ಉಪಚುನಾವಣಾ ಅಂಗಳದಲ್ಲಿ ದೊಡ್ಡಜಾತ್ರಾ ಸಂಭ್ರಮ
ಒಂದೆಡೆ ಉಪಚುನಾವಣೆಯ ರಂಗು, ಇನ್ನೊಂದೆಡೆ ಜಾತ್ರೆಯ ಸಂಭ್ರಮ ಸೇರಿ ನಂಜನಗೂಡಿನಾದ್ಯಂತ ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ.
ಮೈಸೂರು, ಏಪ್ರಿಲ್ 7: ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾಗಿರುವ ಮೈಸೂರು ಜಿಲ್ಲೆಯ ನಂಜನಗೂಡಿನ ನಂಜುಂಡೇಶ್ವರನಿಗೆ ಇಂದು ದೊಡ್ಡಜಾತ್ರಾ ಸಂಭ್ರಮ. ಒಂದೆಡೆ ಉಪಚುನಾವಣೆಯ ರಂಗು, ಇನ್ನೊಂದೆಡೆ ಜಾತ್ರೆಯ ಸಂಭ್ರಮ ಸೇರಿ ನಂಜನಗೂಡಿನಾದ್ಯಂತ ಹಬ್ಬದ ವಾತಾವರಣವನ್ನು ಸೃಷ್ಟಿಸಿದೆ.
ಶುಕ್ರವಾರ ಬೆಳಗ್ಗೆ 5.20 ರಿಂದ 6.20 ರ ಮಖಾ ನಕ್ಷತ್ರದ ಮೀನ ಲಗ್ನದಲ್ಲಿ ಲಕ್ಷಾಂತರ ಭಕ್ತಾದಿಗಳ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಗೌತಮ, ಪಾರ್ವತಿದೇವಿ, ಗಣಪತಿ, ಸುಬ್ರಹ್ಮಣ್ಯೇಶ್ವರ, ಚಂಡಿಕೇಶ್ವರ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಿತು.[ಈ ಬಾರಿ ಗೆಲುವು ನನ್ನದೇ ಬರೆದಿಟ್ಟುಕೊಳ್ಳಿ : ಕಳಲೆ ವಿಶ್ವಾಸ]
ಸಾಲಂಕೃತ ಶ್ರೀಕಂಠೇಶ್ವರ
89 ಅಡಿ ಎತ್ತರದ ಅಲಂಕೃತ ಗೌತಮ ರಥ ಶ್ರೀಕಂಠೇಶ್ವರ ಜಾತ್ರೆಯ ಕೇಂದ್ರ ಬಿಂದುವಾಗಿದೆ. 100 ಟನ್ ತೂಕದ ರಥ ಎಳೆಯಲು 240 ಅಡಿ ಉದ್ದದ ಹಗ್ಗವನ್ನು ಬಳಕೆ ಮಾಡಲಾಗಿದೆ. ಸುಮಾರು 89 ಅಡಿ ಎತ್ತರದ ಅಲಂಕೃತ ಗೌತಮ ರಥದಲ್ಲಿ ಶ್ರೀಕಂಠೇಶ್ವರ ಕಂಗೊಳಿಸುತ್ತಿದ್ದಾನೆ.[ಪೌಡರ್ ಹಾಕೊಳ್ಳಿ, ತಲೆ ಬಾಚ್ಕೊಳ್ಳಿ, ಕಡ್ಡಾಯವಾಗಿ ಮತಹಾಕಿ!]
