ಬಂಡೀಪುರದಲ್ಲಿ ಸಮಸ್ಯೆಯಾಗಿ ಹಬ್ಬುತ್ತಿದೆ ಪಾರ್ಥೇನಿಯಂ
ಚಾಮರಾಜನಗರ, ಜುಲೈ 13: ಇದೇ ಫೆಬ್ರುವರಿಯಲ್ಲಿ ಬೆಂಕಿಯ ಕೆನ್ನಾಲಿಗೆಗೆ ಬಂಡೀಪುರ ಗೋಪಾಲಸ್ವಾಮಿ ಬೆಟ್ಟ ಪ್ರದೇಶದ ನೂರಾರು ಎಕರೆ ಸುಟ್ಟು ಕರಕಲಾಗಿತ್ತು. ಮತ್ತೆ ಈ ನೆಲದಲ್ಲಿ ಹಸಿರು ಚಿಗುರುವುದು ಎಂದೋ ಎಂಬ ಆತಂಕವೂ ಎದುರಾಗಿತ್ತು. ಆದರೆ ಒಂದಷ್ಟು ಮಳೆ ಸುರಿದ ನಂತರ ನೆಲದಲ್ಲಿ ಮತ್ತೆ ಹಸಿರು ಚಿಗುರಿದೆ. ಎಲ್ಲೆಲ್ಲೂ ಹಸಿರ ನೋಟ ಕಾಣಸಿಗುತ್ತಿದೆ.
ಆದರೆ ಅದರ ಜೊತೆಜೊತೆಗೇ ಪಾರ್ಥೇನಿಯಂ ಗಿಡಗಳೂ ಹುಟ್ಟಿಕೊಂಡು ಈಗ ಸಮಸ್ಯೆಯಾಗಿ ಹಬ್ಬಲು ಆರಂಭಿಸಿದೆ. ಖಾಲಿ ಪ್ರದೇಶದಲ್ಲಿ ಅತ್ಯಂತ ವೇಗವಾಗಿ ಪಾರ್ಥೇನಿಯಂ ಗಿಡಗಳು ತಲೆಎತ್ತಿವೆ.
ಒಂದು ಪಾರ್ಥೇನಿಯಂ ಗಿಡದಿಂದ ಸಾವಿರಾರು ಬೀಜ ಪ್ರಸಾರವಾಗುವ ಕಾರಣ, ಅತಿ ವೇಗವಾಗಿ ಇದು ಹಬ್ಬುತ್ತಿವೆ. ಮಳೆಯಾದಾಗ ಭೂಮಿ ಸಡಿಲಗೊಳ್ಳುವ ಪರಿಣಾಮ ಹೆಚ್ಚು ಹೆಚ್ಚು ಬೆಳೆಯುತ್ತಿವೆ. ಆಕಸ್ಮಿಕ ಬೆಂಕಿ ಬಿದ್ದ ಕಾರಣ ಅದು ಬೂದಿಯಾಗಿ ಈಗ ಅದೇ ಬೂದಿ ಗೊಬ್ಬರವಾಗಿದೆ. ಈ ಹಿನ್ನೆಲೆಯಲ್ಲಿ ಪಾರ್ಥೇನಿಯಂ ವ್ಯಾಪಕವಾಗಿ ಆವರಿಸುತ್ತಿದೆ. ಹಿಮವದ್ ಗೋಪಾಲಸ್ವಾಮಿ ಬೆಟ್ಟವಲ್ಲದೆ ಬಂಡೀಪುರದ ಸಫಾರಿ ಮಾರ್ಗ, ತಾವರೆ ಕಟ್ಟೆ ಕೆರೆ ಹೀಗೆ ಅನೇಕ ಕಡೆ ಪಾರ್ಥೇನಿಯಂನದ್ದೇ ಕಾರುಬಾರಾಗಿದೆ.

ಈ ಪ್ರದೇಶದ ಶೇ 60ರಷ್ಟು ಭಾಗವನ್ನು ಪಾರ್ಥೇನಿಯಂ ಗಿಡಗಳೇ ಆವರಿಸಿಕೊಂಡಿವೆ. ಖಾಲಿ ಜಾಗದಲ್ಲಿ ಪಾರ್ಥೇನಿಯಂ ವ್ಯಾಪಿಸಿದರೆ ಹುಲ್ಲುಗಾವಲು ಕಡಿಮೆಯಾಗುತ್ತದೆ. ಹೀಗಿದ್ದಾಗ ಮೇವಿನ ಕೊರತೆ ಉಂಟಾಗಿ ಇಲ್ಲಿರುವ ಸಸ್ಯಾಹಾರಿ ಪ್ರಾಣಿಗಳು ಮೇವು ಅರಸಿ ಬೇರೆಡೆಗೆ ಹೋಗಬೇಕಾಗುತ್ತದೆ. ಇದರೊಟ್ಟಿಗೆ ಪರಿಸರದಲ್ಲಿಯೂ ಅಸಮತೋಲನ ಉಂಟಾಗಬಹುದು ಎಂಬುದು ಪರಿಸರ ತಜ್ಞರ ಅಭಿಪ್ರಾಯ.
ಪಾರ್ಥೇನಿಯಂ ಕೆಟ್ಟ ವಾಸನೆ ಹಾಗೂ ಚರ್ಮ ಕಾಯಿಲೆಗೆ ದಾರಿ ಮಾಡಿಕೊಡುವ ಸಸ್ಯ. ಹೆಚ್ಚು ಹಬ್ಬಿದರೆ ಕೈಯಿಂದ ಕೀಳಲು ಸಾಧ್ಯವಿಲ್ಲ. ಕಳೆನಾಶಕ ಸಿಂಪಡಣೆ ಕಾರ್ಯವೂ ನಡೆಯುವುದಿಲ್ಲ. ಯಂತ್ರ ಬಳಕೆಯೂ ಒಂದು ಹಂತದಲ್ಲಿ ಪ್ರಯೋಜನವಾಗುವುದಿಲ್ಲ.
ಇದೇ ನಿಟ್ಟಿನಲ್ಲಿ ಗಿಡ ಮರಗಳು ನಾಶವಾಗಿರುವ ಪ್ರದೇಶವನ್ನು ಯಥಾಸ್ಥಿತಿಗೆ ತರಲು ಬಿದಿರು ಮತ್ತು ಇತರೆ ಮರಕ್ಕೆ ಹೊಂದಿಕೆಯಾಗುವಂತಹ ಗಿಡಗಳನ್ನು ಈಗಾಗಲೇ ಅರಣ್ಯ ಇಲಾಖೆ ನೆಡಲು ಆರಂಭಿಸಿದೆ. ಈಚೆಗೆ ಬೀಜದುಂಡೆ ಎಸೆಯುವ ಕಾರ್ಯವನ್ನೂ ಇಲಾಖೆ ಕೈಗೊಂಡಿದ್ದು, ಪಾರ್ಥೇನಿಯಂ ನಡುವೆ ಅದರ ಫಲವೂ ಗೋಚರಿಸುತ್ತಿಲ್ಲ.
ಹೀಗಾಗಿ ಅರಣ್ಯ ಇಲಾಖೆ ಪಾರ್ಥೇನಿಯಂ ಗಿಡಗಳ ನಿವಾರಣೆಗೆ ತಕ್ಷಣವೇ ಪರಿಣಾಮಕಾರಿ ವಿಧಾನವನ್ನು ಅನುಸರಿಸುವ ಅನಿವಾರ್ಯತೆ ಇದೆ.












Click it and Unblock the Notifications