ಸೆ. 16ರಿಂದ ದಸರಾ'ಯುವ ಸಂಭ್ರಮ'... ಡಾಲಿ ಧನಂಜಯ್ ಪ್ರಮುಖ ಆಕರ್ಷಣೆ
ಮೈಸೂರು, ಸೆಪ್ಟೆಂಬರ್ 15: ದಸರಾ ಅಂಗವಾಗಿ ಮಾನಸಗಂಗೋತ್ರಿ ಬಯಲು ರಂಗಮಂದಿರಲ್ಲಿ ಸೆಪ್ಟೆಂಬರ್ 16ರಿಂದ 24ರವರೆಗೆ 'ಯುವ ಸಂಭ್ರಮ' ಕಾರ್ಯಕ್ರಮ ನಡೆಯಲಿದೆ ಎಂದು ದಸರಾ ಯುವ ಸಂಭ್ರಮ ಉಪಸಮಿತಿ ವಿಶೇಷಾಧಿಕಾರಿಯೂ ಆದ ಜಿಲ್ಲಾ ಎಸ್ಪಿ ಆರ್.ಚೇತನ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, " ಯುವ ಸಂಭ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳು ಮತ್ತು ರಾಜ್ಯದ ಇತರೆ ವಿವಿಗಳ ತಲಾ ಒಂದು ಸೇರಿ ಒಟ್ಟು 253 ತಂಡಗಳು ಕಾರ್ಯಕ್ರಮ ನೀಡಲಿವೆ. ಒಟ್ಟು 10,500 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಪ್ರತಿ ತಂಡಕ್ಕೆ 10 ನಿಮಿಷ ಕಾಲಾವಕಾಶ ನೀಡಲಾಗಿದ್ದು, ಪ್ರತಿ ತಂಡದಲ್ಲಿ 30 ರಿಂದ 40 ಕಲಾವಿದರಿಗೆ ಅವಕಾಶ ನೀಡಲಾಗಿದೆ " ಮಾಹಿತಿ ನೀಡಿದರು.
ಪ್ರತಿ ವರ್ಷ ದಸರಾ ಮಹೋತ್ಸವದಲ್ಲಿ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರ ಪ್ರತಿಭೆಗೆ ಅನಾವರಣಕ್ಕೆ ಯುವ ಸಂಭ್ರಮ ಕಾರ್ಯಕ್ರಮದ ಮೂಲಕ ವೇದಿಕೆ ಕಲ್ಪಿಸಲಾಗುತ್ತಿದೆ. ಅದರಂತೆ ಈ ಬಾರಿಯೂ ಸೆಪ್ಟೆಂಬರ್ 16ರಿಂದ ಯುವ ಸಂಭ್ರಮ ಆಯೋಜಿಸಲಾಗುತ್ತಿದೆ. " ಸೆಪ್ಟೆಂಬರ್ 16ರಂದು ಸಂಜೆ 5.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಯುವ ಸಂಭ್ರಮಕ್ಕೆ ಚಾಲನೆ ನೀಡಲಿದ್ದಾರೆ. ನಟ ಡಾಲಿ ಧನಂಜಯ ಭಾಗವಹಿಸಲಿದ್ದಾರೆ. ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ" ಎಂದು ಹೇಳಿದರು.

ಕಲಾವಿದರಿಗೆ ಪ್ರಯಾಣ ಭತ್ಯೆ
ಯುವ ಸಂಭ್ರಮದಲ್ಲಿ ನಿತ್ಯ 28 ತಂಡಗಳು ಪ್ರದರ್ಶನ ನೀಡಲಿದ್ದು, ಈ ವೇಳೆ ಅತ್ಯುತ್ತಮ ಪ್ರದರ್ಶನ ನೀಡಿದ 3 ತಂಡಗಳನ್ನು ನಿತ್ಯ ಆಯ್ಕೆ ಮಾಡಲಾಗುವುದು. ಒಟ್ಟು 18 ತಂಡಗಳನ್ನು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಯುವ ದಸರಾದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಕಲಾವಿದರನ್ನು ಗೌರವಿಸುವುದರ ಜತೆಗೆ ಪ್ರಯಾಣ ಭತ್ಯೆ, ವಸ್ತ್ರ ವಿನ್ಯಾಸದ ವೆಚ್ಚ ನೀಡಲಾಗುತ್ತದೆ. ನಿತ್ಯ ಸಂಜೆ 5.30ರಿಂದ ರಾತ್ರಿ 10ರ ತನಕ ಕಾರ್ಯಕ್ರಮ ನಡೆಯಲಿದೆ. ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಿದ್ದು, ಅಗತ್ಯ ಪೊಲೀಸ್ ಬಂದೋಬಸ್ತ್ ಹಾಗೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದರು.

