ಇಸ್ರೋ ಯುವವಿಜ್ಞಾನಿ ಕಾರ್ಯಕ್ರಮದಲ್ಲಿ ಮೈಸೂರು ವಿದ್ಯಾರ್ಥಿ
ಮೈಸೂರು, ಜೂನ್ 27: ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋ ಆಯೋಜಿಸಿರುವ ಯುವ ವಿಜ್ಞಾನಿ ಕಾರ್ಯಕ್ರಮಕ್ಕೆ ಮೈಸೂರಿನ ವಿದ್ಯಾರ್ಥಿಯೊಬ್ಬರು ಆಯ್ಕೆಯಾಗಿ ತರಬೇತಿ ಪಡೆದು ಭೇಷ್ ಎನಿಸಿಕೊಂಡಿದ್ದಾರೆ.
ಶಾಲಾ ಮಕ್ಕಳಲ್ಲಿ ಬಾಹ್ಯಾಕಾಶ ವಿಜ್ಞಾನ ಮತ್ತು ಸಂಶೋಧನೆಯಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಆಯೋಜಿಸಿರುವ ಕಾರ್ಯಕ್ರಮ ಯುವ ವಿಜ್ಞಾನಿ ಕಾರ್ಯಕ್ರಮದಲ್ಲಿ ಮೈಸೂರಿನ ಜವಾಹರ್ ನವೋದಯ ವಿದ್ಯಾಲಯದ 10ನೇ ತರಗತಿ ವಿದ್ಯಾರ್ಥಿ ಎಂ.ಭರತೇಶ್ವರ್ ತರಬೇತಿ ಪಡೆದುಕೊಂಡಿದ್ದಾರೆ.
ರಾಜ್ಯದಿಂದ ತರಬೇತಿ ಪಡೆದ ಮೂವರು ವಿದ್ಯಾರ್ಥಿಗಳಲ್ಲಿ ಭರತೇಶ್ವರ್ ಕೂಡ ಒಬ್ಬರು. ಇಸ್ರೋ ಈ ಕಾರ್ಯಕ್ರಮಕ್ಕೆ ದೇಶದಾದ್ಯಂತ ಒಟ್ಟು 111 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿತ್ತು. ಮೇ 13 ರಿಂದ ಮೇ 25ರವರೆಗೆ ವಿದ್ಯಾರ್ಥಿಗಳಿಗೆ ಇಸ್ರೋದ ನಾಲ್ಕು ಕೇಂದ್ರಗಳಲ್ಲಿ ಬಾಹ್ಯಾಕಾಶ ವಿಜ್ಞಾನದ ಬಗ್ಗೆ ತರಬೇತಿ ಕಾರ್ಯಕ್ರಮ ಆಯೋಜಿಸಿತ್ತು. ಭರತೇಶ್ವರ್ ಒಳಗೊಂಡಂತೆ 26 ಮಂದಿ ಇಸ್ರೋದ ಬೆಂಗಳೂರಿನ ಕೇಂದ್ರದಲ್ಲಿ ತರಬೇತಿ ಪಡೆದಿದ್ದಾರೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲೂ ಮೂರು ದಿನಗಳ ತರಬೇತಿ ನೀಡಲಾಗಿತ್ತು.

ಈ ಕುರಿತು ಮಾತನಾಡಿದ ಭರತ್, ನಾವು ಬೆಂಗಳೂರಿನಿಂದ ಶ್ರೀಹರಿಕೋಟಾಗೆ ಭೇಟಿ ನೀಡಿ ಇಸ್ರೋ ಮುಖ್ಯಸ್ಥ ಕೆ.ಸಿವನ್ ಅವರೊಂದಿಗೆ ಮಾತುಕತೆ ನಡೆಸಿದೆವು. ಈ ಸಂದರ್ಭ ಅವರು ಯುವ ಜನಾಂಗಕ್ಕೆ ಬೇಕಾದ ಕೆಲವು ವಿಚಾರಗಳನ್ನು ವಿವರಿಸಿದರು. ಬಾಹ್ಯಾಕಾಶ ವಿಜ್ಞಾನ ಮತ್ತು ಇಸ್ರೋ ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡೆವು. ಇಸ್ರೊದ ಕಾರ್ಯಕ್ರಮಗಳು ಯಾವುವು, ಯುವ ವಿಜ್ಞಾನಿಗಳಿಂದ ಇಸ್ರೋ ಏನನ್ನು ಬಯಸುತ್ತದೆ ಎಂಬುದನ್ನೂ ತಿಳಿದುಕೊಂಡೆವು ಎಂದು ಸಂತೋಷದಿಂದ ಉತ್ತರಿಸಿದರು.
ಅತ್ಯಾಧುನಿಕ ಟೆಲಿಸ್ಕೋಪ್ ಮೂಲಕ ಚಂದ್ರನನ್ನು ಸಮೀಪದಿಂದ ನೋಡುವ ಅವಕಾಶ ಲಭಿಸಿತು. ಜುಲೈ 15ರಂದು ನಭಕ್ಕೆ ನೆಗೆಯಲಿರುವ ಚಂದ್ರಯಾನ -2 ಬಾಹ್ಯಾಕಾಶ ನೌಕೆಯನ್ನೂ ನೋಡಿದೆವು ಎಂದು ತಮ್ಮ ಅನುಭವ ಹಂಚಿಕೊಂಡರು.
ಹೈಸ್ಕೂಲ್ ನಲ್ಲಿ ಮಕ್ಕಳ ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಯ ಆಧಾರದ ಮೇಲೆ ಈ ಕಾರ್ಯಕ್ರಮಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಶಾಲಾ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ಹಾಗೂ ತಂತ್ರಜ್ಞಾನಗಳ ಬಗ್ಗೆ ಅರಿವಿನೊಂದಿಗೆ ಆಸಕ್ತಿ ಹುಟ್ಟಿಸುವುದೇ ಈ ಕಾರ್ಯಕ್ರಮದ ಮೂಲ ಉದ್ದೇಶ.












Click it and Unblock the Notifications