗೆ ಅಪ್ಪಂದಿರ ಪ್ರತಿಭೆ ವರ್ಗಾವಣೆ ಆಗುವುದಿಲ್ಲ. ದಿನೇಶ್ ಗುಂಡೂರಾವ್ ವಿಚಾರದಲ್ಲೂ ಅದೇ ಆಗಿದೆ. ಪ್ರಕರಣದ ಆರೋಪಿಯನ್ನು ಮಾತಾಡಿಸುವುದೇ ತಪ್ಪಾ? ಎಂದರು.












Click it and Unblock the Notifications