ಬಳಸಿ ಬಿಸಾಡುವುದು ಬಿಜೆಪಿಯ ಸಂಸ್ಕೃತಿ; ಸುರ್ಜೇವಾಲ
ಮೈಸೂರು, ಜುಲೈ 31: "ಬಳಸಿ ಬಿಸಾಡುವುದು ಬಿಜೆಪಿಯ ಸಂಸ್ಕೃತಿ ಮತ್ತು ಸ್ವಭಾವ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ಬಿಜೆಪಿ ನಾಯಕರು ಬಳಸಿಕೊಂಡು ಬಿಸಾಡಿದ್ದಾರೆ,'' ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, "ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಹೃಹ ಸಚಿವ ಅಮಿತ್ ಶಾಗೆ ಬಿಜೆಪಿಯ ಹಿರಿಯ ನಾಯಕರ ಬಗ್ಗೆ ಗೌರವ ಇಲ್ಲ. ಹಿರಿಯ ನಾಯಕರನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಕಸದ ಬುಟ್ಟಿಗೆ ಹಾಕುತ್ತಿದ್ದಾರೆ. ಯಡಿಯೂರಪ್ಪರಿಗೂ ಅದನ್ನೇ ಮಾಡಿದ್ದಾರೆ,'' ಎಂದು ಕಿಡಿಕಾರಿದರು.
"ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಯಶ್ವಂತ್ ಸಿನ್ಹಾ, ಕೇಶೂಭಾಯಿ ಪಟೇಲ್, ನರೇನ್ ಪಾಂಡ್ಯ ಮುಂತಾದ ನಾಯಕರನ್ನು ಮೂಲೆ ಗುಂಪು ಮಾಡಲಾಗಿದೆ. ನರೇಂದ್ರ ಮೋದಿ ಬಿಜೆಪಿ ಸೃಷ್ಠಿಸಿದ ನಾಯಕ, ಹಿರಿತನದ ನಾಯಕ ಅಲ್ಲ,'' ಎಂದು ಟೀಕಿಸಿದರು.

ಫೋನ್ ಕದ್ದಾಲಿಕೆ ಹಾಗೂ ಸ್ಪೈ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಣದೀಪ್ ಸಿಂಗ್ ಸುರ್ಜೇವಾಲ, "ಚುನಾಯಿತ ಸರ್ಕಾರವನ್ನು ಬೀಳಿಸಲು ಪೆಗಾಸಸ್ ಬಳಸಿದೆ. ಕರ್ನಾಟಕ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಅದಕ್ಕೆ ಯಡಿಯೂರಪ್ಪರನ್ನು ತೆಗೆಯಲಾಯಿತಾ? ಆರ್ಎಸ್ಎಸ್ ಕೆಲವರು ಸಚಿವರನ್ನು ತೆಗೆಯಲು ಹೇಳುತ್ತಿದೆ. ಇನ್ನು ಸಚಿವರು ಸಿಡಿ ವಿಚಾರವಾಗಿ ನ್ಯಾಯಾಲಯಕ್ಕೆ ಹೋಗಿದ್ದಾರೆ,'' ಎಂದು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿ ಬಿಜೆಪಿ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.
ಕರ್ನಾಟಕದ ರಾಜ್ಯದ ಕೊರೊನಾ ಸೋಂಕು ಪರಿಸ್ಥಿತಿ ಉಲ್ಲೇಖಿಸಿದ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ, "ರಾಜ್ಯದಲ್ಲಿ ಜನರು ಸಾಯುತ್ತಿದ್ದಾರೆ. ಆಕ್ಸಿಜನ್, ರೆಮ್ಡಿಸಿವಿರ್ ಸಿಗದೆ ಜನರ ಸಮಸ್ಯೆಗೆ ಸಿಲುಕಿದ್ದರು. ಆಗ ಪ್ರಧಾನಿ ನರೇಂದ್ರ ಎಲ್ಲಿ ಹೋಗಿದ್ದರು? ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಎಲ್ಲಿ ಹೋಗಿದ್ದರು? ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಎಲ್ಲಿ ಹೋಗಿದ್ದಾರೆ? ಅವರಿಗೆಲ್ಲಾ ಅಧಿಕಾರದ ದಾಹ ಅಷ್ಟೇ. ಇದಕ್ಕಾಗಿ ನಾವು ಎಲ್ಲರೂ ಒಟ್ಟಿಗೆ ಸೇರಿದ್ದು, ನಮ್ಮಲ್ಲಿರುವ ಎಲ್ಲಾ ಭಿನ್ನಾಭಿಪ್ರಾಯವನ್ನು ಹೋಗಲಾಡಿಸಲು ಸೇರಿದ್ದೇವೆ,'' ಎಂದು ತಿಳಿಸಿದರು.
ಕೇಂದ್ರದಿಂದ ಅನುದಾನ ತನ್ನಿ
ಇನ್ನು ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, "ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿದ್ದ ಅನುದಾನವನ್ನು ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪರಿಗೆ ತರಲು ಆಗಲಿಲ್ಲ.ಈಗಿನ ಸಿಎಂ ಬೊಮ್ಮಾಯಿರಿಂದ ತರಲು ಆಗುತ್ತಾ?,'' ಎಂದು ಪ್ರಶ್ನಿಸಿದರು.

