ಮೈಸೂರಿನಲ್ಲಿ ಬೇಕಾಬಿಟ್ಟಿ ಆಟೋ ಓಡಿಸುವವರಿಗೆ ದಂಡ ವಿಧಿಸಿದ ಟ್ರಾಫಿಕ್ ಪೊಲೀಸ್
ಮೈಸೂರು, ಜನವರಿ 24: ನಿಯಮ ಉಲ್ಲಂಘಿಸುವ ಆಟೋ ಚಾಲಕರ ವಿರುದ್ಧ ನಗರದೆಲ್ಲೆಡೆ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, 3 ಸಾವಿರ ಪ್ರಕರಣಗಳನ್ನು ದಾಖಲಿಸಿಕೊಂಡು 2.5 ಲಕ್ಷ ರೂ. ದಂಡ ವಸೂಲು ಮಾಡಿದ್ದಾರೆ.
ನಗರದ ಎಲ್ಲ ಸಂಚಾರ ಠಾಣಾ ವ್ಯಾಪ್ತಿಗಳಲ್ಲೂ ಏಕಕಾಲಕ್ಕೆ ಕಾರ್ಯಾಚರಣೆ ನಡೆಯಿತು. ಸಿದ್ಧಾರ್ಥನಗರ ಸಂಚಾರ ಪೊಲೀಸ್ ಠಾಣೆಯಲ್ಲಿ 768 ಪ್ರಕರಣ, 78,100 ದಂಡ, ಕೆ.ಆರ್.ಸಂಚಾರ ಠಾಣೆಯಲ್ಲಿ 627 ಪ್ರಕರಣ, 65,900 ದಂಡ, ಎನ್.ಆರ್.ವಿಭಾಗದಲ್ಲಿ 441 ಪ್ರಕರಣ, 45 ಸಾವಿರ ದಂಡ, ದೇವರಾಜ ವಿಭಾಗದಲ್ಲಿ 380 ಪ್ರಕರಣ, ವಿ.ವಿ.ಪುರಂ ವ್ಯಾಪ್ತಿಯಲ್ಲಿ 311 ಪ್ರಕರಣಗಳು ದಾಖಲಾದವು.
ಬೆಳಗ್ಗೆ 7 ಗಂಟೆಗೆ ಸಿದ್ಧಾರ್ಥನಗರ ಸಂಚಾರ ಠಾಣೆ ಇನ್ಸ್ಪೆಕ್ಟರ್ ಅರುಣಾಕುಮಾರಿ ನೇತೃತ್ವದಲ್ಲಿ ಮಹದೇಶ್ವರ ರಸ್ತೆಯಲ್ಲಿ ಕಾರ್ಯಾಚರಣೆ ಆರಂಭವಾಯಿತು. ನಗರದ ಆಯಾ ಠಾಣೆಗಳ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ತಪಾಸಣೆ ಆರಂಭವಾಯಿತು. ಸಂಚಾರ ವಿಭಾಗದ ಎಸಿಪಿ ಮೋಹನ್ ಸ್ವತಃ ತಪಾಸಣೆ ನಡೆಸಿದರು.
ದಿಢೀರ್ ತಪಾಸಣೆಯಿಂದ ಬೆಚ್ಚಿದ ನಿಯಮ ಉಲ್ಲಂಘಿಸುವ ಆಟೊ ಚಾಲಕರು ಅನಿವಾರ್ಯವಾಗಿ ದಂಡ ತೆರಬೇಕಾಯಿತು. ಇಂತಹ ಕಡೆ ಪೊಲೀಸರು ತಪಾಸಣೆ ನಡೆಸುತ್ತಿದ್ದಾರ ಎನ್ನುವ ಸಂದೇಶವನ್ನು ಇತರ ಚಾಲಕರಿಗೆ ನೀಡುವ ಮೂಲಕ ಪೊಲೀಸರ ಕಣ್ತಪ್ಪಿಸುವ ಕೆಲಸವೂ ನಡೆಯಿತು. ಇದನ್ನು ಅರಿತ ಪೊಲೀಸರು ವಿವಿಧ ತಂಡಗಳಾಗಿ ಕಾರ್ಯಾಚರಣೆ ನಡೆಸಿ ತಪ್ಪಿಸಿಕೊಳ್ಳಲು ಅವಕಾಶ ನೀಡಲಿಲ್ಲ.
ಕಾರ್ಯಾಚರಣೆ ನಗರದಲ್ಲಿ ಮುಂದುವರೆಯಲಿದ್ದು, ಆಟೋ ಚಾಲಕರು ಇನ್ನು ಮುಂದೆ ಕಡ್ಡಾಯವಾಗಿ ನಿಯಮ ಪಾಲನೆ ಮಾಡಬೇಕು ಎಂದು ನಗರ ಸಂಚಾರ ವಿಭಾಗದ ಎಸಿಪಿ ಮೋಹನ್ ತಿಳಿಸಿದ್ದಾರೆ.
ಸಾರ್ವಜನಿಕರು ಕರೆದಲ್ಲಿಗೆ ಬಾಡಿಗೆಗೆ ಬಾರದಿರುವುದು, ನಿಗದಿತ ದರಕ್ಕಿಂತ ಹೆಚ್ಚಿನ ಬಾಡಿಗೆಗೆ ಒತ್ತಾಯಿಸುವುದು, ಬಾಡಿಗೆಗೆ ಬರುವಂತೆ ಪೀಡಿಸುವುದು, ಲಾಡ್ಜ್ ಮತ್ತು ಹೋಟೆಲ್ಗಳಿಗೆ ಕಮಿಷನ್ಗಾಗಿ ಒತ್ತಾಯಿಸುವುದು, ಮದ್ಯ ಸೇವಿಸಿ ಆಟೊ ಚಾಲನೆ, ವೇಶ್ಯಾವಾಟಿಕೆಗೆ ಪುಸಲಾಯಿಸುವುದು, ಆಟೊಗಳನ್ನು ಸುಸ್ಥಿತಿಯಲ್ಲಿ ಇಡದಿರುವುದು, ವಾಹನ ಚಾಲನಾ ಪರವಾನಗಿ, ವಿಮೆ, ಇತರ ದಾಖಲಾತಿ ಇಲ್ಲದೇ ಚಾಲನೆ ಮಾಡುವುದು, ಎಲ್ಲೆಂದರಲ್ಲಿ ಗುಂಪುಗುಂಪಾಗಿ ವಾಹನ ನಿಲ್ಲಿಸುವುದು, ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವುದು, ಚಾಲಕನ ಸೀಟಿನಲ್ಲಿ ಸ್ನೇಹಿತರನ್ನು ಕೂರಿಸಿಕೊಂಡು ಚಾಲನೆ ಮಾಡುವುದು, ಆಟೊ ಚಾಲಕರು ಡಿಸ್ಪ್ಲೇ ಕಾರ್ಡ್ನ್ನು ಪ್ರದರ್ಶಿಸದೇ ಇರುವುದಕ್ಕೆ ದಂಡ ವಿಧಿಸಲಾಗಿದೆ.












Click it and Unblock the Notifications