ಸರಳವಾಗಿ ನಡೆದ ನಂಜನಗೂಡು ದೊಡ್ಡ ಜಾತ್ರೆ
ಮೈಸೂರು, ಮಾರ್ಚ್ 26; ಸ್ಥಳೀಯ ಭಕ್ತಾಧಿಗಳ ಭಾರೀ ವಿರೋಧದ ನಡುವೆಯೂ ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ನಂಜನಗೂಡು ದೊಡ್ಡ ಜಾತ್ರೆ ಸರಳವಾಗಿ ನಡೆಯಿತು.
ಮೈಸೂರು ಸೇರಿದಂತೆ ರಾಜ್ಯದಲ್ಲಿ ಕೊರೊನಾ 2ನೇ ಅಲೆಯ ಅಬ್ಬರ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಗೌತಮ ಮಹಾರಥಕ್ಕೆ ಜಿಲ್ಲಾಡಳಿತ ಅನುಮತಿ ನಿರಾಕರಣೆ ಮಾಡಿತ್ತು.
ಈ ನಡುವೆ ಮಹಾರಥೋತ್ಸವವನ್ನು ಎಂದಿನಂತೆ ಅದ್ದೂರಿಯಾಗಿ ಆಚರಿಸಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಕನ್ನಡ ವಾಟಾಳ್ ನಾಗರಾಜ್ ಸೇರಿದಂತೆ ಸ್ಥಳೀಯರು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸುವ ಜೊತೆಗೆ ಒಂದು ದಿನದ ಮಟ್ಟಿಗೆ ನಂಜನಗೂಡು ಬಂದ್ ಸಹ ಆಚರಿಸಿದ್ದರು.

ಆದರೆ, ಕೊರೊನಾ ಸೋಂಕಿನ ಆತಂಕದಿಂದಾಗಿ ಜಿಲ್ಲಾಡಳಿತ ಗೌತಮ ಮಹಾರಥೋತ್ಸವ ಆಚರಿಸಲು ಸಮ್ಮತಿ ನೀಡಲು ನಿರಾಕರಿಸಿತ್ತು. ಹೀಗಾಗಿ ಚಿಕ್ಕ ತೇರಿನಲ್ಲೇ ಶ್ರೀಕಂಠೇಶ್ವರನ ರಥೋತ್ಸವ ನಡೆಸಲಾಯಿತು.
ಕೋವಿಡ್-19 ಸೋಂಕಿನ ಕಾರಣಕ್ಕೆ ಹೆಚ್ಚಿನ ಭಕ್ತರು ಸೇರುವುದಕ್ಕೂ ಕಡಿವಾಣ ಹಾಕಿದ್ದರ ಪರಿಣಾಮ, ಕಡಿಮೆ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ರಥೋತ್ಸವ ಸರಳವಾಗಿ ನೆರವೇರಿತು.
ಗಣಪತಿ, ನಂಜುಂಡೇಶ್ವರ, ಪಾರ್ವತಿ, ಸುಬ್ರಹ್ಮಣ್ಯ, ಚಂಡಿಕೇಶ್ವರ ಉತ್ಸವ ಮೂರ್ತಿಗಳನ್ನು ರಥೋತ್ಸವ ನಡೆಸಲಾಯಿತು. ಬೆಳಗ್ಗೆ 6ರಿಂದ 7ರವರೆಗೆ ಸಲ್ಲುವ ಶುಭ ಲಗ್ನದಲ್ಲಿ ಶಿವ, ಪಾರ್ವತಿ, ಚಂಡಿಕೇಶ್ವರ, ಗಣಪತಿ, ಸುಬ್ರಮಣ್ಯ ರಥೋತ್ಸವ ನಡೆಯುವ ಮೂಲಕ ನಂಜುಂಡೇಶ್ವರನಿಗೆ ಜೈಕಾರ ಮೊಳಗಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ಪಂಚ ಮಹಾರಥೋತ್ಸವದ ದೊಡ್ಡ ರಥವನ್ನು ಈ ಬಾರಿ ಎಳೆಯಲಿಲ್ಲ. ಹೀಗಾಗಿ 5 ಸಣ್ಣ ರಥಗಳನ್ನು ಎಳೆಯಲಾಯಿತು.
ಈ ವೇಳೆ ಕೇವಲ ಪಾಸ್ ಹೊಂದಿರುವ ಸ್ಥಳೀಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಕೊರೊನಾ ಕಾರಣದಿಂದ ಹೊರ ಜಿಲ್ಲೆ, ರಾಜ್ಯದ ಭಕ್ತರಿಗೆ ರಥೋತ್ಸವದಲ್ಲಿ ಪಾಲ್ಗೊಳ್ಳಲು ಅನುಮತಿ ಇರಲಿಲ್ಲ.
ರಥೋತ್ಸವದ ಹಿನ್ನೆಲೆಯಲ್ಲಿ ದೇವಾಲಯದ ಸುತ್ತ ಬ್ಯಾರಿಕೇಡ್ ಹಾಕಿ ಹೆಚ್ಚಿನ ಜನರು ಸೇರುವುದನ್ನು ಪೊಲೀಸರು ತಡೆಯುತ್ತಿದ್ದರು. ಪ್ರತಿ ವರ್ಷ ದೇವಾಲಯದ ಸುತ್ತ, ತೇರಿನ ಬೀದಿಯಲ್ಲಿ ಲಕ್ಷಾಂತರ ಭಾರೀ ಸಂಖ್ಯೆಯಲ್ಲಿ ಭಕ್ತಸಾಗರವೇ ಹರಿದು ಬರುತ್ತಿತ್ತು.












Click it and Unblock the Notifications