ಮಂಡ್ಯದಲ್ಲಿ ಪ್ರತಿಭಟನೆ: ಕಬಿನಿ ಜಲಾಶಯಕ್ಕೆ ಪೊಲೀಸ್ ಭದ್ರತೆ
ಮೈಸೂರು, ಸೆಪ್ಟೆಂಬರ್ 6: ಕೆಆರ್ಎಸ್ ನಿಂದ ತಮಿಳುನಾಡಿಗೆ ನೀರು ಬಿಡುವಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಬಂದ್ ಮೂಲಕ ಭಾರೀ ಪ್ರತಿಭಟನೆ ನಡೆಯುತ್ತಿದ್ದರೆ ಇತ್ತ ಎಚ್.ಡಿ.ಕೋಟೆ ತಾಲೂಕಿನ ಕಬಿನಿ ಜಲಾಶಯದಿಂದ ನೀರು ಬಿಡಬಾರದು ಎಂದು ಆಗ್ರಹಿಸಿ ರೈತರು ಮೈಸೂರು, ಮಾನಂದವಾಡಿ ರಸ್ತೆಯನ್ನು ಬಂದ್ ಮಾಡಿ ಹ್ಯಾಂಡ್ ಪೋಸ್ಟ್ ನಲ್ಲಿ ರಸ್ತೆತಡೆ ನಡೆಸಿದ್ದಾರೆ.
ಮತ್ತೊಂದೆಡೆ ರೈತರು ಜಲಾಶಯಕ್ಕೆ ಮುತ್ತಿಗೆ ಹಾಕುವ ಸಾಧ್ಯತೆ ಇರುವುದರಿಂದ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಈಗಾಗಲೇ ಕಬಿನಿ ಜಲಾಶಯದಿಂದ ನೀರನ್ನು ಬಿಡಲಾಗಿದೆ. ಈ ಬಾರಿ ಕೇರಳ ವೈನಾಡು ಪ್ರದೇಶದಲ್ಲಿ ಸರಿಯಾಗಿ ಮಳೆಯಾಗದೆ ಜಲಾಶಯಕ್ಕೆ ಹೆಚ್ಚಿನ ನೀರು ಬರಲಿಲ್ಲ.[ರಸ್ತೆ ತಡೆದು, ಜಯಲಲಿತಾ ಪ್ರತಿಕೃತಿ ದಹಿಸಿ ಪ್ರತಿಭಟನೆ]

ಜಲಾಶಯದ ನೀರಿನ ಸಾಮರ್ಥ್ಯ 2284 ಅಡಿಯಾಗಿದ್ದು, 19.5 ಟಿಎಂಸಿ ಅಡಿ ನೀರು ಸಂಗ್ರಹವಾಗಲಿದೆ. ಈಗ ಜಲಾಶಯದಲ್ಲಿ 2276 ಅಡಿ ಇದ್ದು, 14 ಟಿಎಂಸಿ ಸಂಗ್ರಹವಿದೆ. ಆದರೆ ಈ ನೀರಿನಲ್ಲಿ 8.5 ಟಿಎಂಸಿ ನೀರು ಡೆಡ್ ಸ್ಟೋರೆಜ್ ಆಗಿದೆ. ಬಳಕೆಗೆ 6 ಟಿಎಂಸಿ ಮಾತ್ರ ಲಭ್ಯವಾಗಲಿದೆ.
ಮೈಸೂರು ಮತ್ತು ಬೆಂಗಳೂರಿಗೆ ಕುಡಿಯಲು ನೀರನ್ನು ಒದಗಿಸಬೇಕಾಗಿದೆ. ಜಲಾಶಯ ತುಂಬದಿರುವುದರಿಂದ ಎಡದಂಡೆ ಮತ್ತು ಬಲದಂಡೆ ನಾಲೆಗಳ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೆಳೆ ಬೆಳೆಯಲು ಈ ಬಾರಿ ನೀರು ಬಿಡಲಿಲ್ಲ.[ತಮಿಳುನಾಡಿಗೆ ನೀರು ಬಿಡದಂತೆ ರೈತರ ಅರೆಬೆತ್ತಲೆ ಪ್ರತಿಭಟನೆ]

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ನೇತೃತ್ವದಲ್ಲಿ ಹೆಚ್ಚುವರಿ ಜಿಲ್ಲಾ ವರಿಷ್ಠಾಧಿಕಾರಿ ಕಲಾಕೃಷ್ಣಸ್ವಾಮಿ, ಡಿವೈಎಸ್ ಪಿ ಹರೀಶ್ ಪಾಂಡೆ, ಸರ್ಕಲ್ ಇನ್ ಸ್ಪೆಕ್ಟರ್ ಐವರು, 10 ಸಬ್ ಸ್ಪೆಕ್ಟರ್, ಡಿಆರ್ 7 ತುಕಡಿ, ಕೆಎಸ್ಆರ್ ಪಿ 5 ತುಕಡಿ ಒಟ್ಟು 500 ಪೊಲೀಸ್ ಸಿಬ್ಬಂದಿ, 100 ಗೃಹರಕ್ಷಕ ದಳ, ಕ್ಷಿಪ್ರ ಕಾರ್ಯಪಡೆಯ ಡಿವೈಎಸ್ ಪಿ ಅಬ್ದುಲ್ಅಜೀಜ್ ನೇತೃತ್ವದಲ್ಲಿ 100 ಸಿಬ್ಬಂದಿ ಶಸ್ತ್ರಸಜ್ಜಿತರಾಗಿ ಜಲಾಶಯದಲ್ಲಿ ಪಹರೆ ಕಾಯುತ್ತಿದ್ದಾರೆ.












Click it and Unblock the Notifications