2814 ಅನಧಿಕೃತ ದೇವಾಲಯ ಅಧಿಕೃತಗೊಳಿಸಲು ಬಿಲ್ ಮಂಡನೆ ಮಾಡಲಿದ್ದಾರೆ ಶಾಸಕ ಎಸ್. ಎ. ರಾಮದಾಸ್
ಮೈಸೂರು, ಸೆಪ್ಟೆಂಬರ್ 18: ಕರ್ನಾಟಕದಲ್ಲಿ ದೇಗುಲ ತೆರವು ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡ್ತಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಅನಧಿಕೃತ ದೇವಾಲಯಗಳ ಅಧಿಕೃತಗೊಳಿಸಲು ಹೊಸ ಬಿಲ್ ಮಂಡನೆ ಮಾಡಲಾಗುತ್ತಿದೆ.
ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಎಸ್. ಎ. ರಾಮದಾಸ್ರವರು ಖಾಸಗಿ ಬಿಲ್ ಮಂಡಿಸಲಿದ್ದಾರೆ. ರಾಜ್ಯದಲ್ಲಿನ 2814 ಅನಧಿಕೃತ ದೇವಾಲಯಗಳನ್ನು ಅಧಿಕೃತಗೊಳಿಸಲು ಕ್ರಮ ಈ ಬಿಲ್ ಮಂಡನೆ ಮಾಡಲಾಗುತ್ತಿದೆ. ಅನಧಿಕೃತ ಹಿಂದೂ ದೇವಾಲಯಗಳ ಕ್ರಮಬದ್ಧಗೊಳಿಸುವಿಕೆ ಕಾಯ್ದೆ- 2021 ಬಿಲ್ ಅನ್ನು ಮಂಡಿಸಲಿದ್ದಾರೆ. ಈ ಕಾಯ್ದೆ ಪಾಸ್ ಮಾಡಲು ವಿಪಕ್ಷಗಳ ಬಳಿಯೂ ಶಾಸಕ ಎಸ್.ಎ. ರಾಮದಾಸ್ ಮನವಿ ಮಾಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿರುವ ಶಾಸಕ ಎಸ್.ಎ. ರಾಮದಾಸ್, ಬಿಲ್ನಲ್ಲಿ ಭವಿಷ್ಯದಲ್ಲಿ ಅನಧಿಕೃತ ದೇವಸ್ಥಾನ ನಿರ್ಮಿಸಿದರೆ ಕಾನೂನು ಕ್ರಮಕ್ಕೂ ಅವಕಾಶ ನೀಡಲಾಗುತ್ತದೆ. ಯಾವುದೇ ಅನಧಿಕೃತ ದೇವಾಲಯ ನಿರ್ಮಾಣವಾಗದಂತೆ ತಡೆಯಲು ಕಾಯ್ದೆ ಜಾರಿಗೆ ತರಲಾಗುತ್ತದೆ. ಬೇಕಾದರೆ ಸರ್ಕಾರ ಈ ಖಾಸಗಿ ಬಿಲ್ ಅನ್ನೂ ಸರ್ಕಾರದ ಬಿಲ್ ಆಗಿ ಮಂಡಿಸಲು ಅವಕಾಶ ಮಾಡಿಕೊಡುತ್ತೇನೆ ಎಂದರು.
ಕಾನೂನು ಮೀರಿ ಪ್ರತಿಮೆ ಸ್ಥಾಪಿಸಬಾರದು
ಮೈಸೂರಿನಲ್ಲಿ ಅನಧಿಕೃತ ವಿಷ್ಣು ಸ್ಮಾರಕ ತೆರವು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಎಸ್.ಎ. ರಾಮದಾಸ್, ಕಾನೂನು ಮೀರಿ ಯಾರೂ ಈ ರೀತಿ ಪ್ರತಿಮೆ ಸ್ಥಾಪಿಸಬಾರದು. ವಿಷ್ಣುವರ್ಧನ್ ಯಾವತ್ತೂ ಕಾನೂನು ಮೀರಿದವರಲ್ಲ. ಅವರ ಪ್ರತಿಮೆ ವಿಚಾರ ವಿವಾದ ಆಗುವುದು ಬೇಡ. ಸುಪ್ರೀಂ ಕೋರ್ಟ್ ಹೇಳಿದೆ, ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಪ್ರತಿಮೆ ನಿರ್ಮಾಣ ತಪ್ಪು ಎಂದು ಕಾನೂನಾತ್ಮಕವಾಗಿ ಭವಿಷ್ಯದಲ್ಲಿ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.
