ಮಾವುತ - ಕಾವಾಡಿ ಕಾದಾಟದಲ್ಲಿ ಬಡವಾದ ಗಜಪಡೆ ಕ್ಯಾಪ್ಟನ್ ಅರ್ಜುನ
ಮೈಸೂರು, ಆಗಸ್ಟ್ 23 : ನಾಡಹಬ್ಬಕ್ಕೆ ಇನ್ನೇನು ದಿನಗಣನೆ ಆರಂಭವಾಗಿದೆ, ಗಜಪಡೆಯೂ ತಯಾರಿಗಾಗಿ ದಿನನಿತ್ಯದ ತಾಲೀಮು ಆರಂಭಿಸಿದೆ. ಕ್ಯಾಪ್ಟನ್ ಅರ್ಜುನ ನೇತೃತ್ವದ ತಂಡ ಅಂಬಾರಿಯ ಜೊತೆಗೆ ಹೆಜ್ಜೆ ಹಾಕಲು ತಯಾರಾಗುತ್ತಿದೆ. ಇವೆಲ್ಲದರ ನಡುವೆ ಅಂಬಾರಿ ಹೊರುವ ಅರ್ಜುನ ಸ್ವಲ್ಪ ಕ್ಯಾತೆ ತೆಗೆಯುತ್ತಿದ್ದಾನೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿದೆ.
ಅರ್ಜುನನ ತೂಕದಲ್ಲಿ ಏಕಾಏಕಿ ಇಳಿಕೆ
ಅರಮನೆಯಲ್ಲಿ ವಾಸ್ತವ್ಯ ಹೂಡಿರುವ ಆನೆಗಳಿಗೆ ಇತ್ತೀಚೆಗೆ ತೂಕ ಹಾಕುವ ಪ್ರಕ್ರಿಯೆ ನಡೆದಿತ್ತು. 2015ನೇ ಸಾಲಿನಿಂದಲೂ ಬಲಾಢ್ಯ ಆನೆಗಳ ಲಿಸ್ಟ್ ನಲ್ಲಿದ್ದಿದ್ದು ಅರ್ಜುನ. ಅಂದು ಅವನಿದ್ದ ತೂಕ ಬರೋಬ್ಬರಿ 5445 ಕೆ ಜಿ. 2016 ರಲ್ಲಿ ಏರಿಕೆಯಾಗಿ 5615 ಕೆ ಜಿ ತೂಕ ಹೊಂದಿದ್ದ. ಹೀಗೆ ವರುಷದಿಂದ ವರುಷಕ್ಕೆ ತೂಕದಲ್ಲಿ ಏರಿಕೆ ಕಂಡಿದ್ದ ಈತ ಬಾರಿ 5250 ಕೆಜಿಗೆ ಇಳಿಕೆಯಾಗಿದ್ದಾನೆ. ಅಂದರೆ ಇದು ಕಳೆದ ಮೂರು ವರುಷದ ಹಿಂದಿದ್ದ ತೂಕಕ್ಕಿಂತ 195 ಕೆ ಜಿ ಕಡಿಮೆ.

ಮಾವುತರ ನಡುವೆ ಶುರುವಿಟ್ಟುಕೊಂಡಿದೆ ಮುಸುಕಿನ ಗುದ್ದಾಟ?
