ಮೈಸೂರು ಹನಿ ಟ್ರ್ಯಾಪ್ ಪ್ರಕರಣಕ್ಕೆ ಹೊಸ ತಿರುವು: ದೂರು ನೀಡಿದ ಯುವತಿ
ಮೈಸೂರು, ಅಕ್ಟೋಬರ್ 26 : ಹನಿಟ್ರ್ಯಾಪ್ ವಿಚಾರವಾಗಿ ಬಂಧಿಯಾಗಿದ್ದ ಅಶೋಕಪುರಂ ನಿವಾಸಿ ಮಾಲಾ ಪ್ರಕರಣ ಸದ್ಯ ಹೊಸ ತಿರುವು ಪಡೆದುಕೊಂಡಿದೆ. ದಂಧೆಕೋರ ವ್ಯಕ್ತಿಗೆ ಪೊಲೀಸರು ಬೆಂಗಾವಲಾಗಿ ನಿಂತು ನನ್ನನ್ನು ಹಿಂಸಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದು ಯುವತಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರಲ್ಲಿ ದೂರು ನೀಡಿದ್ದಾಳೆ.
ಮೈಸೂರು: ಚೆನ್ನಾಗಿದ್ದಾಳೆ ಎಂದು ಹಿಂದೆ ಬಿದ್ದವನಿಗೆ ಬಿತ್ತು ಪಂಗನಾಮ!
ದಂಧೆಗೆ ಬರುವಂತೆ ಒತ್ತಡ ಹೇರುತ್ತಿದ್ದ ವ್ಯಕ್ತಿಯೊಂದಿಗೆ ಪ್ರಕರಣ ದಾಖಲಿಸಿದ ಸರ್ಕಲ್ ಇನ್ಸ್ ಪೆಕ್ಟರ್ ಸ್ನೇಹ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿರುವ ಯುವತಿ, ದಂಧೆಗೆ ಬರುವಂತೆ ಪೀಡಿಸುತ್ತಿದ್ದ ವ್ಯಕ್ತಿಯೊಂದಿಗೆ ಮಾತನಾಡಿರುವ ಆಡಿಯೋ ಕ್ಲಿಪ್ಪಿಂಗ್ ಅನ್ನು ದೂರಿನ ಜತೆ ನೀಡಿದ್ದಾಳೆ. ನೊಂದ ಯುವತಿ ಈಗ ಚನ್ನಣ್ಣನವರ್ ಗೆ ದೂರು ನೀಡಿ ನ್ಯಾಯ ಕೊಡಿಸುವಂತೆ ಅಂಗಲಾಚಿದ್ದಾಳೆ.
ಘಟನೆಯ ಹಿನ್ನೆಲೆ :
ಮೈಸೂರಿನ ಅಶೋಕಪುರಂನಲ್ಲಿ ವಾಸವಿರುವ ಯುವತಿಯ ಹಿಂದೆ ಬಿದ್ದಿದ್ದ ಪುಟ್ಟಸ್ವಾಮಿ ಆಲಿಯಾಸ್ ಮನೋಜ್ ಎಂಬಾತ ಹೊಟೇಲ್ ಒಂದರಲ್ಲಿ ಪರಿಚಯ ಮಾಡಿಕೊಂಡು ಆಕೆಯ ಫೋನ್ ನಂಬರ್ ಪಡೆದುಕೊಂಡಿದ್ದ. ಬಳಿಕ ನಿತ್ಯವೂ ಫೋನ್ ಮಾಡಿ ದಂಧೆಗೆ ಬರುವಂತೆ ಆಹ್ವಾನಿಸುತ್ತಿದ್ದ. ಜೊತೆಗೆ ಹಣದ ಆಮಿಷ ಕೂಡ ಒಡ್ಡಿದ್ದ. ಈತನ ಕಾಟದಿಂದ ಬೇಸತ್ತ ಯುವತಿ ತನ್ನನ್ನು ಮದುವೆಯಾಗಲಿದ್ದ ಯುವಕನಿಗೆ ಈ ವಿಷಯ ತಿಳಿಸಿದ್ದಾಳೆ. ಆತ ಪುಟ್ಟಸ್ವಾಮಿಯನ್ನು ಕರೆಯಿಸಿ ಚೆನ್ನಾಗಿ ತದುಕಿ ಕುವೆಂಪುನಗರ ಪೊಲೀಸರ ವಶಕ್ಕೆ ಕೊಡಲು ಹೋದಾಗ ಮತ್ತೊಮ್ಮೆ ಹೀಗೆ ಮಾಡುವುದಿಲ್ಲ ಎಂದು ಆತ ಅಂಗಲಾಚಿದ್ದಾನೆ ಎನ್ನಲಾಗಿದೆ.
ಆ ನಂತರ ಆತ ಯುವತಿ ಮೇಲೆ ಸೇಡು ತೀರಿಸಿಕೊಳ್ಳಲು ನಂಜನಗೂಡು ಗ್ರಾಮಾಂತರ ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಮೇಲೆ ಪ್ರಭಾವ ಬೀರಿ, ಯುವತಿಯನ್ನು ಹನಿಟ್ರ್ಯಾಪ್ ಪ್ರಕರಣದಲ್ಲಿ ಸಿಲುಕಿಸಿ, ಸುಳ್ಳು ಕೇಸ್ ದಾಖಲಾಗುವಂತೆ ಮಾಡಿದ್ದಾನೆ. ಆರೋಪಿ ಪುಟ್ಟಸ್ವಾಮಿ ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಸ್ನೇಹಿತರಾಗಿರುವ ಕಾರಣಕ್ಕೆ ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ, ದೈಹಿಕವಾಗಿ ಹಲ್ಲೆ ಮಾಡಿ ದೌರ್ಜನ್ಯವೆಸಗಿದ್ದಾರೆ.
ಇವರ ಮೇಲೆ ಕಾನೂನು ಕ್ರಮ ಜರುಗಿಸಿ ಅಮಾಯಕಳಾದ ನನಗೆ ನ್ಯಾಯ ಕೊಡಿಸುವಂತೆ ಯುವತಿ ದೂರಿನಲ್ಲಿ ಕೋರಿದ್ದಾಳೆ. ಆರೋಪಿ ಪುಟ್ಟಸ್ವಾಮಿ ಯುವತಿಯನ್ನು ದಂಧೆಗೆ ಆಹ್ವಾನಿಸಿರುವ ಆಡಿಯೋ ಕ್ಲಿಪ್ಪಿಂಗ್ನ್ನು ಆಕೆ ದೂರಿನೊಂದಿಗೆ ನೀಡಿದ್ದಾಳೆ ಎಂದು ತಿಳಿದು ಬಂದಿದೆ.