ರಾಜ್ಯದಲ್ಲಿ ದೇವಾಲಯ ತೆರವು ವಿಚಾರ ಬಿಜೆಪಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ. ಪ್ರತಿಪಕ್ಷ ಕಾಂಗ್ರೆಸ್ ಇದನ್ನೇ ಬಂಡವಾಳ ಮಾಡಿಕೊಂಡು ಹೊಸ ರಾಜಕೀಯ ದಾಳ ಉರುಳಿಸುತ್ತಿದೆ. ಹಿಂದೂ ಕಾರ್ಯಕರ್ತರ ಕೆಂಗಣ್ಣಿಗೂ ಬಿಜೆಪಿ ಗುರಿಯಾಗಿದೆ. ಹೀಗಿರುವಾಗಲೇ ಹೊಸ ಬಿಲ್ ಮಂಡನೆ ಆಗ್ತಿರೋದು ಸಾಕಷ್ಟು ಕುತೂಹಲ ಕೆರಳಿಸಿದೆ.ಕೇಂದ್ರ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ವಾಗ್ದಾಳಿ
ಹಿಂದಿ ಭಾಷೆ ಹೇರಿಕೆ ಕೇಂದ್ರ ಸರ್ಕಾರದ ಹುನ್ನಾರವಾಗಿದ್ದು, ಹಿಂದಿ ಭಾಷೆ ಮೂಲಕ ಕನ್ನಡ ತುಳಿಯುವ ಕೆಲಸ ಆಗಿದೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಇಂದು ಮಾತನಾಡಿದ ವಾಟಾಳ್ ನಾಗರಾಜ್, ನಮಗೆ ಕನ್ನಡವೇ ಶಕ್ತಿ, ಕನ್ನಡವೇ ಸಾರ್ವಭೌಮ. ಹಿಂದಿ ಹೇರಿಕೆಗೆ ಬೆಂಬಲ ಕೊಡಬಾರದು. ಬ್ಯಾಂಕ್ ಗಳಲ್ಲಿ ಹಿಂದಿ ಭಾಷೆ ತೆಗಿಯಬೇಕು. ಚೆಕ್ ಗಳೂ ಕೂಡ ಕನ್ನಡದಲ್ಲೇ ಇರಬೇಕು. ಕನ್ನಡಕ್ಕೆ ಗೌರವ ಕೊಡದೆ ಹೋದರೆ ಕನ್ನಡ ಬಿಟ್ಟು ನಿಮ್ಮ ರಾಜ್ಯಕ್ಕೆ ಹೊರಡಿ ಎಂದು ಕಿಡಿಕಾರಿದರು.ನವೆಂಬರ್ 1 ಕರ್ನಾಟಕ ಏಕೀಕರಣ ದಿನ
ಭಾನುವಾರ ಬೆಳಗ್ಗೆ ಬೆಂಗಳೂರಲ್ಲಿ ಹಿಂದಿ ಭೂತ ದಹನ ಮಾಡಲಿದ್ದೇವೆ. ನವೆಂಬರ್ 1 ಕರ್ನಾಟಕ ಏಕೀಕರಣ ದಿನ. ಅಂದು ರಾಜ್ಯೋತ್ಸವ ಜೊತೆಗೆ ಹಿಂದಿ ತೊಲಗಬೇಕು ಎಂದು ಹಿಂದಿ ವಿರೋಧಿ ಕೂಗು ಏಳಲಿದೆ. ಕೇಂದ್ರದ ಮಂತ್ರಿಗಳು ನಮಗೆ ಬೇಕಿಲ್ಲ. ಇದು ಕೇಂದ್ರದ ಗುಲಾಮಗಿರಿ ಸಂಕೇತ. ಕನ್ನಡವೂ ಸಹ ರಾಷ್ಟ್ರ ಭಾಷೆ. ಹಿಂದಿಯಷ್ಟೆ ಕನ್ನಡಕ್ಕೆ ಶಕ್ತಿ ಇದೆ. ಪಾರ್ಲಿಮೆಂಟ್ ಸದಸ್ಯ ಏನು ಮಾಡುತ್ತಿದ್ದಾರೆ. ಇವರಿಗೆ ಜವಾಬ್ದಾರಿ ಇದ್ರೆ ಲೋಕಸಭೆಯಲ್ಲಿ ಸಂಸದರು ಹೋರಾಟ ಮಾಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.
