Kuvempu Express: ತಾಳಗುಪ್ಪ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲಿಗೆ 'ಕುವೆಂಪು ಎಕ್ಸ್ಪ್ರೆಸ್' ಎಂದು ನಾಮಕರಣ
ಮೈಸೂರು ಅಕ್ಟೋಬರ್ 8: ಮೈಸೂರು - ಶಿವಮೊಗ್ಗ ನಡುವೆ ಸಂಚರಿಸುವ ತಾಳಗುಪ್ಪ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲಿಗೆ ಮಹಾಕವಿ ಕುವೆಂಪು ಅವರ ಹೆಸರು ಬದಲಾಯಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ರೈಲ್ವೆ ಸಚಿವರ ಜೊತೆ ಮಾತನಾಡಿ ತಾಳಗುಪ್ಪ ಇಂಟರ್ ಸಿಟಿ ಎಕ್ಸ್ಪ್ರೆಸ್ ರೈಲಿಗೆ ಮಹಾಕವಿ ಕುವೆಂಪು ಅವರ ಹೆಸರು ಬದಲಾಯಿಸಲು ಒಪ್ಪಿಗೆ ಪಡೆದಿದ್ದಾರೆ. ಹೀಗಾಗಿ ಮೈಸೂರು-ತಾಳಗುಪ್ಪ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲಿಗೆ ಕುವೆಂಪು ಎಕ್ಸ್ಪ್ರೆಸ್ ಎಂದು ನಾಮಕರಣ ಮಾಡಲಾಗಿದೆ.
ಫೆಬ್ರವರಿ ತಿಂಗಳಿನಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ, ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರನ್ನು ಬದಲಾಯಿಸಬೇಕೆಂದು ದೆಹಲಿಯಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಲಿಖಿತ ಮನವಿ ಸಲ್ಲಿಸಿದ್ದರು. ಈಗಾಗಲೆ ಸಾಕಷ್ಟು ಜನರು ರೈಲಿನ ಹೆಸರನ್ನು ಬದಲಾಯಿಸಲು ಒತ್ತಾಯ ಮಾಡಿದ್ದಾರೆ. ಏಕೆಂದರೆ ಮೈಸೂರಿಗೆ ರೈಲು ಸಂಪರ್ಕ ತರಬೇಕೆಂಬುದು ಮೈಸೂರಿನ ಒಡೆಯರ್ ವಂಶಸ್ಥರ ಕನಸಾಗಿತ್ತು. ಅದಕ್ಕಾಗಿ ಸಾಕಷ್ಟು ಶ್ರಮಿಸಿದ್ದರು. ಹಾಗಾಗಿ ಟಿಪ್ಪು ಎಕ್ಸ್ಪ್ರೆಸ್ ಹೆಸರಿನ ಬದಲು ಒಡೆಯರ್ ಎಕ್ಸ್ಪ್ರೆಸ್ ಎಂದು ಬದಲಾಯಿಸುತ್ತೇವೆ ಎಂದು ತಿಳಿಸಿದ್ದರು.
ಕೆಳಗೆ ವಿವರಿಸಿದಂತೆ 08.10.2022 ರಿಂದ ಜಾರಿಗೆ ಬರುವಂತೆ ಈ ಕೆಳಗಿನ ಎಕ್ಸ್ಪ್ರೆಸ್ ರೈಲುಗಳನ್ನು ಮರುನಾಮಕರಣ ಮಾಡಲು ನಿರ್ಧರಿಸಲಾಗಿದೆ: -
1.ರೈಲು ಸಂಖ್ಯೆ 16221/16222 ತಾಳಗುಪ್ಪ - ಮೈಸೂರು - ತಾಳಗುಪ್ಪ ಎಕ್ಸ್ಪ್ರೆಸ್ ಅನ್ನು ಕುವೆಂಪು ಎಕ್ಸ್ಪ್ರೆಸ್ ಎಂದು ಮರುನಾಮಕರಣ ಮಾಡಲಾಗುತ್ತದೆ.