ಹೌದು, ಮಾವುತ ಕಾವಾಡಿಯ ಜಗಳದಲ್ಲಿ ಅಂಬಾರಿಯ ಅರ್ಜುನ ಆನೆ ಬಡವಾಗುತ್ತಿದ್ದಾನೆ. ಕಳೆದ ವರುಷ ಗಜಪಯಣ ಆರಂಭಕ್ಕೂ 13 ದಿನ ಮುನ್ನವೇ ಅರ್ಜುನನ ಮಾವುತ ದೊಡ್ಡ ಮಾಸ್ತಿ ನಿಧನವಾಗಿದ್ದರು. ಇದರಿಂದ ಅರಣ್ಯ ಇಲಾಖೆ ಹಾಗೂ ಜಿಲ್ಲಾಡಳಿತ ಚಿಂತೆಗೀಡಾಗಿದ್ದ ವೇಳೆ ದೊಡ್ಡಮಾಸ್ತಿಯ ಮಗ ಸಣ್ಣಪ್ಪ ಅರಣ್ಯಾಧಿಕಾರಿಗಳಿಗೆ ಅಭಯವನ್ನಿತ್ತು ದಸರಾ ಮಹೋತ್ಸವದಲ್ಲಿ ಅರ್ಜುನನ್ನು ಯಶಸ್ವಿಯಾಗಿ ಮುನ್ನಡೆಸಿದ್ದ. ಇದರ ಮಧ್ಯೆ ಒಂದೂವರೆ ವರುಷದ ಹಿಂದೆ ಬಳ್ಳೆ ಆನೆ ಶಿಬಿರದಲ್ಲಿದ್ದ ರುಕ್ಮಿಣಿ ಎಂಬ ಹೆಣ್ಣಾನೆ ಅಕಾಲಿಕ ಮರಣಕ್ಕೀಡಾಗಿದ್ದ ಹಿನ್ನೆಲೆಯಲ್ಲಿ ಅದರ ಮಾವುತರಾಗಿದ್ದ ವಿನುವನ್ನು ಅರ್ಜುನ ಆನೆಯ ಮಾವುತನನ್ನಾಗಿ ಅರಣ್ಯ ಇಲಾಖೆ ಈ ಬಾರಿ ನೇಮಿಸಿದೆ.
ಇನ್ನು ಹೊಸದಾಗಿ ನೇಮಕಗೊಂಡ ವಿನು ಅರ್ಜುನನಿಗೆ ಪರಿಚಯಿಸ್ಥನಲ್ಲದ ಕಾರಣ ಸ್ವಲ್ಪ ಕ್ಯಾತೆ ತೆಗೆಯುತ್ತಿದ್ದಾನೆ. ಕಳೆದ ಬಾರಿ ಯಶಸ್ವಿಯಾಗಿಯೇ ಕೆಲಸ ಮಾಡಿದ ಸಣ್ಣಪ್ಪನ ಬದಲಿಗೆ 6 ತಿಂಗಳ ಹಿಂದೆಯೇ ಬದಲಾವಣೆ ಮಾಡುವ ಆದೇಶ ನೀಡಿತ್ತು. ಆಗಿನಿಂದಲೂ ಇಬ್ಬರ ನಡುವೆ ವೈಮನಸ್ಯ ಉಂಟಾಗಿದೆ.
ಮೊದಲ ದಿನವೇ ಕಿರಿಕ್ ಮಾಡಿದ್ದ ಅರ್ಜುನ
ಅರಣ್ಯಾಧಿಕಾರಿಗಳು ಗಜಪಯಣ ದಿನದಂದೇ ವಿನು ಮುಂದಾಳತ್ವದಲ್ಲಿ ಅರ್ಜುನ ಆನೆಯನ್ನು ಮುನ್ನಡೆಸಲು ಬಿಟ್ಟರು. ಆದರೆ ಅಂದು ಅರ್ಜುನ ಆನೆ ಗಜಪಯಣದ ದಿನ ಮುಂದೇ ಹೋಗದೆ ನಿಂತ ಜಾಗದಲ್ಲೇ ನಿಂತಿತ್ತು. ಮಾವುತ ವಿನು ನೀಡುವ ಸನ್ನೆಗಳನ್ನು ಕೇಳುತ್ತಿರಲಿಲ್ಲ. ಕೊನೆಗೆ ಅರಣ್ಯಾಧಿಕಾರಿಗಳು ಆನೆಯ ಪಕ್ಕದಲ್ಲಿ ನಿಂತಿದ್ದ ಕಾವಾಡಿ ಮಹೇಶನನ್ನು ಅರ್ಜುನನ ಮೇಲೆ ಹತ್ತಿಸಿದಾಗ ಅರ್ಜುನ ಮುನ್ನಡೆದ. ಇಂತಹ ಸ್ಥಿತಿಯಲ್ಲಿ ಅಧಿಕಾರಿಗಳು ಜಂಬೂಸವಾರಿಯ ದಿನ ವಿನು ಮುಂದಾಳತ್ವದಲ್ಲಿ ಅರ್ಜುನ ಆನೆಯನ್ನ ಮುನ್ನಡೆಸುವುದು ಕಷ್ಟ ಎನ್ನುತ್ತಾರೆ ಹಿರಿಯ ಮಾವುತರು.
