ಹಿರಿಯ ಅಣ್ಣನಂತಿದ್ದ ಅನಂತ್ ಕುಮಾರ್ ನೆನೆದು ಪ್ರತಾಪ್ ಸಿಂಹ ಗದ್ಗದಿತ
ಮೈಸೂರು, ನವೆಂಬರ್. 12: ಕೇಂದ್ರ ಸಚಿವ ಅನಂತ್ ಕುಮಾರ್ ನಿಧನಕ್ಕೆ ಸಂಸದ ಪ್ರತಾಪ್ ಸಿಂಹ ಸಂತಾಪ ಸೂಚಿಸುವ ವೇಳೆ ಕಣ್ಣೀರಿಟ್ಟರು.
ಮಾಧ್ಯಮದವರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ನಾನು ಮೊದಲ ಬಾರಿಗೆ ಸಂಸದನಾಗಿ ಸದನಕ್ಕೆ ಹೋದಾಗ ಅವರು ನನಗೆ ಹಿರಿಯ ಅಣ್ಣನಂತೆ ಇದ್ದರು. ನನ್ನ ಕ್ಷೇತ್ರದ ಯಾವುದೇ ಕೆಲಸವನ್ನು ಮೊದಲ ಪ್ರಾಶಸ್ತ್ಯ ನೀಡಿ ಮಾಡಿಸಿಕೊಡುತ್ತಿದ್ದರು. ಅವರು ಕರ್ನಾಟಕಕ್ಕೂ ಕೇಂದ್ರ ಸರ್ಕಾರಕ್ಕೂ ಸೇತುವಾಗಿದ್ದರು.
ಅವರ ಸಾವು ಕೇವಲ ಬಿಜೆಪಿಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ ನಷ್ಟ. ಕಳೆದ ಅಧಿವೇಶನದಲ್ಲಿ ತೆಳ್ಳಗಾಗಿದ್ದರೇ ವಿನಃ ಬಹಳ ಲವಲವಿಕೆಯಿಂದ ಕೆಲಸ ಮಾಡುತ್ತಿದ್ದರು. ದೇವರು ಅವರನ್ನು ಇಷ್ಟುಬೇಗ ಕರೆಸಿಕೊಳ್ಳುತ್ತಾನೆ ಎಂದುಕೊಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಅನಂತ್ ಕುಮಾರ್ ರವರ ಕಾಲಾವಧಿಯಲ್ಲಿ ರಾಜ್ಯಕ್ಕೆ ಬೆಂಗಳೂರು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ, ಸಬರ್ ಬನ್ ರೈಲು, ಮೈಸೂರಿಗೆ ಪಾಸ್ಪೋರ್ಟ್ ಸೇವಾಕೇಂದ್ರ, ತ್ವರಿತಗತಿಯಲ್ಲಿ ಬೆಂಗಳೂರು-ಮೈಸೂರು ದಶಪಥ ರಸ್ತೆ ಜಾರಿಯಾಗಲು ಅನುಕೂಲವಾಯಿತು. ನಾವು ಜನರನ್ನು ಕಾಪಾಡಿದರೆ, ದೇವರು ನಮ್ಮನ್ನು ಕಾಪಾಡುತ್ತಾನೆ ಎನ್ನುತ್ತಾರೆ. ಆದರೆ, ಅನಂತ್ ಕುಮಾರ್ ವಿಚಾರದಲ್ಲಿ ಅದು ಸುಳ್ಳಾಗಿದೆ ಎಂದು ಗದ್ಗದಿತರಾದರು.












Click it and Unblock the Notifications