ನಕಲಿ ದಾಖಲೆ ಸೃಷ್ಟಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಮೈಸೂರು ಬಿಜೆಪಿ ಮುಖಂಡನ ಬಂಧನ
Recommended Video

ಮೈಸೂರು, ನವೆಂಬರ್. 30: ನೀವು ನಿವೇಶನವನ್ನು ಕೊಂಡು ಖಾಲಿ ಇರಲಿ ಎಂದು ಬಿಟ್ಟಿದ್ದೀರಾ? ಹಾಗಾದರೆ ಜಾಗ್ರತೆ. ಯಾಕೆಂದರೆ ಖಾಲಿ ಇದ್ದ ನಿವೇಶನಗಳಿಗೆ ಬೇಲಿ ಹಾಕಿ, ನಕಲಿ ದಾಖಲೆ ಸೃಷ್ಟಿಸಿ ಬ್ಲಾಕ್ಮೇಲ್ ಮಾಡುತ್ತಿದ್ದ ಭೂಗಳ್ಳರ ಬೃಹತ್ ಜಾಲವೊಂದನ್ನು ಮೈಸೂರಿನ ನಜರ್ ಬಾದ್ ಠಾಣೆಯ ಪೊಲೀಸರು ಬೇಧಿಸಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಬಿಜೆಪಿ ಮುಖಂಡ, ಅಗ್ರಹಾರದ ನಿವಾಸಿ ಪಂಚಾಕ್ಷರಿ(38). ನಗರದಲ್ಲಿ ಖಾಲಿ ಬಿದ್ದಿರುವ ನಿವೇಶನಗಳ ಮಾಹಿತಿಯನ್ನು ಮೊದಲು ಆರೋಪಿಗಳ ತಂಡ ಕಲೆ ಹಾಕುತ್ತಿತ್ತು. ನಂತರ ನಕಲಿ ದಾಖಲೆಗಳನ್ನು ಸೃಷ್ಟಿಸಿ ನಿವೇಶನವು ತಮ್ಮದೆಂದು ಬೇಲಿ ಹಾಕುತ್ತಿದ್ದರು. ಕೆಲವು ವೇಳೆ ನಿವೇಶನದಲ್ಲಿ ಕಟ್ಟುತ್ತಿದ್ದ ಮನೆಗಳಿಗೂ ತಡೆ ಒಡ್ಡುತ್ತಿದ್ದರು.
ನಿವೇಶನವನ್ನು ಅಸಲಿಯಾಗಿ ಖರೀದಿಸಿದ ಮಾಲೀಕರಿಗೆ ನಂಬುವಂತಹ ನಕಲಿ ದಾಖಲೆಗಳನ್ನು ತೋರಿಸಿ, ನೀವು ಖರೀದಿಸಿದ್ದೇ ನಕಲಿ ವ್ಯಕ್ತಿಯಿಂದ. ಎಲ್ಲ ದಾಖಲೆಗಳೂ ನಕಲಿ ಎಂದು ನಂಬಿಸುತ್ತಿದ್ದರು. ನಂತರ ತಾವೇ ನ್ಯಾಯಾಲಯದಲ್ಲಿ ಸಿವಿಲ್ ಪ್ರಕರಣವನ್ನು ಅಸಲಿ ಮಾಲೀಕರ ವಿರುದ್ಧವೇ ದಾಖಲಿಸಿಬಿಡುತ್ತಿದ್ದರು.

ಸಾಕಷ್ಟು ತಿಂಗಳುಗಳ ನಂತರ ಮಾತುಕತೆಗೆ ಬಂದು, ದೊಡ್ಡ ಮೊತ್ತದ ಹಣವನ್ನೇ ಪಡೆದು ಅಸಲಿ ಮಾಲೀಕರಿಗೆ ನಿವೇಶನ ಬಿಟ್ಟು ಕೊಡುತ್ತಿದ್ದರು.
ಇಂತಹ ಒಂದು ದೊಡ್ಡ ಕರಾಳ ಮಾಫಿಯ ನಗರದಲ್ಲಿ ನಡೆಯುತ್ತಿತ್ತು. ಇದರ ಬೆನ್ನು ಬಿದ್ದ ಪೊಲೀಸರಿಗೆ ಅಧಿಕೃತವಾಗಿ ಯಾರೂ ದೂರು ನೀಡದಿರುವುದೇ ಸಮಸ್ಯೆಯಾಗಿ ಪರಿಣಮಿಸಿತ್ತು. ಕೊನೆಗೆ, ವೈದ್ಯರೊಬ್ಬರು ನೀಡಿದ ದೂರು ಮಾಫಿಯದಲ್ಲಿ ಭಾಗಿಯಾದವರನ್ನು ಸೆದೆ ಬಡಿಯಲು ಸಹಕಾರಿಯಾಯಿತು.
ಮೊದಲು ಪ್ರಕರಣದ ಇತರ ಆರೋಪಿಗಳು ಸಿಕ್ಕಿದರು. ಆದರೆ, ಪ್ರಮುಖ ಆರೋಪಿ ಪಂಚಾಕ್ಷರ ಮಾತ್ರ ತಲೆಮರೆಸಿಕೊಂಡಿದ್ದ. ಈತನ ಪತ್ತೆಗೆ ತಿಂಗಳುಗಟ್ಟಲೆ ಕಾಲ ಪೊಲೀಸರು ಹರಸಾಹಸಪಟ್ಟರು. ತಮಿಳುನಾಡು, ಆಂಧ್ರಪ್ರದೇಶಕ್ಕೂ ಹೋಗಿ ಪೊಲೀಸರ ತಂಡ ಜಾಲಾಡಿತು. ಆದರೆ, ಆರೋಪಿಯ ಸುಳಿವೇ ಪತ್ತೆಯಾಗಿರಲಿಲ್ಲ.

ಕೊನೆಗೆ, ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದಲ್ಲಿ ಅಡಗಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದರು.












Click it and Unblock the Notifications