ನಂಜನಗೂಡಲ್ಲಿ ಸಿದ್ದರಾಮಯ್ಯ – ಯಡಿಯೂರಪ್ಪ ಕಾರು ಮುಖಾಮುಖಿ
ಮೈಸೂರು, ಮಾರ್ಚ್ 31: ನಂಜನಗೂಡಿನಲ್ಲಿ ಪ್ರಚಾರದ ವೇಳೆ ಬದನವಾಳು ಗ್ರಾಮದ ಬಳಿಯ ರಸ್ತೆಯಲ್ಲಿ ಸಿದ್ದರಾಮಯ್ಯ - ಯಡಿಯೂರಪ್ಪ ಕಾರು ಮುಖಾಮುಖಿಯಾದ ಘಟನೆ ನಡೆಯಿತು. ಇಬ್ಬರ ಕಾರುಗಳು ಅಕ್ಕ- ಪಕ್ಕದಲ್ಲೇ ಚಲಿಸುತ್ತಾ ಸಾಗಿದವು.
ಮುಖ್ಯಮಂತ್ರಿ ತೆರಳುವ ಮಾರ್ಗದಲ್ಲಿ ಯಡಿಯೂರಪ್ಪನವರ ವಾಹನ ಟ್ರಾಫಿಕ್ಗೆ ಸಿಲುಕಿತು. ನಂತರ ಪೊಲೀಸ್ ಸಿಬ್ಬಂದಿಗಳು ಬಂದು ಟ್ರಾಫಿಕ್ ನಿಂದ ಯಡಿಯೂರಪ್ಪನವರ ಕಾರನ್ನು ಬಿಡಿಸಿ ಕರೆದೊಯ್ದರು.[ಉಪಚುನಾವಣೆ ರಾಜಕೀಯ: ಧರ್ಮ ಸಂಕಟದಲ್ಲಿ ಸಿಲುಕಿದರೇ ಸುತ್ತೂರು ಶ್ರೀಗಳು]
ಉಪಚುನಾವಣೆ ಹಿನ್ನೆಲೆಯಲ್ಲಿ ಇಂದು ನಂಜನಗೂಡಿನಲ್ಲಿ ಮತಬೇಟೆಗೆ ಇಳಿದ ಸಿಎಂ ಸಿದ್ದರಾಮಯ್ಯ, ಗೋಳೂರು ಗ್ರಾಮದಿಂದ ಮೊದಲ ಪ್ರಚಾರ ಕಾರ್ಯ ಆರಂಭಿಸಿದರು. ಗ್ರಾಮದಲ್ಲಿ ಕಾಲ್ನಡಿಗೆ ಮೂಲಕ ಮತಯಾಚನೆ ನಡೆಸಿದರು. ದೇವಾಲಯದ ಆವರಣದಲ್ಲಿ ನಿಂತು ಮತಯಾಚನೆ ಮಾಡಿದ ಸಿಎಂ ಸಿದ್ದರಾಮಯ್ಯ ನವರನ್ನು ನೋಡಲು ಗೋಳೂರು ಗ್ರಾಮದ ಜನತೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸಿಎಂಗೆ ಸಚಿವ ಮಹದೇವಪ್ಪ, ಸಂಸದ ಧೃವನಾರಾಯಣ್, ಹಾಗೂ ಹಲವು ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.
ನಂತರ ಸಿಎಂ ಸಿದ್ದರಾಮಯ್ಯ ಬದನವಾಳು ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಗ್ರಾಮದ ಪ್ರಮುಖ ವೃತ್ತದಲ್ಲಿ ನಿಂತು, ಬದನವಾಳು ಪ್ರಕರಣದ ವಿಚಾರವನ್ನು ಪ್ರಸ್ತಾಪಿಸದೆ ಮತಯಾಚನೆ ಮಾಡಿದರು. ಜತೆಗೆ ಅಭ್ಯರ್ಥಿ ಕಳಲೆ ಕೇಶವಮೂರ್ತಿಯೂ ಇದ್ದರು.[ಮೈಸೂರಿನಲ್ಲಿ ಮುಖ್ಯಮಂತ್ರಿ: ಉಪಚುನಾವಣಾ ಕಣಕ್ಕೆ ಬಂತು ಕಳೆ]
ಸಿದ್ದರಾಮಯ್ಯ ಪ್ರಚಾರದಿಂದ ರಂಗೇರಿದ ಕಣ
ಪ್ರಚಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ದುಮುಕುತ್ತಿದ್ದಂತೆ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣಾ ಕಣ ರಂಗೇರಿದೆ. ಇಂದಿನಿಂದ ಏಪ್ರಿಲ್ 7ರ ವರೆಗೂ ಸಿಎಂ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.