ಪ್ಲಾಸ್ಟಿಕ್ ನಿರ್ಮೂಲನೆಗೆ ಮೈಸೂರು ಮೃಗಾಲಯ ವಿನೂತನ ಉಪಾಯ
ಮೈಸೂರು, ಡಿಸೆಂಬರ್ 28: ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್ ಕಸ ತುಂಬಿರುವ ಈ ದಿನಗಳಲ್ಲಿ ಇಲ್ಲಿನ ಜಯಚಾಮರಾಜೇಂದ್ರ ಮೃಗಾಲಯ ಪ್ಲಾಸ್ಟಿಕ್ ನಿರ್ಮೂಲನೆಗೆ ಹಾಗೂ ಮೃಗಾಲಯವನ್ನು ಸ್ವಚ್ಚವಾಗಿಟ್ಟುಕೊಳ್ಳಲು ವಿನೂತನ ಯೋಜನೆಯೊಂದನ್ನು ಜಾರಿಗೆ ತಂದಿದೆ. ಸಾಮಾನ್ಯವಾಗಿ ಮೃಗಾಲಯಕ್ಕೆ ಬರುವ ಎಲ್ಲ ಪ್ರವಾಸಿಗರೂ ಕುಡಿವ ನೀರಿನ ಬಾಟಲ್ ನ್ನು ಹಿಡಿದುಕೊಂಡೇ ಬರುತ್ತಾರೆ.
ಆದರೆ ಬಾಟಲ್ ಖಾಲಿಯಾದ ಕೂಡಲೇ ಎಲ್ಲೆಂದರಲ್ಲಿ ಬಿಸಾಕಿ ಮುಂದೆ ಹೋಗುತ್ತಾರೆ. ಈ ಖಾಲಿ ಬಾಟಲ್ ಗಳನ್ನು ಎತ್ತಿ ಹೊರಗೆ ಸಾಗಿಸುವುದೇ ಇಲ್ಲಿನ ಸಿಬ್ಬಂದಿಗಳಿಗೆ ತುಂಬಾ ಸಮಯ ಹಾಗೂ ಶ್ರಮ ಹಿಡಿಯುತಿತ್ತು.
ಆದರೆ ಮೃಗಾಲಯದ ನಿರ್ದೇಶಕರು ಕೈಗೊಂಡ ಈ ವಿನೂತನ ಕ್ರಮದಿಂದಾಗಿ ಕಳೆದ ಕೆಲವು ದಿನಗಳಿಂದ ಮೃಗಾಲಯದ ಎಲ್ಲೂ ಹುಡುಕಿದರೂ ಒಂದು ಪ್ಲಾಸ್ಟಿಕ್ ಬಾಟಲಿ ಸಿಗುತ್ತಿಲ್ಲ. ಕಾರಣವೇನು ಗೊತ್ತೇ ? ಮೃಗಾಲಯ ಪ್ರವೇಶಿಸುವ ಎಲ್ಲ ಪ್ರವಾಸಿಗರ ಬಳಿಯಲ್ಲೂ ಇರುವ ಪ್ಲಾಸ್ಟಿಕ್ ಬಾಟಲ್ ನ ಮೇಲೆ ಮೃಗಾಲಯದ ಸಿಬ್ಬಂದಿ ಬಾರ್ ಕೋಡ್ ಅಂಟಿಸಿ 10 ರೂಪಾಯಿಗಳ ಶುಲ್ಕ ಪಡೆಯುತಿದ್ದಾರೆ. ಅವರು ವೀಕ್ಷಣೆ ಮುಗಿಸಿ ಹೊರ ಹೋಗುವಾಗ ಪ್ಲಾಸ್ಟಿಕ್ ಬಾಟಲ್ ತೋರಿಸಿ ಅಥವಾ ಹಿಂತುರುಗಿಸಿ 10 ರೂಪಾಯಿ ವಾಪಸ್ ಪಡೆಯಬಹುದಾಗಿದೆ.
ಈ ವಿನೂತನ ಕ್ರಮಕ್ಕೆ ಪ್ರವಾಸಿಗರಿಂದಲೂ ಪೂರಕ ಸ್ಪಂದನೆ ಸಿಕ್ಕಿದೆ ಎನ್ನುತ್ತಾರೆ ಮೃಗಾಲಯದ ನಿರ್ದೇಶಕ ಅಜಿತ್ ಕುಲಕರ್ಣಿ ಅವರು. ಈ ನೂತನ ಪ್ರಯೋಗಕ್ಕೆ ಪ್ರವಾಸಿಗರೂ ಕೂಡ ಸಹಕಾರ ನೀಡಿದ್ದು , ನೀವು ಇಡೀ ಮೃಗಾಲಯ ಸುತ್ತಿದರೂ ಒಂದೂ ಖಾಲಿ ಬಾಟಲ್ ಕಾಣ ಸಿಗುವುದಿಲ್ಲ ಎಂದೂ ಅವರು ಹೇಳಿದರು.