ಪರಿಸರ ಸಂರಕ್ಷಣೆಯಲ್ಲಿ ಬದುಕು ಕಂಡುಕೊಂಡ ಮೈಸೂರಿನ ಮಹಿಳೆ: ಇವರ ಬಗ್ಗೆ ತಿಳಿಯಲೇಬೇಕಾದ ಮಾಹಿತಿ
ಮೈಸೂರು, ಡಿಸೆಂಬರ್ 22: ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಿ ಗಿಡಮರಗಳನ್ನು ಬೆಳೆಸಬಹುದಾದ ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟು ಪೋಷಣೆ ಮಾಡುತ್ತಾ ಬಂದಿರುವುದಲ್ಲದೆ, ಇತರೆ ಸಾಮಾಜಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಗಮನಸೆಳೆಯುತ್ತಿರುವ ಮಹಿಳೆಯರೊಬ್ಬರ ಯಶೋಗಾಥೆ ಇದಾಗಿದೆ.
ಸಾಧನೆ ಮಾಡುವ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಯೋಗಗುರು, ಆಧ್ಯಾತ್ಮಚಿಂತಕಿ, ಪರಿಸರ ಸಂರಕ್ಷಕಿ ರೂಪ ನಿದರ್ಶನರಾಗಿದ್ದಾರೆ. ಇವರು ಸುಮಾರು ಎರಡು ಲಕ್ಷಕ್ಕೂ ಹೆಚ್ಚು ದೇಸಿಯ ಸಸಿಗಳನ್ನು ಬೆಳೆಸಿದ್ದಲ್ಲದೆ, ಗಿಡ ಮರಗಳ ಸಂರಕ್ಷಣೆ ಮಾಡಿ ಎಲ್ಲರ ಗಮನಸೆಳೆದಿದ್ದಾರೆ.

ರೂಪ ಅವರು ಬೆಂಗಳೂರಿನವರಾಗಿದ್ದು, ಜೀವನ್ ಮುಕ್ತಿ ಸೇವಾ ಸಂಸ್ಥೆಯ ಮೂಲಕ ತಮ್ಮ ಸಾಮಾಜಿಕ ಕಾರ್ಯವನ್ನು ನಡೆಸುತ್ತಿದ್ದಾರೆ. ಇವರು ಇದುವರೆಗೆ ಬೆಂಗಳೂರಿನ ಬಿಎಸ್ ಎಫ್ ಸೇನಾ ನೆಲೆ, ಏರ್ಫೋರ್ಸ್ ಸೇನಾ ಶಿಬಿರ, ಸಿಆರ್ ಪಿಎಫ್ ಸೇನಾ ನೆಲೆ ಸೇರಿದಂತೆ ನಾಡಿನ ಪ್ರಖ್ಯಾತ ಸಿದ್ದಗಂಗಾ ಮಠ, ಸವದತ್ತಿಯ ರೇಣುಕಾ ಎಲ್ಲಮ್ಮ ದೇವಸ್ಥಾನ, ಶಾಲಾ ಕಾಲೇಜು ಮೈದಾನಗಳು, ಬೆಟ್ಟಗುಡ್ಡಗಳು, ಸುಪ್ರಸಿದ್ಧ ಕೆರೆಯ ಒಡಲುಗಳು ಸೇರಿದಂತೆ ನೂರಾರು ಸ್ಥಳಗಳಲ್ಲಿ ಗಿಡಗಳನ್ನು ನೆಟ್ಟಿದ್ದಾರೆ.
