ಚುನಾವಣೆ ಕಾರ್ಯಕ್ಕೆ ಕೆಎಸ್ಆರ್ಟಿಸಿ:ಸಂಚಾರದಲ್ಲಿ ಭಾರಿ ವ್ಯತ್ಯಯ
ಮೈಸೂರು, ಏಪ್ರಿಲ್ 17:ಲೋಕಸಭಾ ಚುನಾವಣಾ ಕಾರ್ಯಕ್ಕೆ ಬಸ್ಸುಗಳ ನಿಯೋಜನೆ ಮಾಡಿರುವುದರಿಂದ ಬುಧವಾರ ಮತ್ತು ಗುರುವಾರ ಕೆಎಸ್ಆರ್ ಟಿಸಿ ಬಸ್ಸುಗಳು ವಿರಳ ಸಂಖ್ಯೆಯಲ್ಲಿ ಸಂಚರಿಸಲಿವೆ. ಇದರಿಂದ ದೂರದ ಊರುಗಳಿಗೆ ತೆರಳುವ ಪ್ರಯಾಣಿಕರು ತೊಂದರೆ ಅನುಭವಿಸುವ ಸಾಧ್ಯತೆ ಹೆಚ್ಚಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಗರದ ಸಬ್ ಅರ್ಬನ್ ಬಸ್ ನಿಲ್ದಾಣದಲ್ಲಿ ಇಂದಿನಿಂದಲೇ ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿದ್ದ ದೃಶ್ಯ ಕಂಡುಬಂತು. ಮತದಾನಕ್ಕೆಂದು ಊರಿಗೆ ತೆರಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ನಿಲ್ದಾಣಕ್ಕೆ ಬಂದಿದ್ದರು. ಪ್ರಯಾಣಿಕರು ಬಸ್ಸಿಗಾಗಿ ತುಂಬಾ ಹೊತ್ತು ಕಾಯಬೇಕಾಯಿತು.
ಬಸ್ಸು ಬಂದಾಗ ಅದನ್ನೇರಲು ಪೈಪೋಟಿಯೇ ನಡೆಯಿತು. ಕೆಲವರು ಸೀಟು ಪಡೆಯುವ ಉದ್ದೇಶದಿಂದ ಕಿಟಕಿ ಮೂಲಕ ಬಸ್ಸು ಏರಿದರು.ಜಿಲ್ಲೆಯಲ್ಲಿ ಚುನಾವಣಾ ಕೆಲಸಕ್ಕೆ ಮತ್ತು ಮತಗಟ್ಟೆ ಸಿಬ್ಬಂದಿಯನ್ನು ಜಿಲ್ಲೆಯ ವಿವಿಧ ಮತಗಟ್ಟೆಗಳಿಗೆ ಕರೆದೊಯ್ಯಲು ಖಾಸಗಿ ವಾಹನಗಳಲ್ಲದೆ ಸುಮಾರು ಕೆಎಸ್ ಆರ್ಟಿ ಬಸ್ಸುಗಳನ್ನು ನಿಯೋಜಿಸಲಾಗಿದೆ.

ಕೆಲವೊಂದು ಮಾರ್ಗಗಳಲ್ಲಿ ಸಂಚರಿಸುವ ಬಸ್ಸುಗಳನ್ನು ಚುನಾವಣೆ ಸೇವೆಗೆ ಬಳಸಲಾಗಿದೆ. ಇದರಿಂದ ಬಸ್ಸುಗಳ ಕೊರತೆಯ ಬಿಸಿ ಪ್ರಯಾಣಿಕರಿಗೆ ತಟ್ಟಿದೆ. ಈಗಾಗಲೇ ಮೈಸೂರು ಗ್ರಾಮಾಂತರ ವಿಭಾಗದಿಂದ 190 ಹಾಗೂ ನಗರ ಸಾರಿಗೆ ವಿಭಾಗದಿಂದ 213 ಬಸ್ಗಳನ್ನು ಚುನಾವಣಾ ಕಾರ್ಯಕ್ಕೆ ನೀಡಲಾಗಿದೆ.ಇದೇ ರೀತಿ ಬೆಂಗಳೂರು ಸೇರಿದಂತೆ ಪ್ರತಿ ಜಿಲ್ಲಾ ಕೇಂದ್ರಗಳಿಂದಲೂ ಬಸ್ಗಳನ್ನು ನೀಡಲಾಗಿದೆ.
ಮೈಸೂರು- ಬೆಂಗಳೂರು ಮಾರ್ಗ ಒಳಗೊಂಡಂತೆ ಅಧಿಕ ಸಂಖ್ಯೆಯ ಬಸ್ಸುಗಳ ಸೌಲಭ್ಯ ಇದ್ದ ಮಾರ್ಗಗಳಲ್ಲಿ ಮಾತ್ರ ಸೇವೆ ಕಡಿತಗೊಳಿಸಲಾಗಿದೆ. ಗ್ರಾಮೀಣ ಭಾಗಗಳಿಗೆ ಹೋಗುವ ಬಸ್ಸುಗಳನ್ನು ಚುನಾವಣೆ ಸೇವೆಗೆ ಬಳಸಿಕೊಂಡಿಲ್ಲ ಎನ್ನುತ್ತಾರೆ ಕೆಎಸ್ ಆರ್ಟಿಸಿ ಮೈಸೂರು ವಿಭಾಗೀಯ ನಿಯಂತ್ರಕ ಅಧಿಕಾರಿಗಳು.
ಮೈಸೂರಿನಲ್ಲಿ ಒಟ್ಟು 700ಕ್ಕೂ ಹೆಚ್ಚು ಬಸ್ ಗಳಿದೆ. ಇದರಲ್ಲಿ 403 ಬಸ್ಗಳನ್ನು ಚುನಾವಣಾ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುವುದರಿಂದ ಸಹಜವಾಗಿಯೇ ಹೆಚ್ಚುವರಿ ಬಸ್ಗಳಲ್ಲಿ ಕೊರತೆ ಉಂಟಾಗಲಿದೆ. ಪ್ರಯಾಣಿಕರ ದಟ್ಟಣೆ ಹೆಚ್ಚಾದಾಗ ನಿಯೋಜಿಸುವ ಬಸ್ಗಳಲ್ಲಿ ನಾಳೆ ಇನ್ನೂ ಕೊರತೆ ಆಗಲಿದೆ.












Click it and Unblock the Notifications