ಬಿಗಿ ಬಂದೋಬಸ್ತ್
ಪುಣ್ಯಸ್ನಾನಕ್ಕೆ ಬರುವ ಭಕ್ತರಿಗಾಗಿ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ತಾತ್ಕಾಲಿಕವಾಗಿ 35 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, 7 ಮೊಬೈಲ್ ವಾಚ್ ಟವರ್ ಬಂದು ಹೋಗುವ ಜನರ ಮೇಲೆ ಕಣ್ಣಿರಿಸಲಿದೆ. ಅತ್ಯಂತ ಬಿಗಿ ಬಂದೋಬಸ್ತ್ ನಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ವಿಶೇಷ ಕ್ರಮ ವಹಿಸಿರುವ ಜಿಲ್ಲಾ ಪೊಲೀಸರು ಹದ್ದಿನ ಕಣ್ಣಿರಿಸಿದ್ದಾರೆ.[ಉಪಚುನಾವಣೆ ದಿಕ್ಸೂಚಿ ಚುನಾವಣೆಯಲ್ಲ : ಸಿದ್ದರಾಮಯ್ಯ]
ಕೃತಾರ್ಥರಾದ ಲಕ್ಷಾಂತರ ಭಕ್ತರು
ದೂರದ ಊರುಗಳಿಂದ ಆಗಮಿಸಿದ ಲಕ್ಷಾಂತರ ಭಕ್ತಾದಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ನಂಜುಂಡೇಶ್ವರನ ಕೃಪೆಗೆ ಪಾತ್ರರಾಗುತ್ತಿದ್ದಾರೆ.
ಹೂತುಹೋದ ರಥದ ಚಕ್ರ
ರಥೋತ್ಸವ ನಡೆಯುತ್ತಿದ್ದ ಸಮುದಲ್ಲಿ, ಶ್ರೀಕಂಠೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದ ಗೌತಮ ರಥದ ಮುಂಭಾಗದಲ್ಲಿರುವ ಎಡಬದಿಯ ಚಕ್ರ ರಸ್ತೆಯಲ್ಲಿ ಹೂತುಕೊಂಡು ನಿಂತುಬಿಟ್ಟಿತ್ತು. ಇದರಿಂದಾಗಿ ಭಕ್ತರು ಕ್ಷಣಕಾಲ ಆತಂಕ ಪಡುವಂತಾಯಿತು. ನಂತರ ಒಂದು ಕ್ರೇನ್ ಹಾಗೂ ಎರಡು ಜೆಸಿಬಿ ಗಳಿಂದ ರಥದ ಚಕ್ರವನ್ನು ಮೇಲಾಯಿತು.
ರಥದ ಹೊಣೆಹೊತ್ತವರಿಗೆ ವಿಮೆ ಸೌಲಭ್ಯ
ಇದೇ ಮೊದಲ ಬಾರಿಗೆ ರಥೋತ್ಸವದಲ್ಲಿ ಭಾಗವಹಿಸುವ 112 ಸಿಬ್ಬಂದಿಗಳಿಗೆ ಮುಜರಾಯಿ ಇಲಾಖೆಯಿಂದ 2 ಲಕ್ಷ ರೂ. ಗಳ ವಿಮಾ ಸೌಲಭ್ಯ ಒದಗಿಸಲಾಗಿದೆ. ಇತ್ತೀಚೆಗೆ ಬಳ್ಳಾರಿಯ ಪ್ರಸಿದ್ಧ ಕೊಟ್ಟೂರು ಜಾತ್ರೆಯಲ್ಲಿ ರಥೋತ್ಸವದ ಸಂದರ್ಭದಲ್ಲಿ ನಡೆದ ಅವಘಡ ಹಾಗೂ ಕಳೆದ ಎರಡು ವರ್ಷಗಳಲ್ಲಿ ನಂಜನಗೂಡಿನ ನಂಜುಡೇಶ್ವರನ ಪಂಚ ರಥೋತ್ಸವ ವೇಳೆ ಉಂಟಾದ ಅವಘಡಗಳ ಹಿನ್ನೆಲ್ಲೆಯಲ್ಲಿ ಪಂಚ ರಥೋತ್ಸವದ ಹೊಣೆ ಹೊರುವ ವ್ಯಕ್ತಿಗಳಿಗೆ ಅಪಘಾತ ವಿಮೆ ಮಾಡಿಸಲಾಗಿದೆ.