ತಂದೆ ದೊಡ್ಡ ಮಾಸ್ತಿಯೊಂದಿಗೆ ಚಿಕ್ಕನಿಂದಲೂ ಅರ್ಜುನ ಆನೆಯನ್ನು ಆರೈಕೆ ಮಾಡಿದ ಮಹೇಶನ ಸನ್ನೆಗಳನ್ನ ಅರ್ಜುನ ಆನೆ ಮೀರುವುದಿಲ್ಲ. ಆತ ಬಾ ಎಂದು ಕರೆದರೆ ಅರ್ಜುನ ಆನೆ ಓಡಿ ಬರುತ್ತದೆ. ಹೀಗಾಗಿ ಬೇರೆ ಯಾವುದೇ ಮಾವುತರು ಕಾವಾಡಿಗಳ ಮಾತನ್ನು ಕೇಳದ ಅರ್ಜುನ ಆನೆಯ ಮೇಲೆ ಈ ಬಾರಿ ಚಿನ್ನದ ಅಂಬಾರಿಯನ್ನು ಇಟ್ಟು ಬೇರೆ ಮಾವುತನ ಕಡೆಯಿಂದ ಮುನ್ನಡೆಸುವುದು ಕಷ್ಟ. ಅಲ್ಲದೇ ಕಾವಾಡಿ ಮಹೇಶನ 6 ವರ್ಷದ ಮಗ ಅರ್ಜುನ ಆನೆಯನ್ನು ಕರೆದುಕೊಂಡು ಬರುತ್ತಾನೆ. ಆ ರೀತಿ ಮಹೇಶನ ಕುಟುಂಬದೊಂದಿಗೆ ಅರ್ಜುನ ಆನೆ ಹೊಂದಿಕೊಂಡಿದೆ. ಈ ಮಧ್ಯೆ ಕೆಲವು ಕಾಣದ ಕೈಗಳು ಈ ಬಾರಿ ಜಂಬೂ ಸವಾರಿಯನ್ನ ಮಹೇಶ ಮುನ್ನೆಡಸದಂತೆ ತಪ್ಪಿಸುತ್ತಿದ್ದಾರೆ ಎಂದು ತಮ್ಮ ಅಳಲನ್ನ ಸ್ವತಃ ಮಹೇಶ ತೋಡಿಕೊಳ್ಳುತ್ತಿದ್ದಾರೆ.
ಜಂಬೂ ಸವಾರಿಗೆ ಅಡ್ಡಿಯಾಗದಿರಲಿ :
ಇಲ್ಲಿ ವಿನು ಕಾನೂನು ಪ್ರಕಾರ ಮಾವುತ. ಅರ್ಜುನನೊಂದಿಗೆ ಸಣ್ಣಪ್ಪ ಭಾವನಾತ್ಮಕ ಸಂಬಂಧ ಹೊಂದಿದ್ದಾನೆ. ಆದರೆ ಈ ಬಾರಿ ಕ್ಯಾಪ್ಟನ್ ಅರ್ಜುನನ ಮೇಲೆ ಕುಳಿತು ದಸರೆಯ ಸಾರಥ್ಯ ಮಾಡಬೇಕಾದ ಜವಾಬ್ದಾರಿ ವಿನುವಿನದ್ದು. ಆದರೆ ಸಾಕಿದ ಅರ್ಜುನನ್ನು ಬಿಟ್ಟುಕೊಡಬೇಕಾದ ತೊಳಲಾಟದಲ್ಲಿ ಸಣ್ಣಪ್ಪ ಸಿಲುಕಿದ್ದಾನೆ. ಹಾಗಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಂಬೂಸವಾರಿ ನಡೆಸಬೇಕಾದ ಜವಾಬ್ದಾರಿ ಅರಣ್ಯ ಇಲಾಖೆ ಮೇಲಿದ್ದು, ಇದರತ್ತ ಗಮನಹರಿಸಬೇಕಿದೆ ಎಂಬುದು ಒನ್ ಇಂಡಿಯಾ ಆಶಯ.












Click it and Unblock the Notifications