ತಲಕಾಡು ಪಂಚಲಿಂಗ ದರ್ಶನಕ್ಕೆ ಸಕಲ ಸಿದ್ಧತೆ
ತಿ.ನರಸೀಪುರ, ನ.10: ತಲಕಾಡಿನ ಪುರಾಣ ಪ್ರಸಿದ್ಧ ಪಂಚಲಿಂಗ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಶಿಸ್ತು ಬದ್ಧವಾಗಿ ವ್ಯವಸ್ಥೆಯಾಗಬೇಕೆಂದು ಜಿಲ್ಲಾ ಉಸ್ತುವಾರಿ ಹಾಗೂ ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ನವೆಂಬರ್ 28 ರಿಂದ ಡಿಸೆಂಬರ್ 2 ರ ತನಕ ಪಂಚಲಿಂಗ ದರ್ಶನ ಮಾಡಬಹುದಾಗಿದೆ.
ಪಂಚಲಿಂಗದರ್ಶನಕ್ಕೆ ಬೇಕಾದ ವ್ಯವಸ್ಥೆ ಕಲ್ಪಿಸಲು ಕಾಂಗ್ರೆಸ್ ಸರ್ಕಾರ 12 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೂ ನಿಮ್ಮ ಬೇಡಿಕೆಯಂತೆ ಹಣ ಬಿಡುಗಡೆ ಮಾಡಿದ್ದೇವೆ. ಭಕ್ತಾದಿಗಳಿಗೆ ಕುಡಿಯುವ ನೀರು, ಶೌಚಾಲಯ, ಸ್ನಾನದ ಘಟ್ಟಗಳು, ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಬಟ್ಟೆ ಬದಲಾಯಿಸುವ ತಾತ್ಕಾಲಿಕ ಕೊಠಡಿಗಳನ್ನೂ ನಿರ್ಮಿಸುವುದು, ತಲಕಾಡಿಗೆ ಬರುವ ಪ್ರಮುಖ ರಸ್ತೆಗಳಲ್ಲಿ 4 ಕಡೆ ಬಸ್ ನಿಲ್ದಾಣದ ವ್ಯವಸ್ಥೆಮಾಡಬೇಕು ಎಂದು ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದರು.
ಬಸ್ ನಿಲ್ದಾಣದಿಂದ 5 ನಿಮಿಷಕ್ಕೆ ಒಂದರಂತೆ ಮಿನಿಬಸ್ ನೇಮಿಸಲಾಗಿದ್ದು, ಭಕ್ತಾದಿಗಳು ದೇವರ ದರ್ಶನ ಪಡೆಯಲು ಅಧಿಕಾರಿಗಳೂ ಮತ್ತು ಪೋಲಿಸರು ಸರಿಯಾದ ರೀತಿ ವ್ಯವಸ್ಥೆ ಮಾಡಬೇಕು ಎಂದರು. ಇದೇ ವೇಳೆ 5 ದಿನದವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದರಿಂದ ಕಲಾವಿದರನ್ನು ಆಯ್ಕೆ ಮಾಡುವಂತೆ ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ಈಗಾಗಲೇ ಸಂಬಂಧಪಟ್ಟ ದೇವಸ್ಥಾನಗಳಿಗೆ ಸುಣ್ಣ-ಬಣ್ಣ ಹಚ್ಚುವ ಕಾರ್ಯ ಆರಂಭವಾಗಿದ್ದು, ದಸರಾ ಮಾದರಿಯಲ್ಲಿ ವಿದ್ಯುತ್ ಅಲಂಕಾರ, ಎಲ್ಲಾ ದೇವಸ್ಥಾನಗಳ ಒಳಗಡೆ ಸಿ,ಸಿ ಕ್ಯಾಮರಾ ಅಳವಡಿಸುವುದು, ಯಾವುದೇ ವ್ಯಕ್ತಿಯ ಬಗ್ಗೆ ಅನುಮಾನ ಬಂದಲ್ಲಿ ಕೂಡಲೇ ಆವರನ್ನು ಠಾಣೆಗೆ ಕರೆದುಕೊಂಡು ಹೋಗಿ ತನಿಖೆ ಮಾಡುವುದು. ಇದರ ಬಂದೋಬಸ್ತ್ಗಾಗಿ 20 ಜನ ಡಿ.ವೈ,ಎಸ್,ಪಿ 60 ಜನ ಇನ್ಸ್ಪೆಕ್ಟರ್, 4000 ಪೇದೆಗಳನ್ನು ನೇಮಿಸಲಾಗಿದೆ ಎಂದು ಹೇಳಿದರು.
