ನೆನೆಗುದಿಗೆ ಬಿದ್ದ ಕಟ್ಟಡ ಕಾಮಗಾರಿ: ಮಕ್ಕಳಿಗೆ ಜನತಾ ಮನೆಯೇ ಶಾಲೆ!
ಮೈಸೂರು, ಜೂನ್.19.ಸರ್ಕಾರಿ ಶಾಲೆಗೆ ಮಕ್ಕಳನ್ನು ದಾಖಲು ಮಾಡಿ ಎಂದು ಬೊಬ್ಬಿರಿಯುವ ಸರ್ಕಾರ ಈಗಾಗಲೇ ಅಸ್ತಿತ್ವದಲ್ಲಿರುವ ಶಾಲೆಗಳನ್ನು ಹೇಗೆ ನಿರ್ವಹಿಸಿಕೊಂಡು ಹೋಗುತ್ತಿದೆ ಎಂಬುದು ಶಾಲೆಗಳಿಗೆ ಭೇಟಿ ನೀಡಿದರೆ ಗೊತ್ತಾಗಿ ಬಿಡುತ್ತದೆ.
ಸುಣ್ಣಬಣ್ಣವಿಲ್ಲದ ಕಳಾಹೀನವಾದ ಗೋಡೆಗಳು, ಹಂಚು ಒಡೆದು ನೀರು ಸೋರುವ ಛಾವಣಿ, ಮಕ್ಕಳಿಗೆ ಕುಳಿತು ಕೊಳ್ಳಲು ಪೀಠೋಪಕರಣಗಳಿಲ್ಲದೆ ನೆಲದಲ್ಲಿ ಕುಳಿತು ಪಾಠಕೇಳುವ ಮಕ್ಕಳು, ಶೌಚಾಲಯವಿಲ್ಲದೆ ಬಯಲಿಗೆ ಹೋಗುವ ವಿದ್ಯಾರ್ಥಿಗಳು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಸರ್ಕಾರಿ ಶಾಲೆಗಳಲ್ಲಿನ ಮೂಲಸೌಲಭ್ಯ ಕೊರತೆಯ ದೊಡ್ಡ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.
ಸಮಸ್ಯೆಗಳನ್ನೇ ಹೊದ್ದುಕೊಂಡಿರುವ ಸರ್ಕಾರಿ ಶಾಲೆಗಳ ಪೈಕಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಕೆ.ಎಸ್.ಕಾಳಮರಿಗೌಡ ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಬಂದೊದಗಿರುವ ದುಸ್ಥಿತಿಯನ್ನು ಹತ್ತಿರದಿಂದ ನೋಡಿದರೆ ಇಲ್ಲಿಗೆ ಯಾವುದೇ ಪೋಷಕರು ತಮ್ಮ ಮಕ್ಕಳನ್ನು ಸೇರಿಸಲು ಮುಂದೆ ಬರಲಾರರು.

ಏಕೆಂದರೆ ಶಾಲೆಗೊಂದು ಮೂಲಸೌಲಭ್ಯವಿರುವ ಸುಸಜ್ಜಿತ ಕಟ್ಟಡವೇ ಇಲ್ಲ. ಇಲ್ಲಿ ಶಾಲೆಗೆ ಕಟ್ಟಡ ಕಟ್ಟುವ ಸರ್ಕಾರದ ಯೋಜನೆಗೆ ಸ್ಥಳೀಯರು ಸಹಕಾರ ನೀಡಿದರು. ಬಡಮಕ್ಕಳ ಶಿಕ್ಷಣಕ್ಕೆ ಉಪಯೋಗವಾಗಲಿ ಎಂದು ಗ್ರಾಮದ ಜನ ಮರು ಮಾತನಾಡದೆ ಒಪ್ಪಿಕೊಂಡರು.
ಶಾಲಾ ಕಟ್ಟಡ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿ ಜಾಗವನ್ನು ಮಂಜೂರು ಮಾಡಲಾಯಿತು. ಈ ವೇಳೆ ಆ ಜಾಗದಲ್ಲಿದ್ದ ಅಣ್ಣಮಲೈ ಮತ್ತು ಬೆಳ್ಳಿಯಮ್ಮ ದಂಪತಿಗಳಿಗೆ ನಿಮಗೆ ಬೇರೆ ಕಡೆಯಿರುವ ಜಾಗದಲ್ಲಿ ಮನೆಯನ್ನು ನಿರ್ಮಿಸಿಕೊಡಲಾಗುವುದು ಎಂದು ಮನವೊಲಿಸಿ ಜಾಗ ಪಡೆದು ಸುಮಾರು 9ಲಕ್ಷ ರೂ ವೆಚ್ಚದಲ್ಲಿ ಗುತ್ತಿಗೆದಾರ ರಾಮಕೃಷ್ಣ ಅವರ ಮೂಲಕ ಶಾಲಾ ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕಲಾಯಿತು.