9 ವಿಷಯಗಳಾಧರಿತ ಸಾಂಸ್ಕೃತಿಕ ಕಾರ್ಯಕ್ರಮ
ಈ ಬಾರಿಯ ಯುವ ಸಂಭ್ರಮಕ್ಕೆ ಸ್ವಾತಂತ್ರ್ಯ ಅಮೃತ ಮಹೋತ್ಸವ, ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕದ ಕೊಡುಗೆ, ರಾಷ್ಟ್ರೀಯ ಭಾವೈಕ್ಯತೆ, ಕನ್ನಡ ಸಂಸ್ಕೃತಿ ಮತ್ತು ಜಾನಪದ ಕಲೆ, ಮಹಿಳಾ ಸಬಲೀಕರಣ, ಮಾದರಿ ಮೈಸೂರು ನಿರ್ಮಾಣಕ್ಕೆ ಅರಸರ ಕೊಡುಗೆ ಮತ್ತು ಪರಿಸರ ಸಂರಕ್ಷಣೆ ಸೇರಿ 9 ವಿಷಯಗಳನ್ನು ನೀಡಲಾಗಿದೆ. ಇದರಡಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು.

ಪ್ರತಿಭೆ ಅನಾವರಣಕ್ಕೆ ಸೂಕ್ತ ವೇಧಿಕೆ
" ಎರಡು ವರ್ಷಗಳ ಬಳಿಕ ಅದ್ಧೂರಿಯಾಗಿ ಯುವ ಸಂಭ್ರಮ ಆಯೋಜನೆ ಮಾಡಿದ್ದೇವೆ. ಕಾಲೇಜು ಮಕ್ಕಳ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ದೊರೆಯಲಿದೆ. ಯುವ ದಸರಾ ಸಿದ್ಧತೆ ಆರಂಭವಾಗಿದೆ. ಕಲಾವಿದರ ಆಯ್ಕೆ ಅಂತಿಮ ಹಂತದಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮಾಹಿತಿ ನೀಡಲಿದ್ದಾರೆ" ಎಂದು ಆರ್.ಚೇತನ್ ತಿಳಿಸಿದ್ದಾರೆ.

ಸೆ.25 ರಿಂದ ದಸರಾ ರಂಗೋತ್ಸವ-2022
ರಂಗಾಯಣದಿಂದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಮರಣಾರ್ಥ 'ದಸರಾ ರಂಗೋತ್ಸವ-2022'ವನ್ನು ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 4ರವರೆಗೆ ಆಯೋಜಿಸಲಾಗಿದೆ
ಸೆ.25ರಂದು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ರಚನೆಯ 'ಕೃಷ್ಣೇಗೌಡನ ಆನೆ' ನಾಟಕ ಪ್ರದರ್ಶನಗೊಳ್ಳಲಿದೆ. ಆರ್. ನಾಗೇಶ್ ನಿರ್ದೇಶನದಲ್ಲಿ ಮೈಸೂರು ರಂಗಾಯಣ ರೆಪರ್ಟರಿ ತಂಡ ಪ್ರಸ್ತುತ ಪಡಿಸಲಿದೆ. 26ರಂದು ಜಿ.ಕೆ.ನಂದಕುಮಾರ ರಚನೆ, ನಿರ್ದೇಶನದಲ್ಲಿ ಭಾರತೀಯ ರಂಗವಿದ್ಯಾಲಯ ತಂಡ 'ಸಮರಕಥಾ' ನಾಟಕ ಪ್ರಸ್ತುತ ಪಡಿಸಲಿದೆ. ದಸರಾ ರಂಗೋತ್ಸವ ಪ್ರಯುಕ್ತ ರಂಗಾಯಣ ಭೂಮಿಗೀತ ರಂಗವೇದಿಕೆಯಲ್ಲಿ ನಿತ್ಯ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ. ಎಲ್ಲ ನಾಟಕಗಳಿಗೂ ಉಚಿತ ಪ್ರವೇಶ ಕಲ್ಪಿಸಲಾಗಿದೆ.












Click it and Unblock the Notifications