ಚೀನಾ ಪ್ರವಾಸಿಗರ ಮೇಲೆ ಕಣ್ಣಿಟ್ಟ ಮೈಸೂರು ಜಿಲ್ಲಾಡಳಿತ
ಮೈಸೂರು, ಜನವರಿ 31: ಚೀನಾದೆಲ್ಲೆಡೆ ಕೊರೊನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಮೈಸೂರಿಗೆ ಬರುವ ಚೀನಾ ಪ್ರವಾಸಿಗರ ಮೇಲೆ ತೀವ್ರ ನಿಗಾ ಇರಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ತಿಳಿಸಿದರು.
ಕೊರೊನಾ ವೈರಸ್ ಆತಂಕದ ವಿಚಾರ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಕೊರೊನಾ ವೈರಸ್ ಪತ್ತೆಗೆ ಕೆ.ಆರ್.ಆಸ್ಪತ್ರೆಯಲ್ಲಿ ವಿಶೇಷ ಲ್ಯಾಬ್ ಸ್ಥಾಪನೆ ಮಾಡಲಾಗಿದೆ ಎಂದರು.
ಭಾರತಕ್ಕೆ ಬರದಂತೆ 18 ಚೀನಾ ವಿದ್ಯಾರ್ಥಿಗಳಿಗೆ ಸೂಚಿಸಿದ ಮೈಸೂರು ವಿವಿ
ಹೋಟೆಲ್ ಉದ್ಯಮ, ಟ್ರಾವೆಲ್ ಏಜೆನ್ಸಿ ಮೂಲಕ ಕರೊನಾ ವೈರಸ್ ಬಾಧಿತರ ಪತ್ತೆಗೆ ವ್ಯವಸ್ಥೆ ಮಾಡಲಾಗಿದ್ದು, ಕಳೆದ ಒಂದೂವರೆ ತಿಂಗಳಿಂದ ಚೀನಾದಿಂದ ಮೈಸೂರಿಗೆ ಬರುವ ಪ್ರವಾಸಿಗರ ಮೇಲೆ ಹೆಚ್ಚಿನ ನಿಗಾ ಇಡಲಾಗಿದೆ. ಸದ್ಯ ಮೈಸೂರಿನಲ್ಲಿ ಯಾವುದೇ ಆತಂಕ ಇಲ್ಲ ಎಂದು ಹೇಳಿದರು.
ಕೇರಳ ರಾಜ್ಯದಿಂದ ಕೊರೊನಾ ವೈರಸ್ ಬಾಧಿತರು ಬಂದಿಲ್ಲ. ಇದರ ಬಗ್ಗೆ ಆತಂಕ ಬೇಡ, ಆದರೂ ಮುಂಜಾಗ್ರತೆ ಇರಲಿ. ಸಾಮಾನ್ಯ ಜ್ವರಕ್ಕೂ ಚಿಕಿತ್ಸೆ ಪಡೆಯಯುವುದು ಒಳಿತು. ಇದಕ್ಕಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ವಿಶೇಷ ಲ್ಯಾಬ್ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.