ದೇಸಿ ಗಿಡಗಳಿಗೆ ಹೆಚ್ಚಿನ ಒತ್ತು
ಹೀಗೆ ನೆಟ್ಟ ಗಿಡಗಳಲ್ಲಿ ದೇಸಿ ತಳಿಯ ಅರಳಿ, ಆಲ, ಬಕುಳ, ಹಿಪ್ಪೆ, ಬೇವು, ಮಾವು, ಕದಂಬ, ಅನಘ, ಬಕುಳ, ಮಹಾಗನಿ, ರಕ್ತ ಚಂದನ, ಶ್ರೀಗಂಧ, ನೇರಳೆ, ಬೆಟ್ಟದನಲ್ಲಿ, ಗಜನಿಂಬೆ ಸೇರಿದಂತೆ ವಿವಿಧ ಬಗೆಯ ಹೂವುಗಳು ಮತ್ತು ಹಣ್ಣಿನ ಕಾಡು ಮರಗಳು ಇರುವುದು ವಿಶೇಷವಾಗಿದೆ. ಇದರ ಜತೆಗೆ ಪರಿಸರಕ್ಕೆ ಹಾನಿಯುಂಟು ಮಾಡುವ ಪ್ಲಾಸ್ಟಿಕ್ ನಿರ್ಮೂಲನೆಗೆ ಪಣತೊಟ್ಟಿರುವ ಅವರು ಜೀವನ್ಮುಖಿ ಸೇವಾ ಸಂಸ್ಥೆಯ ಮೂಲಕ ನಾಡಿನಾದ್ಯಂತ ಪ್ಲಾಸ್ಟಿಕ್ ನಿರ್ಮೂಲನೆ ಕುರಿತಂತೆ ಜಾಗೃತಿ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ.
ಅತಿಯಾದ ರಸಗೊಬ್ಬರ ಮತ್ತು ಕ್ರಿಮಿನಾಶಕಗಳನ್ನು ಬಳಸಿ ಬೇಸಾಯ ಮಾಡುತ್ತಿರುವುದರಿಂದ ಭೂಮಿಯ ಫಲವತ್ತತೆ ನಾಶವಾಗಿ, ಫಲವತ್ತಾದ ಭೂಮಿಯು ಬಂಜರಾಗುತ್ತಿರುವ ಇಂದಿನ ದಿನಮಾನಗಳಲ್ಲಿ ರೈತರು ಮತ್ತು ಕೃಷಿಕರನ್ನು ಮರಳಿ ಸಾಂಪ್ರದಾಯಿಕ ಬೇಸಾಯದೊಡೆಗೆ ಕೊಂಡೊಯ್ಯುವ ದಿಕ್ಕಿನಲ್ಲಿ ಜಾಗೃತಿ ಮೂಡಿಸಲು ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ರೈತ ಬಾಂಧವರಲ್ಲಿ ನೈಸರ್ಗಿಕ ಹಾಗೂ ಸಾವಯವ ಕೃಷಿ ಪದ್ಧತಿಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ಆತ್ಮವಿಶ್ವಾಸ ತುಂಬುವ ಕೆಲಸ
ನಮ್ಮ ಆಹಾರ ಪದ್ಧತಿ, ಜೀವನ ಕ್ರಮಗಳು, ಇಂದಿನ ಒತ್ತಡದ ಬದುಕಿನಲ್ಲಿ ಧ್ಯಾನ ಮತ್ತು ಪ್ರಾಣಾಯಾಮದಿಂದ ದೊರೆಯುವ ಅನುಕೂಲಗಳ ಬಗ್ಗೆ ಮಾಹಿತಿ ನೀಡುವ ಮೂಲಕ ನೊಂದ ಮನಸ್ಸುಗಳಿಗೆ ಸಾಂತ್ವನ ಹೇಳಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಇದರ ಜತೆಗೆ ರಾಜ್ಯದ ವಿವಿಧ ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಅನಾಥ ಮಕ್ಕಳ ಸಂಸ್ಥೆಗಳು ಹಾಗೂ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಗಳಲ್ಲಿ ಪರಿಸರಸ್ನೇಹಿ ಗಿಡ ಮರಗಳನ್ನು ನೆಟ್ಟು ಬೆಳೆಸಿದ್ದಾರೆ.
ಇಷ್ಟೇ ಅಲ್ಲದೆ ಶಾಲಾ ಕಾಲೇಜು ಮಕ್ಕಳಿಗೆ ಪುಸ್ತಕಗಳು ಹಾಗೂ ಪಠ್ಯ ವಸ್ತುಗಳು ಮತ್ತು ಕ್ರೀಡಾ ಸಾಮಗ್ರಿಗಳನ್ನು ವಿತರಿಸುವುದು, ಬಡಜನರು ಹಾಗೂ ನಿರ್ಗತಿಕರಿಗೆ ಬೆಡ್ ಶೀಟ್ಗಳು, ಆಹಾರ ಪಡಿತರ ಕಿಟ್ಗಳನ್ನು ನಿರಂತರವಾಗಿ ವಿತರಿಸುತ್ತಿರುವ ಕೆಲಸ ಮಾಡುತ್ತಿರುವ ಸಂಸ್ಥೆಯು ಹಲವಾರು ವಸತಿ ನೆಲೆಗಳಿಗೆ ಫ್ಯಾನ್ ಗಳು, ಮಂಚಗಳು, ಹಾಗೂ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದ್ದಾರೆ.