ತೂಗು ಸೇತುವೆ : ಮಾಲಂಗಿ ಮತ್ತು ಕಾವೇರಿ ನದಿಗೆ ಅಡ್ಡಲಾಗಿ ತಾತ್ಕಾಲಿಕ ತೂಗು ಸೇತುವೆಯನ್ನು ನಿರ್ಮಿಸಲಾಗಿದೆ. ರಸ್ತೆ ಕಾಮಗಾರಿ, ಬೀದಿ ದೀಪಗಳ ವ್ಯವಸ್ಥೆ, ತ್ವರಿತಗತಿಯಲ್ಲಿ ಆಗಬೇಕು. ಆದ್ದರಿಂದಲೇ ಕಾಲಕ್ಕನುಗುಣವಾಗಿ ಹಣ ಬಿಡುಗಡೆ ಮಾಡಿದ್ದೇವೆ. ನಿಮಗೆ ತೊಂದರೆಯಾದ ಪಕ್ಷದಲ್ಲಿ ಜಿಲ್ಲಾಧಿಕಾರಿಗಳನ್ನ್ನು ನೇರವಾಗಿ ಭೇಟಿ ಮಾಡಿ ಸಮಸ್ಯೆಗಳನ್ನು ಪರಿಹರಿಸಕೊಳ್ಳಬೇಕು ಎಂದು ಶ್ರೀನಿವಾಸ್ ಪ್ರಸಾದ್ ರಸೂಚಿಸಿದರು.
ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ಶಾಸಕ ನರೇಂದ್ರಸ್ವಾಮಿ, ಸಂಸದ ಆರ್. ಧ್ರುವನಾರಾಯಣ್, ಎಂಎಲ್ ಸಿ ಧರ್ಮಸೇನಾ, ಮಾಜಿ ಶಾಸಕ ಕೃಷ್ಣಪ್ಪ, ಜಿಲ್ಲಾಧಿಕಾರಿ ಶಿಖಾ, ಜಿಲ್ಲಾ ಪೋಲಿಸ್.ವರಿಷ್ಠಾಧಿಕಾರಿ ಅಭಿನವ್ ಖರೆ, ಜಿಲ್ಲಾ ಕಾರ್ಯನಿರ್ವಾಹಕ ಅಧಿಕಾರಿ ಗೋಪಾಲ್, ಜಿ.ಪಂ ಅಧ್ಯಕ್ಷ ಮಹದೇವ್, ತಾ.ಪಂ ಅಧ್ಯಕ್ಷ ನಟರಾಜು, ಉಪಾಧ್ಯಕ್ಷ ಕಮಲಾಕ್ಷಿ, ಮತ್ತಿತರರು ಪಂಚಲಿಂಗ ದರ್ಶನದ ಬಗ್ಗೆ ಚರ್ಚೆ ನಡೆಸಿ ಸಿದ್ಧತಾ ಕಾರ್ಯ ಪರಿಶೀಲಿಸಿದ್ದಾರೆ.
ಪಂಚಲಿಂಗ ದರ್ಶನ: 2009ರಲ್ಲಿ ಪಂಚಲಿಂಗ ದರ್ಶನ ಮಹೋತ್ಸವ ಜರುಗಿತ್ತು. ಡಿಸೆಂಬರ್ 2 ರಂದು ಬೆಳಗ್ಗೆ 10 ರಿಂದ ರಾತ್ರಿ 12 ರ ತನಕ ವಿಶೇಷ ಪೂಜೆ ಆಯೋಜನೆಗೊಂಡಿದೆ. ಸುಮಾರು ಮೂರುವರೆ ಲಕ್ಷ ಜನ ಭಕ್ತಾದಿಗಳ ನಿರೀಕ್ಷೆಯಿದೆ. ಡಿಸೆಂಬರ್ 7 ರ ತನಕ ವಿವಿಧ ಧಾರ್ಮಿಕ ಪೂಜೆ ಪುನಸ್ಕಾರಗಳು ಜಾರಿಯಲ್ಲಿರುತ್ತದೆ ಎಂದು ವೈದ್ಯನಾಥೇಶ್ವರ ದೇಗುಲದ ಪ್ರಧಾನ ಅರ್ಚಕ ಎನ್ ಕೃಷ್ಣ ದೀಕ್ಷಿತ್ ಹೇಳಿದ್ದಾರೆ.
1911,1924,1938,1952,1959,1965,1979,1986,1993 ನಂತರ 2000 ಇಸವಿಯಾದ ಮೇಲೆ ಮೂರನೇ ಬಾರಿಗೆ ಪಂಚಲಿಂಗ ದರ್ಶನ ಮಹೋತ್ಸವ ಆಯೋಜನೆಗೊಂಡಿರುವುದು ವಿಶೇಷ. ಕಾರ್ತಿಕ ಮಾಸದಲ್ಲಿ ಐದು ಸೋಮವಾರ ಬಂದು ಅದರಲ್ಲೂ ಕಡೆ ಸೋಮವಾರದ ದಿನ ಪೂರ್ಣ ಚಂದಿರನ ಜತೆ ಲಿಂಗರೂಪಿ ಪರಮಶಿವನ ದರ್ಶನ ಪಡೆಯುವುದರಲ್ಲಿ ಭಕ್ತರು ಧನ್ಯತೆ ಕಾಣುತ್ತಾರೆ.












Click it and Unblock the Notifications