ವೈಯಕ್ತಿಕ ದ್ವೇಷಕ್ಕೆ ಮೂಕ ಪ್ರಾಣಿಗಳ ಸಜೀವ ದಹನ
ಮೈಸೂರು, ಜೂನ್ 06: ವೈಯಕ್ತಿಕ ದ್ವೇಷವನ್ನು ಮುಂದಿಟ್ಟುಕೊಂಡು ದನದಕೊಟ್ಟಿಗೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರಿಂದ ಕೊಟ್ಟಿಗೆ ಸುಟ್ಟು ಭಸ್ಮವಾಗಿದ್ದು, ಒಳಗೆ ಕಟ್ಟಿಹಾಕಲಾಗಿದ್ದ ಎರಡು ಹಸುಗಳು, ಒಂದು ಕರು ಸಜೀವ ದಹನವಾಗಿದ್ದರೆ, ಒಂದು ಹಸು ಗಂಭೀರ ಗಾಯಗೊಂಡಿದ್ದು, ಮನೆಕಟ್ಟಲು ಸಂಗ್ರಹಿಸಿಟ್ಟಿದ್ದ ಮರದ ಪದಾರ್ಥಗಳು ಭಸ್ಮವಾಗಿರುವ ಘಟನೆ ನಂಜನಗೂಡು ತಾಲೂಕಿನ ಮುದ್ದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಿಡಿಗೇಡಿಗಳ ಕೃತ್ಯಕ್ಕೆ ಗ್ರಾಮದ ನಿವಾಸಿ ಶಿವಣ್ಣ(ಚಿನ್ನಸ್ವಾಮಿ) ಒಳಗಾಗಿದ್ದು ಸುಮಾರು 5ಲಕ್ಷ ರೂ. ನಷ್ಟವಾಗಿದೆ. ಇವರೊಂದಿಗೆ ದ್ವೇಷ ಸಾಧಿಸುತ್ತಿದ್ದ ಗ್ರಾಮದ ಕೆಲವರೇ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಶಿವಣ್ಣ ಮತ್ತು ಕುಟುಂಬದವರು ಮಲಗಿದ್ದ ರಾತ್ರಿ ವೇಳೆ ದುಷ್ಕರ್ಮಿಗಳು ಮನೆ ಮತ್ತು ದನದ ಕೊಟ್ಟಿಗೆಯ ಸುತ್ತ ಪೆಟ್ರೋಲನ್ನು ಸುರಿದು ಬೆಂಕಿ ಹಚ್ಚಿದ್ದಾರೆ. ಬೆಂಕಿ ಹೊತ್ತಿ ಉರಿಯಲಾರಂಭಿಸಿದಾಗ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕಿದ ಎರಡು ಹಸು ಮತ್ತು ಕರು ಸಾವನ್ನಪ್ಪಿವೆ. ಮತ್ತೊಂದು ಹಸು ಗಂಭೀರ ಗಾಯಗೊಂಡಿದೆ.

ವಿಷಯ ಗೊತ್ತಾಗಿ ಮಾಲೀಕ ಶಿವಣ್ಣ ಮತ್ತು ಪಕ್ಕದವರು ನೀರು ಹಾಕಿ ಬೆಂಕಿಯನ್ನು ನಂದಿಸುವ ಪ್ರಯತ್ನ ಮಾಡಿದ್ದಾರೆ. ಅಷ್ಟರಲ್ಲೇ ಅಗ್ನಿಶಾಮಕ ಠಾಣೆಗೂ ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದರಿಂದ ಭಾರೀ ಅನಾಹುತ ತಪ್ಪಿದ್ದಂತಾಗಿದೆ.
ಮನೆಯ ಮಾಲೀಕ ಶಿವಣ್ಣ ಮಾತನಾಡಿ ಗ್ರಾಮದ ನಾಗಣ್ಣ, ರೇವಣ್ಣ, ಪುಟ್ಟಸ್ವಾಮಿ, ಚಿಕ್ಕಸ್ವಾಮಿ, ಮಹೇಶ, ಮಹದೇವಪ್ಪ ಎಂಬುವವರೆ ಈ ಘಟನೆಗೆ ಕಾರಣವೆಂದು ಆರೋಪಿಸಿದ್ದಾರೆ.

ಇವರು ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರೆಸಿ ನನ್ನ ಮೇಲೆ ಅತ್ಯಾಚಾರದ ದೂರು ನೀಡಿದ್ದರು. ಸುಮಾರು 25 ದಿನಗಳಿಂದ ನಾನು ಊರಿನಲ್ಲಿ ಇರಲಿಲ್ಲ ನಾನು ನಿರೀಕ್ಷಣಾ ಜಾಮೀನು ಪಡೆದುಕೊಂಡು ಊರಿಗೆ ಬರುವಾಗ ರಸ್ತೆಯಲ್ಲಿ ಅಡ್ಡಗಟ್ಟಿ ಧಮಕಿ ಹಾಕಿ ಹಲ್ಲೆ ನಡೆಸಿದ್ದರು. ನಾನು ತಾಳ್ಮೆ ಕಳೆದುಕೊಳ್ಳದೆ ಮನೆಗೆ ಬಂದೆ ರಾತ್ರಿ ನೋಡುವಷ್ಟರಲ್ಲಿ ನನ್ನ ಮನೆಗೆ ಬೆಂಕಿ ಇಟ್ಟು ತಮ್ಮ ಅಟ್ಟಹಾಸ ಮೆರೆದಿದ್ದಾರೆ ಎಂದು ದೂರಿದ್ದಾರೆ.












Click it and Unblock the Notifications