ನಂತರ ಮಾತಾಡಿದ ಅವರು, ಮೈಸೂರು ಭೂ ಹಗರಣ ವಿಚಾರ ಸಂಬಂಧ ತಮಗೆ ಬೇಕಾದ ಗುಲಾಮ ಅಧಿಕಾರಿಗಳನ್ನು ಇಲ್ಲಿ ಇಟ್ಟಿಕೊಂಡರು. ನೆಪ ಮಾತ್ರಕ್ಕೆ ಸಮೀಕ್ಷೆ ಮಾಡಿದರು. ಇದರಲ್ಲಿ ಜಿಲ್ಲಾ ಮಂತ್ರಿಗಳ ಪಾತ್ರವೂ ಇದೆ ಎಂದು ವಾಟಾಳ್ ಆರೋಪಿಸಿದರು.ಭೂ ಹಗರಣದ ಬಗ್ಗೆ ಮನೀಷ್ ಮೌದ್ಗಲ್ಗೆ ಸರ್ವೆ ಮಾಡಲು ಸಂಪೂರ್ಣ ಅಧಿಕಾರ ಇದೆ. ಅದು ಸರ್ವೆ ಇಲಾಖೆ. ಈ ಹಿಂದೆ ಜಿಲ್ಲಾಧಿಕಾರಿ ಆಗಿದ್ದ ರೋಹಿಣಿ ಸಿಂಧೂರಿ ವಿರುದ್ದ ಭೂ ಮಾಫಿಯಾದವರು ಸಾಕಷ್ಟು ಕೆಲಸ ಮಾಡಿದರು. ತಮಗೆ ಬೇಕಾದ ಗುಲಾಮ ಅಧಿಕಾರಿಗಳನ್ನು ಇಲ್ಲಿ ಇಟ್ಟಿಕೊಂಡರು. ನೆಪ ಮಾತ್ರಕ್ಕೆ ಸಮೀಕ್ಷೆ ಮಾಡಿದ್ದು, ಇದರಲ್ಲಿ ಜಿಲ್ಲಾ ಮಂತ್ರಿಗಳ ಪಾತ್ರವೂ ಇದೆ ಎಂದು ದೂರಿದರು.
ಮೈಸೂರಿನಲ್ಲಿ ಭೂ ಮಾಫಿಯಾ ಹೆಚ್ಚಾಗಿದೆ
ನೀವು ಎರಡನೇ ತನಿಖೆ ಯಾಕೆ ವಿರೋಧ ಮಾಡಿದಿರಿ. ತನಿಖೆ ಆಗಲಿ ಬಿಡಿ. ಮೊದಲ ತನಿಖೆ ಸತ್ಯವಾಗಿದೆಯೊ ಇಲ್ಲವೋ ಗೊತ್ತಾಗಲಿದೆ. ಎರಡನೆ ತನಿಖೆ ರದ್ದು ಮಾಡಿದ್ದು ಯಾರು? ನಿಮಗೆ ರದ್ದು ಮಾಡಲು ಯಾವ ನೈತಿಕ ಹಕ್ಕಿದೆ ಎಂದು ವಾಟಾಳ್ ನಾಗರಾಜ್ ಪ್ರಶ್ನಿಸಿದರು.
ಮೈಸೂರಿನಲ್ಲಿ ಭೂ ಮಾಫಿಯಾ ಹೆಚ್ಚಾಗಿದೆ. ಇದು ಗಂಭೀರ ಪರಿಸ್ಥಿತಿ. ಶಾಸನಸಭೆಯಲ್ಲೂ ಇದು ಚರ್ಚೆ ಆಗಲಿಲ್ಲ. ಇದು ಚರ್ಚೆ ಆಗಬೇಕಾಗಿತ್ತು. ಯಾರೊ ಒಬ್ಬ ಸದಸ್ಯ ರೋಹಿಣಿ ಸಿಂಧೂರಿ ವಿರುದ್ಧ ಗುಡುಗಿದ್ದಾರೆ. ಹಕ್ಕುಚ್ಯುತಿ ಇರೋದು ಸದನದಲ್ಲಿ ತೊಂದರೆ ಆದಾಗ. ವೈಯಕ್ತಿಕವಾಗಿ ಅಲ್ಲ. ಶಾಸನಸಭೆ ಸ್ವಾರ್ಥಕ್ಕೆ ಬಳಕೆ ಆಗಿದೆ. ಶಾಸನಸಭೆ ದನದ ಕೊಟ್ಟಿಗೆಗಿಂತ ಹಿಂದೆ ಬಿದ್ದಿದೆ. ಶಾಸನಸಭೆಗೆ ಗಾಂಭೀರ್ಯ, ಅದರ ಶಕ್ತಿ ದುರುಪಯೋಗ ಮಾಡಿಕೊಳ್ಳಬಾರದು. ಮನಿಷ್ ಮೌದ್ಗಿಲ್ ಸಮಿತಿ ತನಿಖೆ ಮಾಡಲೇಬೇಕು ಎಂದು ಆಗ್ರಹಿಸಿದರು.