ಅಪಾಯಕಾರಿ ಗಿಡಮರಗಳ ಬಗ್ಗೆ ಜಾಗೃತಿ
ಪರಿಸರಕ್ಕೆ ಹಾಗೂ ಭೂಮಿಯ ಫಲವತ್ತತೆಗೆ ಮಾರಕವಾಗುವ ಅಪಾಯಕಾರಿ ಗಿಡಮರಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಿ ನಮ್ಮ ನೆಲದ ಮಣ್ಣಿನ ಹವಾಮಾನಕ್ಕೆ ಹೊಂದುವ ದೇಸಿ ತಳಿಯ ಕಾಡು ಮರಗಳನ್ನು ಉತ್ತೇಜನ ನೀಡಿ ಅಪರೂಪದ ಗಿಡಮರಗಳು ಹಾಗೂ ಸಸ್ಯ ಸಂಕುಲಗಳನ್ನು ತಾವೇ ಉಚಿತವಾಗಿ ಒದಗಿಸಿಕೊಡುವ ಕೆಲಸವನ್ನು ಮಾಡಿದ್ದಾರೆ.

ಯುವಜನರು ಹಾಗೂ ವಿದ್ಯಾರ್ಥಿಗಳಲ್ಲಿ ಶಿಸ್ತು ಸಂಯಮ, ಸೇವಾ ಮನೋಭಾವನೆ, ಪರೋಪಕಾರ ಗುಣಗಳು, ಮಾನವೀಯ ಮೌಲ್ಯಗಳು ಹಾಗೂ ತಂದೆ ತಾಯಿಗಳು ಮತ್ತು ಗುರು ಹಿರಿಯರನ್ನು ಗೌರವಿಸುವ ಉದಾತ್ತ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಿ ಜೀವನ ನಡೆಸುವಂತೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಶಿಸ್ತುಬದ್ಧ ಜೀವನ ನಡೆಸುವ ಸಲಹೆ
ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿರುವ ದೇವಾಲಯಗಳು, ಬೆಟ್ಟಗುಡ್ಡಗಳು ಹಾಗೂ ಪ್ರಕೃತಿಯ ರಮಣೀಯ ಸ್ಥಳಗಳಿಗೆ ಕುಟುಂಬ ಸಮೇತರಾಗಿ ಹೋಗುವ ಮೂಲಕ ಮಾನಸಿಕವಾಗಿ ಸದೃಢತೆಯನ್ನು ಹೊಂದಬೇಕು. ಒತ್ತಡಗಳಿಂದ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸಬೇಕು ಸಾಂಪ್ರದಾಯಿಕ ಆಹಾರ ಪದ್ಧತಿಯು ಆರೋಗ್ಯವಂತ ಜೀವನಕ್ಕೆ ಕಾರಣವಾಗುವುದರಿಂದ ನಿಯಮಿತವಾಗಿ ಆಹಾರವನ್ನು ಸೇವಿಸಿ ಶಿಸ್ತುಬದ್ಧವಾದ ಜೀವನವನ್ನು ನಡೆಸುವ ಬಗ್ಗೆಯೂ ಅರಿವು ಮೂಡಿಸುತ್ತಿದ್ದಾರೆ.
ಒಟ್ಟಾರೆ ಇತರರಿಗೆ ಹೋಲಿಸಿದರೆ ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡುತ್ತಿರುವ ರೂಪ ಅವರು ತಾವಾಯಿತು ತಮ್ಮ ಕೆಲಸವಾಯಿತು ಎಂಬುವರ ನಡುವೆಯೂ ಪರಿಸರವನ್ನು ಸಂರಕ್ಷಿಸಿದರೆ ಅದರಿಂದ ನೆಮ್ಮದಿಯಾಗಿ ಬದುಕಬಹುದು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.












Click it and Unblock the Notifications