"ಬಿಜೆಪಿಯಲ್ಲೇ ಬೆಳೆದ ಬಿ.ಎಸ್. ಯಡಿಯೂರಪ್ಪಗೆ ಕೇಂದ್ರದಿಂದ ಸಾಕಷ್ಟು ಪ್ರಮಾಣದಲ್ಲಿ ರಾಜ್ಯಕ್ಕೆ ಅನುದಾನ ತರಲು ಸಾಧ್ಯವಾಗಲಿಲ್ಲ. ಇನ್ನು ಜನತಾ ದಳದಿಂದ ಬಿಜೆಪಿಗೆ ಹೋಗಿರುವ ಬಸವರಾಜ ಬೊಮ್ಮಾಯಿಗೆ ಆಗುತ್ತಾ? ಜೆಡಿಎಸ್ನಿಂದ ಹೋದವರ ಮಾತನ್ನು ಕೇಂದ್ರ ಬಿಜೆಪಿ ನಾಯಕರು ಕೇಳುತ್ತಾರಾ,'' ಎಂದು ವ್ಯಂಗ್ಯವಾಡಿದರು.
"ಇಷ್ಟೊತ್ತಿಗಾಗಲೇ ಸಚಿವ ಸಂಪುಟ ರಚನೆ ಆಗಬೇಕಿತ್ತು, ಇನ್ನೂ ಆಗಿಲ್ಲ. ಶುಕ್ರವಾರ ದೆಹಲಿಯಲ್ಲಿ ಈ ಬಗ್ಗೆ ಅವರ ಪಕ್ಷದ ಹೈಕಮಾಂಡ್ ಜೊತೆ ಚರ್ಚೆ ಮಾಡಿಲ್ಲ ಅನಿಸುತ್ತೆ. ಮುಂದಿನ ಬಾರಿ ಆಗಬಹುದು. ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಆದಷ್ಟು ಬೇಗ ಸಚಿವ ಸಂಪುಟ ರಚನೆಯನ್ನು ಪರಿಗಣಿಸಬೇಕು. ಸರ್ಕಾರದ ಏಕ ವ್ಯಕ್ತಿಯಿಂದ ಕೊರೊನಾ ನಿಯಂತ್ರಣ ಸಾಧ್ಯವಿಲ್ಲ. ಹಾಗಾಗಿ ಆದಷ್ಟು ಬೇಗ ಸಚಿವ ಸಂಪುಟ ಆಗಬೇಕು,'' ಎಂದು ತಿಳಿಸಿದರು.
"ರಾಜ್ಯ ಸರ್ಕಾರ ಕೊರೊನಾ 3ನೇ ಅಲೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇಲ್ಲವಾದರೆ ರಾಜ್ಯ ಮೂರನೇ ಅಲೆಯ ಹೊಡೆತಕ್ಕೆ ಸಿಲುಕಲಿದೆ,'' ಎಂದು ಎಚ್ಚರಿಕೆ ನೀಡಿದರು.












Click it and Unblock the Notifications