'ಉದ್ದೇಶ ಪೂರಕವಾಗಿಯೇ 'ಟಿಪ್ಪು ಎಕ್ಸ್ಪ್ರೆಸ್' ಹೆಸರು ಬದಲಾವಣೆ': ಪ್ರತಾಪ್ ಸಿಂಹ
ಮೈಸೂರು, ಅಕ್ಟೋಬರ್ 12: ಪರ ವಿರೋಧ ಚರ್ಚೆಗಳ ನಡುವೆಯೆ ಬೆಂಗಳೂರಿನಿಂದ ಮೈಸೂರು ನಡುವೆ ಸಂಚರಿಸುವ ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರನ್ನು ಬದಲಾಯಿಸಿ ಒಡೆಯರ್ ಎಕ್ಸಪ್ರೆಸ್ ಎಂದು ಕೇಂದ್ರ ಸರ್ಕಾರ ಮರುನಾಮಕರಣ ಮಾಡಿದೆ.
ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಟಿಪ್ಪು ಎಕ್ಸಪ್ರೆಸ್ ರೈಲಿನ ಹೆಸರನ್ನು ಬದಲಾಯಿಸುವಂತೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ಗೆ ಲಿಖಿತ ಮನವಿ ಸಲ್ಲಿಸಿದ್ದರು. ಸಂಸದರ ಮನವಿಗೆ ಕೇಂದ್ರ ರೈಲ್ವೇ ಇಲಾಖೆ ಸಮ್ಮತಿ ಸೂಚಿಸಿದ್ದು, ಟಿಪ್ಪು ಎಕ್ಸಪ್ರೆಸ್ ರೈಲಿನ ಹೆಸರನ್ನು ಒಡೆಯರ್ ಎಕ್ಸಪ್ರೆಸ್ ಎಂದು ಬದಲಾಯಿಸಿದೆ.
ಮೊದಲಿನಿಂದಲೂ ಸಂಸದ ಪ್ರತಾಪ್ ಸಿಂಹ ಟಿಪ್ಪು ಸುಲ್ತಾನ್ ಅವರ ಹೆಸರನ್ನು ವಿರೋಧಿಸುತ್ತಿದ್ದರು. ಸಂಸದ ನಡೆಯ ಬಗ್ಗೆ ಪರ ವಿರೋಧಗಳು ಇದ್ದರೂ ಸಹ ಸಂಸದ ಪ್ರತಾಪ್ ಸಿಂಹ ಟಿಪ್ಪು ಎಕ್ಸಪ್ರೆಸ್ ರೈಲಿನ ಹೆಸರನ್ನು ಉದ್ದೇಶ ಪೂರಕವಾಗಿಯೇ ಬದಲಾಯಿಸಿದ್ದೇನೆ ಎನ್ನುವುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಆ ಹೆಸರು ಉಳಿಸಿಕೊಳ್ಳಬೇಕಾದ ಅಗತ್ಯ ಏನಿತ್ತು..?
ಟಿಪ್ಪುಗೂ ಮೈಸೂರಿಗೂ ಏನು ಸಂಬಂಧ ಟಿಪ್ಪು ಏನು ಮೈಸೂರಿನವನಾ..? ಟಿಪ್ಪು ಶ್ರೀರಂಗಪಟ್ಟಣದವನು. ಮೈಸೂರಿಗೂ ಟಿಪ್ಪು ಸುಲ್ತಾನ್ಗೂ ಏನು ಸಂಬಂಧ..? ಮೈಸೂರು ಸಾಮ್ರಾಜ್ಯದಲ್ಲಿ ನಮ್ಮ ಮಹಾರಾಜರು ನೀಡಿರುವ ನೂರು ಕೊಡುಗೆಗಳನ್ನು ನಾನು ಹೇಳಬಲ್ಲೆ, ಆದರೆ ಟಿಪ್ಪು ಹೆಸರನ್ನು ಉಳಿಸಿಕೊಳ್ಳಬೇಕಿತ್ತು ಎಂದು ಹೇಳುವವರು, ಟಿಪ್ಪುವಿನ ಮೂರು ಕೊಡುಗೆಗಳನ್ನು ಹೇಳಲಿ. ಹಾಗಿದ್ದ ಮೇಲೆ ಮೈಸೂರು ರೈಲಿಗೆ ಟಿಪ್ಪು ಹೆಸರು ಯಾಕೆ ಇಡಬೇಕು. ಆ ಹೆಸರು ಉಳಿಸಿಕೊಳ್ಳಬೇಕಾದ ಅಗತ್ಯ ಏನಿತ್ತು..? ಎಂದು ಪ್ರಶ್ನಿಸಿದ್ದಾರೆ.

ಇದು ಭಾರತೀಯ ರೈಲ್ವೇಯಲ್ಲಿ ಮೊದಲ ಉದಾಹರಣೆ
ನಾನು ಉದ್ದೇಶ ಪೂರಕವಾಗಿಯೇ ಈ ರೈಲಿನ ಹೆಸರನ್ನು ಬದಲಿಸಿದ್ದೇನೆ. ಭಾರತೀಯ ರೈಲ್ವೆ ಇತಿಹಾಸದಲ್ಲಿ ಒಂದು ರೈಲಿಗೆ ಹೆಸರು ಕೊಟ್ಟ ಅಥವಾ ಇಟ್ಟ ಉದಾಹರಣೆಗಳಿವೆ ಹೊರತು, ಬದಲಾಯಿಸಿ ಇನ್ನೊಂದು ಹೆಸರು ಇಟ್ಟ ಉದಾಹರಣೆಗಳಿಲ್ಲ. ಇದು ಮೊದಲ ಉದಾಹರಣೆ. ಯಾಕಾಗಿ ಎಂದರೆ ಇಂದು ಮೈಸೂರಿನಲ್ಲಿ ಅಭಿವೃದ್ಧಿಯ ದ್ಯೋತಕಗಳ ಹಿಂದೆ ನಮ್ಮ ಮೈಸೂರು ಮಹಾರಾಜರ ಕೊಡುಗೆ ಇದೆ ಹೊರತು. ಟಿಪ್ಪುಗೂ ಮೈಸೂರಿಗೂ ಯಾವುದೇ ಸಂಬಂಧ ಇಲ್ಲ. ಅದಕ್ಕಾಗಿ ನಾನು ಉದ್ದೇಶ ಪೂರಕವಾಗಿಯೇ ಹೆಸರು ಬದಲಾಯಿಸಿದ್ದೇನೆ ಎಂದರು.

ಈಗಾಗಲೇ 10 ಟ್ರೈನ್ ತಂದಿದ್ದೇನೆ
ಇನ್ನು ನಾನು ಟಿಪ್ಪು ಎಕ್ಸೆಪ್ರೆಸ್ ರೈಲಿನ ಹೆಸರು ಬದಲಾಯಿಸುವ ಬದಲು ಹೊಸ ಟ್ರೈನ್ ತರಬಹುದಿತ್ತು ಎಂದೆಲ್ಲಾ ಮಾತನಾಡುತ್ತಿದ್ದಾರೆ. 2014ರಲ್ಲಿ ಮೈಸೂರಿನಿಂದ ವಾರಣಾಸಿಗೆ ತಂದತಹ ರೈಲಿನಿಂದ ಹಿಡಿದು, ಕಾಚಿಗುಡ ಎಕ್ಸ್ಪ್ರೆಸ್, ಪೋರ್ಚುಗಲ್ ಎಕ್ಸ್ಪ್ರೆಸ್ ಇರಬಹುದು, ಚೆನ್ನೈ ಸೂಪರ್ ಫಾಸ್ಟ್ ಇರಬಹದು, ಮೈಸೂರಿನ ಉದಯ ಪುರ ಟ್ರೈನ್ ಇರಬಹುದು, ಇವೆಲ್ಲಾ ಸೇರಿದಂತೆ 10 ರೈಲುಗಳನ್ನು ತಂದಿದ್ದೇನೆ ಎಂದು ತಾವು ತಮ್ಮ ಕ್ಷೇತ್ರಕ್ಕೆ ನೀಡಿದ ರೈಲ್ವೆ ಸೌಲಭ್ಯದ ಬಗ್ಗೆ ಹೇಳಿದರು.

ಟ್ರೈನ್ ತಂದಿದ್ದೇನೆ, ಟ್ರೈನ್ಗಳ ಹೆಸರು ಬದಲಿಸಿದ್ದೇನೆ
ಯಾವ ಸಂಸದನೂ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಟ್ರೈನ್ಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಸಾಧ್ಯವಿಲ್ಲ. ಆದರೆ ನಾನು ಆ ಕೆಲಸಗಳನ್ನು ಮಾಡಿದ್ದೇನೆ. ನನ್ನ ಕ್ಷೇತ್ರಕ್ಕೆ ಟ್ರೈನ್ಗಳನ್ನು ತಂದಿದ್ದೇನೆ, ಟ್ರೈನ್ಗಳ ಹೆಸರನ್ನು ಸಹ ಬದಲಿಸಿದ್ದೇನೆ. ಉದ್ದೇಶ ಪೂರಕವಾಗಿಯೇ ಈ ಟ್ರೈನ್ನ ಹೆಸರು ಬದಲಾಯಿಸಿದ್ದೇನೆ ಎಂದು ಬಹಳ ಸ್ಪಷ್ಟವಾಗಿ ಹೇಳುತ್ತೇನೆ ಎಂದು ಹೇಳಿದ್ದಾರೆ. ಇನ್ನು ಈ ಹೇಳಿಕೆಯ ವಿಡಿಯೋವನ್ನು ಸಂಸದ ಪ್ರತಾಪ್ ಸಿಂಹ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.












Click it and Unblock the Notifications