ಮೈಸೂರು-ಕುಶಾಲನಗರ 4 ಪಥದ ರಸ್ತೆ, ಅಪ್ಡೇಟ್ ಕೊಟ್ಟ ಸಂಸದರು
ಮೈಸೂರು, ಜನವರಿ 15: ಮೈಸೂರು-ಕುಶಾಲನಗರ 4 ಪಥದ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಕುರಿತು ಸಂಸದರು ಅಪ್ಡೇಟ್ ನೀಡಿದ್ದಾರೆ. ಜೂನ್ 2027ರೊಳಗೆ ಈ ಯೋಜನೆಯನ್ನು ಪೂರ್ಣಗೊಳಿಸಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಂಜೂರು ಮಾಡಿದ ರೂ. 4,129 ಕೋಟಿ ಬಜೆಟ್ನೊಂದಿಗೆ ಈ ಯೋಜನೆಯು ಈಗಾಗಲೇ ಗಣನೀಯವಾದ ಪ್ರಗತಿ ಕಾಣುತ್ತಿದೆ ಎಂದು ಸಂಸದರು ಹೇಳಿದ್ದಾರೆ.
ಮೈಸೂರು- ಕೊಡಗು ಸಂಸದ ಯದುವೀರ್ ಒಡೆಯರ್ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಮೈಸೂರು-ಕುಶಾಲನಗರ 4 ಪಥದ ರಸ್ತೆ ಯೋಜನೆ ಕುರಿತು ಮಾಹಿತಿ ನೀಡಿದ್ದಾರೆ. 'ಜೂನ್ 2027ರೊಳಗೆ ಪೂರ್ಣಗೊಳ್ಳಲು ನಿರ್ಧರಿಸಲಾಗಿರುವ ಮೈಸೂರು-ಕುಶಾಲನಗರ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಕಾಮಗಾರಿಯು ಇದೀಗ ಸ್ಥಿರ ಪ್ರಗತಿಯಲ್ಲಿದೆ' ಎಂದು ಹೇಳಿದ್ದಾರೆ.

'92.3 ಕಿ. ಮೀ.ಗಳಷ್ಟು ವಿಸ್ತಾರವಾದ ಈ 4 ಪಥದ ಪ್ರವೇಶ-ನಿಯಂತ್ರಿತ ಹೆದ್ದಾರಿಯುˌಮೈಸೂರು ಮತ್ತು ಕುಶಾಲನಗರದ ಪ್ರಯಾಣದ ಸಮಯವನ್ನು ಕನಿಷ್ಠ 1-1.5 ಗಂಟೆಗಳಿಗೆ ಕಡಿತಗೊಳಿಸಲಿದೆ ಮತ್ತು ಬೆಂಗಳೂರಿನಿಂದ ಕುಶಾಲನಗರದ ವರೆಗೆ ಪ್ರಯಾಣಿಸಲು ಕೇವಲ 3-3.5ಗಂಟೆಗಳ ಸಮಯ ತಗಲುವಂತೆ ಮಾಡುತ್ತದೆ' ಎಂದು ತಿಳಿಸಿದ್ದಾರೆ.
ಯೋಜನೆಯ ವೆಚ್ಚ: ಸಂಸದರು ಪೋಸ್ಟ್ನಲ್ಲಿ, 'ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಂಜೂರು ಮಾಡಿದ ರೂ. 4,129 ಕೋಟಿ ಬಜೆಟ್ ಈ ಯೋಜನೆಯು ಈಗಾಗಲೇ ಗಣನೀಯವಾದ ಪ್ರಗತಿ ಕಾಣುತ್ತಿದೆ. ಇದರಲ್ಲಿ ಹೆಚ್ಚಿನ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಮತ್ತು ಅರಣ್ಯ ಪ್ರದೇಶದ ತೆರವಿಗೆ ಅನುಮತಿಯೂ ಸಹ ದೊರೆತಿದೆ' ಎಂದು ವಿವರಣೆ ನೀಡಿದ್ದಾರೆ.
ಯದುವೀರ್ ಒಡೆಯರ್, 'ಈ ಬಹುನಿರೀಕ್ಷಿತ ಯೋಜನೆಯು ಪೂರ್ಣಗೊಂಡ ನಂತರ ಮೈಸೂರು ಮತ್ತು ಕೊಡಗಿನಲ್ಲಿ ಹೆದ್ದಾರಿ ಸಂಪರ್ಕ ಸುಧಾರಣೆಗೊಳ್ಳುವುದರ ಜೊತೆಗೆ ಆರ್ಥಿಕ ಬೆಳವಣಿಗೆಗೆ ವೇಗ ನೀಡುತ್ತದೆ. ಅಲ್ಲದೆ ವ್ಯಾಪಾರ ಮತ್ತು ಹೂಡಿಕೆಗಳನ್ನು ಆಕರ್ಷಿಸಲು, ಪ್ರವಾಸೋದ್ಯಮವನ್ನು ಉತ್ತೇಜಿಸಲು ಮತ್ತು ಸ್ಥಳೀಯ ವ್ಯವಹಾರಗಳಿಗೆ ಅವಕಾಶಗಳನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ' ಎಂದು ತಿಳಿಸಿದ್ದಾರೆ.
'ಈ ಯೋಜನೆಯಿಂದಾಗಿ ನಮ್ಮ ಪ್ರದೇಶಕ್ಕೆ ಗರಿಷ್ಠ ಮಟ್ಟದ ಪ್ರಯೋಜನಗಳು ದೊರೆಯಲಿವೆ ಎಂದು ತಿಳಿಸಲು ಹರ್ಷಿಸುತ್ತೇನೆ. ನಿಮ್ಮ ಪ್ರತಿನಿಧಿಯಾಗಿ ಕ್ಷೇತ್ರದ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ದಿಗೆ ಬದ್ಧನಾಗಿ ನನ್ನ ಜವಾಬ್ದಾರಿಗಳನ್ನು ನಿರ್ವಹಿಸಲಿದ್ದೇನೆ' ಎಂದು ಹೇಳಿದ್ದಾರೆ.
2024ರ ಡಿಸೆಂಬರ್ನಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಸಹ ಯೋಜನೆ ಕುರಿತು ಮಾತನಾಡಿದ್ದರು. "ರಾಷ್ಟ್ರೀಯ ಹೆದ್ದಾರಿ-275 ರ ಮೈಸೂರು-ಕುಶಾಲನಗರ ಭಾಗದ 93 ಕಿ. ಮೀ. ಉದ್ದದ ರಸ್ತೆ ಕಾಮಗಾರಿಯ ಯೋಜನೆಯನ್ನು 4 ಪ್ಯಾಕೇಜ್ಗಳಾಗಿ ವಿಂಗಡಿಸಲಾಗಿದೆ ಮತ್ತು ಈ 4 ಪ್ಯಾಕೇಜ್ಗಳನ್ನು 2023ರಲ್ಲಿ ನನ್ನ ಅಧಿಕಾರಾವಧಿಯಲ್ಲಿ ರೂ. 4126 ಕೋಟಿ ವೆಚ್ಚದಲ್ಲಿ ಮಂಜೂರು ಮಾಡಲಾಗಿತ್ತು ಮತ್ತು ಈ 4 ಪ್ಯಾಕೇಜ್ಗಳಿಗೆ ಪ್ರಧಾನಿ ನರೇಂದ್ರ ಮೋದಿ ದಿನಾಂಕ 12.03.2023ರಂದು ಮಂಡ್ಯದಲ್ಲಿ ಶಿಲಾನ್ಯಾಸ ಮಾಡಿದ್ದರು' ಎಂದು ಹೇಳಿದ್ದರು.
'ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ಭೂಸ್ವಾಧೀನದ ಪ್ರಕ್ರಿಯೆಯು ಪ್ರಗತಿಯಲ್ಲಿದ್ದು, ಪ್ಯಾಕೇಜ್ -2ರಲ್ಲಿ ಸುಮಾರು ಶೇ 84, ಪ್ಯಾಕೇಜ್-3ರಲ್ಲಿ ಸುಮಾರು ಶೇ 80, ಪ್ಯಾಕೇಜ್-4ರಲ್ಲಿ ಸುಮಾರು ಶೇ 70 ಮತ್ತು ಪ್ಯಾಕೇಜ್-5ರಲ್ಲಿ ಸುಮಾರು ಶೇ 84 ಕಾಮಗಾರಿಯನ್ನು ಕೈಗೊಳ್ಳಲು ಭೂಮಿ ಲಭ್ಯವಿರುತ್ತದೆ, ಆದರೆ ಕಾಮಗಾರಿಯನ್ನು ಪ್ರಾರಂಭಿಸಲು ಅರಣ್ಯ ಇಲಾಖೆ ವತಿಯಿಂದ ನಿರಾಕ್ಷೇಪಣಾ ಪ್ರಮಾಣ ಪತ್ರದ ಅಗತ್ಯವಿರುತ್ತದೆ' ಎಂದು ತಿಳಿಸಿದ್ದರು.
'ಇದಕ್ಕೆ ಸಂಬಂಧಿಸಿದಂತೆ ದಿನಾಂಕ 26/12/2024ರಂದು ನಾನು ಬೆಂಗಳೂರಿನಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರನ್ನು ಖುದ್ದು ಭೇಟಿ ಮಾಡಿ, ಮೈಸೂರು ಮತ್ತು ಕೊಡಗು ಜನರಿಗೆ ಅನುಕೂಲವಾಗುವಂತೆ ಮತ್ತು ಮಂಗಳೂರಿನ ಬಂದರು ಸಂಪರ್ಕವನ್ನು ಸುಧಾರಿಸುವ ಮತ್ತು ಶಿರಾಡಿ ಘಾಟ್ನ ರಸ್ತೆ ಮುಚ್ಚುವ ಸಮಯದಲ್ಲಿ ಪರ್ಯಾಯ ಮಾರ್ಗ ಸಂಪರ್ಕವನ್ನು ಒದಗಿಸುವ ಮೈಸೂರು - ಕುಶಾಲನಗರ ನಡುವಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಕೈಗೊಳ್ಳಲು ಅನುಗುಣವಾಗಿ ಅರಣ್ಯ ಇಲಾಖೆ ವತಿಯಿಂದ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ತುರ್ತಾಗಿ ನೀಡುವಂತೆ ಕೋರಿ ಮನವಿ ಮಾಡಲಾಯಿತು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅವರು ಕೂಡಲೇ ಅನುಮೋದನೆ ನೀಡುವ ಭರವಸೆ ನೀಡಿದ್ದಾರೆ' ಎಂದು ವಿವರಣೆ ನೀಡಿದ್ದರು.












Click it and Unblock the Notifications