ಮೊದಲಿದ್ದ ಆರಂಭದ ಹುರುಪನ್ನು ನೋಡಿದ ಗ್ರಾಮಸ್ಥರು ಶೀಘ್ರದಲ್ಲೇ ತಮ್ಮ ಗ್ರಾಮಕ್ಕೆ ಸುಸಜ್ಜಿತ ಕಟ್ಟಡದ ಶಾಲೆ ಸ್ಥಾಪನೆಯಾಗುತ್ತದೆಯಲ್ಲ ಎಂದು ಖುಷಿಪಟ್ಟರು. ಆದರೆ ಅಡಿಪಾಯ ಹಾಕಿ ಗೋಡೆಯನ್ನು ನಿರ್ಮಿಸಲಾಯಿತು.
ಆ ನಂತರ ಮಾತ್ರ ಕೆಲಸ ಮುಂದುವರೆಯಲೇ ಇಲ್ಲ. ಅದು ನೆನೆಗುದಿಗೆ ಬಿದ್ದು ಹಲವು ವರ್ಷಗಳೇ ಕಳೆದಿವೆ. ಕಳೆದ ಸರ್ಕಾರದ ಅವಧಿಯಲ್ಲಿ ಜಿಲ್ಲೆಯವರೇ ಶಿಕ್ಷಣ ಸಚಿವರಾಗಿದ್ದರೂ ಇಲ್ಲಿನ ಸಮಸ್ಯೆ ಅವರ ಗಮನಕ್ಕೆ ಬರಲೇ ಇಲ್ಲ.
ಕಳೆದ ಒಂಬತ್ತು ವರ್ಷಗಳ ಹಿಂದೆ ಶೀಘ್ರವೇ ಶಾಲಾ ಕಟ್ಟಡ ನಿರ್ಮಾಣವಾಗುತ್ತದೆ ಅಲ್ಲಿವರೆಗೆ ಮಕ್ಕಳಿಗೆ ಪಾಠ ಮಾಡಲು ತಾತ್ಕಾಲಿಕವಾಗಿ ಮಾಲೀಕರೊಬ್ಬರಿಂದ ಜನತಾ ಮನೆಯನ್ನು ಆರು ತಿಂಗಳ ಅವಧಿಗೆ ಪಡೆಯಲಾಯಿತು.

ಆ ಮನೆಯೇ ಶಾಲೆಯಾಗಿ ಮಾರ್ಪಾಡಾಗಿದ್ದು, ಮಾಲೀಕ ಮನೆಯನ್ನು ಬಿಟ್ಟುಕೊಡುವಂತೆ ಆಗಾಗ್ಗೆ ಎಚ್ಚರಿಕೆಯ ಮಾತುಗಳನ್ನಾಡುತ್ತಿದ್ದು, ಇಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರು ಅವರಿಗೆ ಕೈಮುಗಿದು ಸಮಾಧಾನ ಮಾಡಿ ಕಳುಹಿಸುತ್ತಿದ್ದಾರೆ. ಈಗ ನಡೆಯುತ್ತಿರುವ ಜನತಾ ಮನೆಯ ಶಾಲಾ ಕಟ್ಟಡ ಶಿಥಿಲಗೊಂಡು ಯಾವಾಗ ಬೇಕಾದರೂ ನೆಲಕ್ಕುರುಳುವಂತಿದೆ.
ಅದರಲ್ಲೇ ಶಿಕ್ಷಕ ದಿವಾಕರ್ ಎಂಬುವರು ಸುಮಾರು 18 ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ. ಜತೆಗೆ ಇರುವ ಮಕ್ಕಳಿಗೆ ಬಿಸಿಯೂಟದ ಮನೆಯಿಲ್ಲದೇ ಕೊಠಡಿಯೊಂದರಲ್ಲಿ ಅಡುಗೆಗೆ ಬೇಕಾದ ಪದಾರ್ಥಗಳನ್ನು ಸಂಗ್ರಹಿಸಿಟ್ಟುಕೊಂಡು ಮಕ್ಕಳಿಗೆ ಬಿಸಿಯೂಟ ಮಾಡಿಕೊಡುತ್ತಿದ್ದಾರೆ.
ಆರು ತಿಂಗಳ ಮಟ್ಟಿಗೆ ಶಾಲೆ ನಡೆಸಲು ಮನೆಯನ್ನು ಪಡೆಯಲಾಗಿದ್ದು, ಇದೀಗ 9 ವರ್ಷಗಳೇ ಕಳೆದಿವೆ ಮನೆಯನ್ನು ಬಿಟ್ಟುಕೊಡುತ್ತಿಲ್ಲ. ಅತ್ತ ಶಾಲಾ ಕಟ್ಟಡವನ್ನು ಪೂರೈಸುತ್ತಿಲ್ಲ ಎಂಬುದು ಶಾಲೆ ನಡೆಯುತ್ತಿರುವ ಜನತಾಮನೆಯ ಮಾಲೀಕರ ಅಳಲಾಗಿದೆ.

ಮೂಲಗಳ ಮಾಹಿತಿ ಪ್ರಕಾರ ಶಾಲಾ ಕಟ್ಟಡ ನಿರ್ಮಾಣದ ಗುತ್ತಿಗೆಯನ್ನು ಮೊದಲಿಗೆ ನೀಡಿದ್ದ ರಾಮಕೃಷ್ಣ ಎಂಬುವರಿಂದ ಮತ್ತೊಬ್ಬ ದೊರೆರಾಜ್ ಎಂಬ ಗುತ್ತಿಗೆದಾರರಿಗೆ ನೀಡಲಾಗಿದೆ. ಆದರೆ ನಿರ್ಮಾಣ ಹಂತದ ಕಟ್ಟಡ ಮಳೆಗಾಳಿಗೆ ಸಿಲುಕಿ ಕಿಟಿಕಿ, ಚೌಕಟ್ಟುಗಳು ಹಾಳಾಗುತ್ತಿವೆ. ಹೀಗೇ ಬಿಟ್ಟಿದ್ದೇ ಆದರೆ ನೆಲಕ್ಕೆ ಉರುಳಿ ಬಿದ್ದರೂ ಅಚ್ಚರಿ ಪಡಬೇಕಾಗಿಲ್ಲ.
ಇಲ್ಲಿನ ಅವ್ಯವಸ್ಥೆ ಬಗ್ಗೆ ಹಿಂದಿನ ಶಾಸಕರಾಗಿದ್ದ ವೆಂಕಟೇಶ್ ಅವರ ಗಮನಕ್ಕೆ ತಂದರೂ ಅವರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಈಗ ನೂತನ ಶಾಸಕ ಮಹದೇವ್ ಅವರ ಗಮನಕ್ಕೆ ತರಲಾಗಿದ್ದು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡುತ್ತಿರುವುದಾಗಿ ಗ್ರಾಮಸ್ಥರು ಹೇಳುತ್ತಾರೆ.
ಇನ್ನಾದರೂ ಸಂಬಂಧಪಟ್ಟ ಶಿಕ್ಷಣ ಅಧಿಕಾರಿಗಳು, ಜನಪ್ರತಿನಿಧಿಗಳು, ಶಾಸಕರು, ಸಚಿವರು ಇತ್ತ ಗಮನಹರಿಸಿ ಬಡ ವಿದ್ಯಾರ್ಥಿಗಳು ವಿದ್ಯೆ ಕಲಿಯಲು ಅನುಕೂಲವಾಗುವಂತೆ ನೆನೆಗುದಿಗೆ ಬಿದ್ದಿರುವ ಕಟ್ಟಡದ ಕಾಮಗಾರಿಗೆ ಚಾಲನೆ ನೀಡಬೇಕಿದೆ.












Click it and Unblock the Notifications