2. ರೈಲು ಸಂಖ್ಯೆ 12613/12614 ಮೈಸೂರು - ಕೆಎಸ್ಆರ್ ಬೆಂಗಳೂರು - ಮೈಸೂರು ಟಿಪ್ಪು ಎಕ್ಸ್ಪ್ರೆಸ್ ಅನ್ನು ಒಡೆಯರ್ ಎಕ್ಸ್ಪ್ರೆಸ್ ಎಂದು ಮರುನಾಮಕರಣ ಮಾಡಲಾಗುತ್ತದೆ.
ಮೈಸೂರು - ಶಿವಮೊಗ್ಗ - ತಾಳಗುಪ್ಪ ಇಂಟರ್ ಸಿಟಿ ಎಕ್ಸ್ಪ್ರೆಸ್ ರೈಲಿಗೆ ನಮ್ಮ ಮಹಾಕವಿ ಕುವೆಂಪು ಅವರ ಹೆಸರಿಡುವಂತೆ ನನ್ನ ಗೆಳೆಯ ಮತ್ತು ಸಂಸದ @mepratap ಅವರಿಗೆ ಸಲಹೆ ನೀಡಿದ್ದೆ. ಅವರು ರೈಲ್ವೆ ಸಚಿವರ ಜೊತೆ ಮಾತನಾಡಿ ಕುವೆಂಪು ಅವರ ಹೆಸರಿಗೆ ಒಪ್ಪಿಗೆ ಕೊಡಿಸಿದ್ದಾರೆ. ಪ್ರತಾಪ್ ಸಿಂಹ ಅವರಿಗೆ ತುಂಬು ಹೃದಯದ ವಂದನೆಗಳು.
— DP SATISH (@dp_satish) October 7, 2022
ರೈಲ್ವೇ ಇಲಾಖೆ ಟಿಪ್ಪು ಎಕ್ಸ್ ಪ್ರೆಸ್ ರೈಲಿನ ಹೆಸರನ್ನು ಬದಲಾಯಿಸಲಾಗಿದೆ ಎಂದು ಪ್ರಕಟಣೆ ಹೊರಡಿಸಿದ ಬೆನ್ನಲ್ಲೆ ಸಂಸದ ಪ್ರತಾಪ್ ಸಿಂಹ ಟ್ವೀಟ್ ಮೂಲಕ ರೈಲ್ವೆ ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು ಮುಂದೆ ಟಿಪ್ಪು ಎಕ್ಸ್ಪ್ರೆಸ್ ಬದಲು " ಒಡೆಯರ್ ಎಕ್ಸ್ಪ್ರೆಸ್" ನಿಮಗೆ ಸೇವೆ ನೀಡಲಿದೆ .ಮೈಸೂರು-ತಾಳಗುಪ್ಪ ರೈಲು "ಕುವೆಂಪು ಎಕ್ಸ್ಪ್ರೆಸ್ '' ಆಗಲಿದೆ. ಥಾಂಕ್ಯೂ ಅಶ್ವಿನಿ ವೈಷ್ಣವ್ ಜಿ ಮತ್ತು ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತ ಪ್ರಹ್ಲಾದ್ ಜೋಶಿ ಸರ್" ಎಂದು ಪ್ರತಾಪ್ ಸಿಂಹ ಟ್ವೀಟ್ ಮಾಡಿದ್ದಾರೆ. ಟಿಪ್ಪು ಹೆಸರಿನ ವಿರುದ್ಧ ಬಿಜೆಪಿ ಸಮರ ಸಾರುತ್ತಿರುವುದು ಇದೇ ಮೊದಲೇನಲ್ಲ, ಈಗಾಗಲೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಆರಂಭಿಸಿದ್ದ ಟಿಪ್ಪು ಜಯಂತಿ ಆಚರಣೆಯನ್ನು ನಿಲ್ಲಿಸಿದೆ. ಜೊತೆಗೆ 7 ನೇ ತರಗತಿ ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ಪಠ್ಯವನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ, ಆದರೆ 6 ಹಾಗೂ 10 ನೇ ತರಗತಿಯಲ್ಲಿ ಟಿಪ್ಪು ಪಠ್ಯವನ್ನು ಉಳಿಸಿದೆ.