Mysuru: ಸಿಎಂ ಸಿದ್ದರಾಮಯ್ಯ ತವರು ಮೈಸೂರಿನಲ್ಲೇ ಬಯಲು ಶೌಚ ಇನ್ನೂ ಜೀವಂತ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರಿನಲ್ಲಿ ಬಯಲು ಶೌಚ ಇನ್ನೂ ಜೀವಂತವಾಗಿದೆ. ಹಾಗಾಗಿ ಜಿಲ್ಲಾ ಪಂಚಾಯಿತಿ ಮುಂದಿನ ಮಾರ್ಚ್ ಒಳಗೆ ಬಯಲು ಮುಕ್ತ ಶೌಚ ಮಾಡಲು ಪಣತೊಟ್ಟಿದೆ. ಸಾಂಸ್ಕೃತಿಕ ರಾಜಧಾನಿ ಎನಿಸಿಕೊಂಡಿರುವ ಮೈಸೂರು ಎರಡು ಬಾರಿ ಸ್ವಚ್ಛ ನಗರಿ ಪ್ರಶಸ್ತಿ ಪಡೆದಿತ್ತು, ಇದೀಗ ಬಯಲು ಶೌಚ ಪದ್ಧತಿ ಸದ್ದಿಲ್ಲದೆ ಮರಳಿದ್ದು, ಅಧಿಕಾರಿಗಳಿಗೆ ಹೊಸ ತಲೆನೋವು ಶುರುವಾಗಿದೆ.
ಮೈಸೂರಿಗೆ ಎರಡು ಬಾರಿ ಸ್ವಚ್ಛನಗರಿ ಪಟ್ಟ ಸಿಕ್ಕಿದೆ. 2016ರಲ್ಲಿ ರಾಷ್ಟ್ರೀಯ ಮಾದರಿ ಸಮೀಕ್ಷೆ ಮತ್ತು ಸ್ವಚ್ಛ ಭಾರತ ಅಭಿಯಾನದಡಿ ಮೈಸೂರನ್ನು 'ಬಯಲು ಶೌಚ ಮುಕ್ತ ನಗರ' ಎಂದು ಘೋಷಿಸಲಾಗಿದೆ. ಆದರೆ, ಮೈಸೂರಿನಲ್ಲಿ ಇನ್ನೂ 16,349 ಶೌಚಗೃಹ ನಿರ್ಮಾಣ ಬಾಕಿ ಉಳಿದಿದೆ.

ಪರಿಸ್ಥಿತಿ ಬದಲಾಗಲು ಕಾರಣವೇನು?
ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಭಾಗವಾಗಿ ಹೊಸಮನೆ ನಿರ್ಮಾಣ ಮಾಡಿಕೊಂಡಾಗ ಶೌಚಾಲಯವೇ ಇರುವುದಿಲ್ಲ. ಅಲ್ಲದೆ, ಕೆಲವು ಕಡೆ ಶೌಚಾಲಯ ನಿರ್ಮಾಣದ ಬಗ್ಗೆ ತಿಳುವಳಿಕೆಯ ಕೊರತೆ ಇದೆ. ಅಲ್ಲದೆ, ಸರಕಾರ ಕಟ್ಟಿಕೊಟ್ಟಿರುವ ಆಶ್ರಯ ಮನೆಗಳಿಗೆ ಶೌಚಾಲಯಗಳೇ ಇಲ್ಲ. ಈ ಎಲ್ಲಾ ಕಾರಣಗಳಿಂದ ಮೈಸೂರಲ್ಲಿ ಇನ್ನೂ ಬಯಲು ಶೌಚ ಜೀವಂತವಾಗಿದೆ.
ತಾಲೂಕುವಾರು ಅಂಕಿಅಂಶಗಳು
ಸ್ವಚ್ಛ ಭಾರತ್ ಮಿಷನ್ ಪ್ರಕಾರ ಮೈಸೂರು ಜಿಲ್ಲೆಯಲ್ಲಿ ಒಟ್ಟು 4,45,062 ಕುಟುಂಬಗಳಿವೆ. ಇದರಲ್ಲಿ ಈಗಾಗಲೇ 4,28,713 ಕುಟುಂಬಗಳಿಗೆ ಶೌಚಾಲಯವಿದೆ. ಎಚ್.ಡಿ. ಕೋಟೆಯಲ್ಲಿ 3199, ಹುಣಸೂರಲ್ಲಿ 1490, ಕೆ.ಆರ್.ನಗರದಲ್ಲಿ 1387, ಮೈಸೂರಲ್ಲಿ 1149, ನಂಜನಗೂಡಲ್ಲಿ 2107, ಪಿರಿಯಾಪಟ್ಟಣದಲ್ಲಿ 1125, ಸಾಲಿಗ್ರಾಮದಲ್ಲಿ 2130, ಸರಗೂರಲ್ಲಿ 2299, ತಿ.ನರಸೀಪುರದಲ್ಲಿ 1463 ಸೇರಿದಂತೆ ಒಟ್ಟು 16,349 ಮನೆಗಳಿಗೆ ಶೌಚಾಲಯ ನಿರ್ಮಾಣ ಬಾಕಿ ಉಳಿದಿದೆ.
ಈಗಾಗಲೇ ಸಿಟಿಜನ್ ಆ್ಯಪ್ ಮೂಲಕ 16304 ಅರ್ಜಿಗಳು ಸ್ವೀಕೃತವಾಗಿದ್ದು, ಶೌಚಾಲಯ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗಿದೆ. 2025ರ ಮಾರ್ಚ್ ವೇಳೆಗೆ ಮೈಸೂರಿನ ಪ್ರತಿ ಮನೆಗೂ ಶೌಚಾಲಯ ನಿರ್ಮಿಸಿಕೊಡುವ ಗುರಿ ಹೊಂದಲಾಗಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಕೃಷ್ಣರಾಜು ತಿಳಿಸಿದ್ದಾರೆ.











Click it and Unblock the Notifications