ದಿನೇಶ್, ನಿಮ್ಮ ಮನೆಯಲ್ಲಿ ಕಲಿಸಿದ ಸಂಸ್ಕಾರ ಇದೇನಾ?: ಪ್ರತಾಪ್ ಸಿಂಹ
ಸಿದ್ದರಾಮಯ್ಯರನ್ನು ಜೈಲಿಗೆ ಕಳಿಸ್ತೀನಿ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪಗೆ ಹುಚ್ಚು ಹಿಡಿದಿದೆ ಎಂಬ ಹೇಳಿಕೆ ನೀಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ
ಮೈಸೂರು, ಫೆಬ್ರವರಿ 22: ಬಿಎಸ್ ಯಡಿಯೂರಪ್ಪನವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರಿಗೆ ಹುಚ್ಚು ಹಿಡಿದಿದೆ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಿನೇಶ್ ಗುಂಡೂರಾವ್ ಅವರಿಗೆ ಮನೆಯಲ್ಲಿ ಕಲಿಸಿಕೊಟ್ಟ ಸಂಸ್ಕಾರ ಇದೇನಾ ಎಂದು ಪ್ರಶ್ನಿಸಿದ್ದಾರೆ.
ಈ ಹೇಳಿಕೆ ನೀಡುವಾಗ ದಿನೇಶ್ ಗುಂಡೂರಾವ್ ಅವರ ಮಾನಸಿಕ ಸ್ಥಿಮಿತ ಹೇಗಿತ್ತು ಎಂಬುದನ್ನು ಗಮನಿಸಬೇಕು. ದಿನೇಶ್ ಮೊದಲು ಅವರ ತಂದೆ ಗುಂಡೂರಾವ್ ಅವರ ಹಿನ್ನೆಲೆ ನೋಡಿಕೊಳ್ಳಲಿ. ಅವರು ರೌಡಿಗಳನ್ನು ಸೃಷ್ಟಿಸಿದ್ದು ಹೊರತುಪಡಿಸಿ ಬೇರೇನೂ ಮಾಡಲಿಲ್ಲ. ತಮ್ಮ ಎಲ್ಲೆ ಮೀರಿ ಕೆಪಿಸಿಸಿ ಕಾರ್ಯಾಧ್ಯಕ್ಷರು ಮಾತನಾಡುತ್ತಿದ್ದಾರೆ ಎಂದರು.[ಸಿದ್ದು ಮೇಲೆ ಕಲಬುರಗಿಯಲ್ಲಿ ಬಿಎಸ್ವೈ ಭ್ರಷ್ಟಾಚಾರದ ಅಸ್ತ್ರ]
ರಾಜಕೀಯ ಪಿತೂರಿಯಿಂದಾಗಿ ಯಡಿಯೂರಪ್ಪನವರು ಜೈಲಿಗೆ ಹೋದರೆ ವಿನಾ ಅವರನ್ನು ಯಾವ ನ್ಯಾಯಾಲಯವೂ ದೋಷಿ ಎಂದು ಹೇಳಿಲ್ಲ. ದಿನೇಶ್ ಗುಂಡೂರಾವ್ ನಿಷ್ಕ್ರಿಯ ಸಚಿವ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಮ್ಮ ಸಂಪುಟದಿಂದ ತೆಗೆದುಹಾಕಿ, ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಡೈರಿಯಲ್ಲಿ ಮುಖ್ಯಮಂತ್ರಿ ಹೆಸರಿದೆ ಎಂದು ಯಡಿಯೂರಪ್ಪನವರು ಹೇಳಿದರು. ಆದರೆ ಕಾಂಗ್ರೆಸ್ ವೈಯಕ್ತಿಕ ನಿಂದನೆ ಇಳಿದಿದೆ. ಕಾಂಗ್ರೆಸ್ ನವರು ಎಂಥ ಸತ್ಯ ಸಂಧರು ಎಂಬುದು ಇಡೀ ಕರ್ನಾಟಕಕ್ಕೇ ಗೊತ್ತಿದೆ. ಮುಖ್ಯಮಂತ್ರಿ ತವರಿಗೆ ಬಂದು ಹೋರಾಟ ಮಾಡಿ, ಸತ್ಯ ಮೇವ ಜಯತೆ ಹೆಸರಿನಲ್ಲಿ 50 ಜನರನ್ನು ಸೇರಿಸುವುದಕ್ಕೆ ಆಗಲಿಲ್ಲ ಎಂದು ಲೇವಡಿ ಮಾಡಿದರು.[ಯಡಿಯೂರಪ್ಪಗೆ ಹುಚ್ಚು ಹಿಡಿದಿದೆ: ದಿನೇಶ್ ಗುಂಡೂರಾವ್]
ಎಂಎಲ್ ಸಿ ಗೋವಿಂದರಾಜು ಅವರ ಮನೆಯಲ್ಲಿ ಡೈರಿ ಸಿಕ್ಕ ನಂತರ ಕಾಂಗ್ರೆಸ್ ಹತಾಶವಾಗಿದೆ. ಸಾರ್ವಜನಿಕ ಜೀವನದಲ್ಲಿ ಆರೋಪಗಳು ಬಂದಾಗ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಇನ್ನು ಗೃಹಸಚಿವರೇ ಪೊಲೀಸ್ ಇಲಾಖೆಯಲ್ಲಿ ತಮ್ಮ ಮಾತು ನಡೆಯುತ್ತಿಲ್ಲ ಎಂದಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು.