ಸಿದ್ದಗಂಗಾ ಶ್ರೀ ನಿಧನಕ್ಕೆ ಮೈಸೂರಿನ ಗಣ್ಯರಿಂದ ಸಂತಾಪ
ಮೈಸೂರು, ಜನವರಿ 22: ಡಾ. ಶಿವಕುಮಾರ ಶ್ರೀಗಳ ನಿಧನಕ್ಕೆ ಇಡೀ ರಾಜ್ಯದ ಜನರೇ ಕಂಬನಿ ಮಿಡಿದಿದ್ದಾರೆ. ಅವರ ಅರಿವಿನ ಜ್ಯೋತಿಗೆ ಮಾರು ಹೋಗದವರಿಲ್ಲ. ಅವರನ್ನು ನೆನೆದು ಮೈಸೂರಿನ ರಾಜಕಾರಣಿಗಳು ಕಣ್ಣೀರಿಟ್ಟಿದ್ದು ಹೀಗೆ...
ಧಾರ್ಮಿಕ ಕ್ಷೇತ್ರಕ್ಕೆ ಆಘಾತ
ಶ್ರೀಗಳ ಅಗಲಿಕೆಯಿಂದ ಧಾರ್ಮಿಕ ಕ್ಷೇತ್ರ ಆಘಾತಗೊಂಡಿದೆ. ನಾಡಿಗೆ ತುಂಬಲಾರದ ನಷ್ಟವಾಗಿದೆ. ಕೋಟ್ಯಂತರ ಭಕ್ತರು ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದ ಸಿದ್ದಗಂಗಾ ಮಠದ ಶ್ರೀಗಳು ನಮ್ಮನ್ನು ಅಗಲಿದ್ದಾರೆ. ಸುದೀರ್ಘ ಅವಧಿಯ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ಕೊಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯ ಮಾಡುತ್ತೇವೆ
-ಎಲ್ ನಾಗೇಂದ್ರ, ಶಾಸಕ
ಆಧುನಿಕ ಬಸವಣ್ಣ
ಸಿದ್ಧಗಂಗಾ ಶ್ರೀಗಳು ಮಹಾಪುರುಷರು. ಪ್ರತಿನಿತ್ಯ ಸಾವಿರಾರು ಮಕ್ಕಳಿಗೆ ಅನ್ನದಾನ, ವಿದ್ಯಾದಾನ ಆಶ್ರಯ ನೀಡುವುದು ಸುಲಭದ ಮಾತಲ್ಲ. ಸರ್ವಜನಾಂಗವನ್ನು ಸಮಾನವಾಗಿ ಕಂಡ ಆಧುನಿಕ ಬಸವಣ್ಣನವರು ಅವರು. ನಾವು ಅವರಲ್ಲಿಯೇ ದೇವರನ್ನು ನೋಡುತ್ತಿದ್ದೆವು. ಅವರ ಮಠದಲ್ಲಿ ಓದಿದ ಸಾವಿರಾರು ಮಂದಿ ದೇಶದ ವಿವಿಧ ಮೂಲೆಗಳಲ್ಲಿ , ವಿದೇಶಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ. ಅವರ ಅಗಲಿಕೆಯಿಂದ ನನಗೆ ಅತೀವ ದುಃಖವಾಗಿದೆ
-ಗೀತಾ ಮಹದೇವ್ ಪ್ರಸಾದ್, ಮಾಜಿ ಸಚಿವೆ

ದೇಶಕ್ಕೆ ತುಂಬಲಾರದ ನಷ್ಟ
ಸಿದ್ದಗಂಗಾ ಶ್ರೀಗಳ ಅಗಲಿಕೆಯಿಂದ ಇಡೀ ರಾಜ್ಯದಲ್ಲಿ ಮಾತ್ರವಲ್ಲ, ದೇಶದ ಎಲ್ಲ ಜನರಿಗೆ ತುಂಬಲಾರದ ನಷ್ಟವಾಗಿದೆ. ಮತ್ತೆ ಅವರು ನಮ್ಮ ರಾಜ್ಯದಲ್ಲೇ ಹುಟ್ಟಿ ಬರಲಿ. -----ಯತೀಂದ್ರ ಸಿದ್ದರಾಮಯ್ಯ, ಶಾಸಕ
ರಾಷ್ಟ್ರಕ್ಕೆ ತುಂಬಲಾರದ ನಷ್ಟ
ಸಿದ್ಧಗಂಗಾಶ್ರೀಗಳ ನಿಧನದಿಂದಾಗಿ ಇಡೀ ರಾಷ್ಟ್ರಕ್ಕೆ ತುಂಬಲಾರದ ನಷ್ಟವಾಗಿದೆ. ಶ್ರೀಗಳ ಸಮಾಜ ಸೇವೆ ಸರ್ವಕಾಲಿಕ ಅವಿಸ್ಮರಣೀಯವಾಗಿದ್ದು.
-ಹರ್ಷವರ್ಧನ್, ಶಾಸಕ
ಭಾರತ ರತ್ನ ನೀಡಲು ಶಿಫಾರಸ್ಸು
ಕಳೆದ ಅಧಿವೇಶನದಲ್ಲಿ ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ನೀಡುವಂತೆ ರಾಜ್ಯದ ಸಂಸದರೆಲ್ಲ ಪಕ್ಷಾತೀತವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೆವು. ಶ್ರೀಗಳದ್ದು 111 ವರ್ಷಗಳ ಕಾಲ ಸಾರ್ಥಕ ಬದುಕು. ಬಸವಣ್ಣನವರ ತತ್ವ ಆದರ್ಶಗಳನ್ನು ಪಾಲಿಸುತ್ತಾ ಬಂದಿದ್ದಾರೆ. ನಡೆದಾಡುವ ದೇವರು ಎಂಬ ಖ್ಯಾತಿಗೆ ಒಳಗಾಗಿದ್ದಾರೆ. ಅವರನ್ನು ಮೂರು ಬಾರಿ ಭೇಟಿ ಮಾಡುವ ಅವಕಾಶ ನನಗೆ ಲಭಿಸಿದ್ದು ಪುಣ್ಯ.
-ಆರ್ ಧೃವನಾರಾಯಣ್ , ಸಚಿವ
ವಿದ್ಯಾರ್ಥಿಗಳ ಬಾಳಿಗೆ ಬೆಳಕಾದರು
ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಅವರ ನಿಸ್ಪೃಹ ಸೇವೆ ಸದಾ ಸ್ಮರಣೀಯ ಮತ್ತು ಅನುಕರಣೀಯ. ಅವರ ಸಾರ್ಥಕ ಬದುಕನ್ನು ಸಮಾಜ ಸೇವೆಗಾಗಿಯೇ ಮುಡಿಗೇರಿಸಿದ್ದರು. ಯಾವುದೇ ಜಾತಿ-ಭೇದವಿಲ್ಲದೆ ತ್ರಿವಿಧ ದಾಸೋಹವನ್ನು ಹಂಚುತ್ತಾ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿನ ಬೆಳಕಾದವರು.
-ಬಡಗಲಪುರನಾಗೇಂದ್ರ, ರೈತ ಸಂಘ












Click it and Unblock the Notifications