ಸಂಘಟನೆ ಹೆಸರಲ್ಲಿ ವಸೂಲಿ ಮಾಡುತ್ತಿದ್ದವನಿಗೆ ಗೂಸಾ, ಪೊಲೀಸರ ವಶಕ್ಕೆ
ಸಂಘಟನೆ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದ ಕ್ರಾಂತಿಕುಮಾರ್ ಎಂಬಾತನಿಗೆ ಮೈಸೂರಿನ ಎಚ್ ಡಿ ಕೋಟೆಯಲ್ಲಿ ಆಟೋ ಚಾಲಕರು, ಸಾರ್ವಜನಿಕರು ಥಳಿಸಿ, ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ
ಎಚ್.ಡಿ.ಕೋಟೆ, ಏಪ್ರಿಲ್ 18: ರಾಷ್ಟ್ರ ನಾಯಕರ ಜಯಂತಿ ಮತ್ತು ಕನ್ನಡ ಸಂಘಟನೆ ಹೆಸರನ್ನು ಬಳಸಿಕೊಂಡು ವಸೂಲಿಯಲ್ಲಿ ತೊಡಗಿದ್ದ ಯುವಕ ಕ್ರಾಂತಿಕುಮಾರ್ ಎಂಬಾತನನ್ನು ಆಟೋ ಚಾಲಕರು ಮತ್ತು ಸಾರ್ವಜನಿಕರೇ ಥಳಿಸಿ ಠಾಣೆಗೆ ಒಪ್ಪಿಸಿದ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಬಸ್ ನಿಲ್ದಾಣದ ಹತ್ತಿರ ರಾಷ್ಟ್ರ ನಾಯಕರ ಜಯಂತಿ ಆಚರಿಸುವುದಾಗಿ ಹೇಳಿ ಕೆಲ ಅಂಗಡಿಗಳಲ್ಲಿ ಹಣ ವಸೂಲಿ ಮಾಡಿದ್ದಾನೆ. ಹಾಗೇ ಖಾಸಗಿ ಬಸ್ ನಿರ್ವಾಹಕರಲ್ಲಿ ಹಣ ಕೇಳಿದ್ದಾನೆ. ಇಲ್ಲ ಎಂದಾಗ ಹಲ್ಲೆಗೆ ಮುಂದಾಗಿದ್ದಾನೆ. ವಿಚಾರ ತಿಳಿದ ಆಟೋ ಚಾಲಕರು ಕ್ರಾಂತಿಕುಮಾರ್ ಗೆ ಹಿಗ್ಗಾಮುಗ್ಗಾ ಥಳಿಸಿ, ಆ ನಂತರ ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.[ಮೈಸೂರು ವಿವಿ ಹಂಗಾಮಿ ಕುಲಪತಿಗೆ ಲೇಡಿಸ್ ಹಾಸ್ಟೇಲ್ ನಲ್ಲೇನು ಕೆಲಸ?!]
ಪೊಲೀಸರು ಪ್ರಕರಣವನ್ನು ತಹಸೀಲ್ದಾರ್ ನಂಜುಂಡಯ್ಯರಿಗೆ ವರ್ಗಾಯಿಸಿದ ಹಿನ್ನೆಲೆಯಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಈ ವಿಚಾರ ತಿಳಿದ ಆಟೋ ಚಾಲಕರು ಮತ್ತು ದಲಿತ ಮುಖಂಡರಾದ ನರಸಿಂಹಮೂರ್ತಿ, ಚಲುವರಾಜು, ನಾಗರಾಜು, ಕೆಂಡ, ಮಂಜು, ಗೋಪಾಲ, ರಾಮು, ರವಿಕುಮಾರ್ ಸೇರಿದಂತೆ ನೂರಕ್ಕೂ ಹೆಚ್ಚು ಜನರು ಎಸ್ ಐ ಅಶೋಕ್ ಗೆ ಮನವಿ ಮಾಡಿ, ಈತನ ಮೇಲೆ ರೌಡಿ ಶೀಟ್ ತೆರೆಯುವಂತೆ ಒತ್ತಾಯಿಸಿದ್ದಾರೆ.[ಮಾಜಿ ಸಂಸದ ಎಚ್ ವಿಶ್ವನಾಥ್ ಜೆಡಿಎಸ್ ಗೆ: ದೇವೇಗೌಡ್ರು ಏನಂದ್ರು?]
ರಾಷ್ಟ್ರನಾಯಕರು ಮತ್ತು ದಲಿತರ ಹೆಸರು ಹೇಳಿಕೊಂಡು ಹಲವರು ಪಟ್ಟಣ ಸೇರಿದಂತೆ ತಾಲೂಕಿನದ್ಯಾಂತ ಹಣ ವಸೂಲಿ ಮಾಡುತ್ತಿದ್ದಾರೆ. ಇಂಥವರ ವಿರುದ್ದವೂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಕಟ್ಟೆ ಮನುಗನಹಳ್ಳಿ ಕ್ರಾಂತಿಕುಮಾರ್ ಈ ಹಿಂದೆ ಕನ್ನಡ ಸೇನೆ ಸಂಘಟನೆ ತಾಲೂಕು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಹಣ ವಸೂಲಿಯಲ್ಲಿ ತೊಡಗಿಕೊಂಡಿದ್ದನ್ನು ತಿಳಿದ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕುಮಾರ್ ಅವನನ್ನು ಸಂಘಟನೆಯಿಂದ ವಜಾ ಮಾಡಿದ್ದರು ಎನ್ನಲಾಗಿದೆ.