ಜಲಪಾತೋತ್ಸವಕ್ಕೆ ಚುಂಚನಕಟ್ಟೆಯ ಧನುಷ್ಕೋಟಿ ಸಜ್ಜು: ಈ ಜಲಪಾತದ ವಿಶೇಷತೆ ತಿಳಿಯಿರಿ
ಮೈಸೂರು, ನವೆಂಬರ್ 29: ಚುಂಚನಕಟ್ಟೆಯ ಧನುಷ್ಕೋಟಿ ಕಾವೇರಿ ಜಲಪಾತೋತ್ಸವಕ್ಕೆ ಸರ್ವ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದ್ದು, ನಾಳೆ ಮತ್ತು ನಾಡಿದ್ದು (ನ.30, ಡಿ.01) ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಆ ಮೂಲಕ 6ನೇ ಬಾರಿ ನಡೆಯುತ್ತಿರುವ ಜಲಪಾತೋತ್ಸವವನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತ ಹಲವು ರೀತಿಯ ಕ್ರಮಗಳನ್ನು ಕೈಗೊಂಡಿದೆ.
ಜಲಪಾತೋತ್ಸವಕ್ಕೆ ಆಗಮಿಸುವರಿಗೆ ವಾಹನ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಕಲ್ಪಿಸುವುದು, ಕೆ.ಆರ್.ನಗರದಿಂದ ಚುಂಚನಕಟ್ಟೆಯವರೆಗೂ ಮಧ್ಯ ಸಿಗುವ ಗ್ರಾಮ ಮತ್ತು ಗ್ರಾಮದ ಮುಖ್ಯ ರಸ್ತೆಗಳಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡುವುದರ ಜತೆಗೆ ಆವರಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ನಿರಂತರ ವಿದ್ಯುತ್ ವ್ಯವಸ್ಥೆ, ತಾತ್ಕಾಲಿಕ ಆಸ್ಪತ್ರೆ, ಆಂಬ್ಯುಲೆನ್ಸ್, ಶೌಚಾಲಯಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.

ಇನ್ನು ಜಲಪಾತೋತ್ಸವ ನಡೆಯುತ್ತಿರುವ ಧನುಷ್ಕೋಟಿ ಜಲಪಾತದ ಬಗ್ಗೆ ಒಂದಿಷ್ಟು ಮಾಹಿತಿ ನೀಡ ಬೇಕಾದರೆ ಮೈಸೂರು ವ್ಯಾಪ್ತಿಯ ಜನರಿಗೆ ಇದೊಂದು ಆಕರ್ಷಣೀಯ ಜಲಪಾತವಾಗಿದೆ. ಕಳೆದ ಬಾರಿ ಈ ವೇಳೆಗೆಲ್ಲ ಜಲಪಾತದ ವೈಭವ ಕಡಿಮೆ ಇತ್ತಾದರೂ ಈ ಬಾರಿ ಮುಂಗಾರು ಮತ್ತು ಹಿಂಗಾರು ಅಬ್ಬರಿಸಿರುವ ಕಾರಣ ಕಾವೇರಿಯ ಅಬ್ಬರ ಕಡಿಮೆಯಾಗಿಲ್ಲ. ಹೀಗಾಗಿ ಹೆಬ್ಬಂಡೆಗಳ ಮೇಲೆ ಧುಮ್ಮಿಕ್ಕಿ ಹರಿಯುವ ದೃಶ್ಯ ಸಾಮಾನ್ಯವಾಗಿದೆ.
ಜಲಪಾತ ಸೃಷ್ಟಿಯ ಬಗ್ಗೆ ಪುರಾಣದ ಕಥೆ
ಕಾವೇರಿ ನದಿಯಿಂದ ಸೃಷ್ಠಿಯಾಗಿರುವ ಚುಂಚನಕಟ್ಟೆಯ ಧನುಷ್ಕೋಟಿ ಜಲಪಾತ ಈ ಭಾಗದ ಜನಕ್ಕೆ ಮುದ ನೀಡುವ ಜಲಧಾರೆ ಎಂದರೆ ತಪ್ಪಾಗಲಾರದು. ಈ ಬಾರಿ ಕೊಡಗಿನಲ್ಲಿ ಉತ್ತಮವಾಗಿ ಮಳೆಯಾಗಿರುವುದರಿಂದ ಕಾವೇರಿ ನದಿಯಲ್ಲಿ ಉತ್ತಮ ನೀರಿನ ಹರಿವು ಇರುವುದರಿಂದ ಕಾವೇರಿಯ ನರ್ತನವಿದ್ದು, ಜನ ತಮ್ಮ ದೈನಂದಿನ ಜಂಜಾಟ ಮರೆತು ಖುಷಿಯಾಗಿ ಕಾಲ ಕಳೆಯಲು ಬರಲು ಸಕಾಲವಾಗಿದೆ.
ಮಳೆಗಾಲ ಮುಗಿದರೂ ಇತ್ತೀಚೆಗಿನ ದಿನಗಳ ತನಕವೂ ಮಳೆ ಸುರಿದಿರುವ ಕಾರಣದಿಂದಾಗಿ ಕಾವೇರಿ ನದಿಯಲ್ಲಿ ನೀರಿದ್ದು ಅದು ಹೆಬ್ಬಂಡೆಗಳ ಮೇಲೆ ಧುಮುಕುವಾಗಿನ ದೃಶ್ಯ ಬೆಳ್ಳಿ ಸುರಿದಂತೆ ಗೋಚರಿಸುತ್ತಿದ್ದು, ಕಣ್ಮನ ಸೆಳೆಯುತ್ತಿದೆ. ಇದೆಲ್ಲದರ ನಡುವೆ ಇಲ್ಲಿ ಈ ಜಲಪಾತ ಸೃಷ್ಟಿಯಾಗಿದ್ದು ಹೇಗೆ ಎಂಬುದನ್ನು ನೋಡಿದ್ದೇ ಆದರೆ ಜಲಪಾತ ಸೃಷ್ಟಿಯ ಹಿಂದೆ ಪುರಾಣದ ಕಥೆ ತೆರೆದುಕೊಳ್ಳುತ್ತದೆ. ಅದರ ಪ್ರಕಾರ ನೋಡುವುದಾದರೆ ನಾವು ರಾಮಾಯಣದ ಕಾಲಕ್ಕೆ ಹೋಗಬೇಕಾಗುತ್ತದೆ.

ಗುಪ್ತಗಾಮಿನಿಯಾದ ಹರಿಯುತ್ತಿದ್ದ ಕಾವೇರಿ
ಪುರಾಣದ ಕಾಲದಲ್ಲಿ ಈ ಕ್ಷೇತ್ರವು ದಟ್ಟ ಕಾಡಿನಿಂದ ಕೂಡಿದ ಅರಣ್ಯವಾಗಿತ್ತಂತೆ. ಇದನ್ನು ದಂಡಕಾರಣ್ಯವೆಂದು ಕರೆಯಲಾಗುತ್ತಿತ್ತಂತೆ. ಒಮ್ಮೆ ಇಲ್ಲಿಗೆ ಆಗಮಿಸಿದ ತೃಣಬಿಂಧು ಮಹರ್ಷಿಗಳು ಈ ಸ್ಥಕಳವನ್ನು ನೋಡಿ ತಮ್ಮ ತಪಸ್ಸಿಗೆ ಇದು ಸೂಕ್ತ ಸ್ಥಳವೆಂದು ನಿರ್ಧರಿಸುತ್ತಾರೆ. ಆದರೆ ತಪಸ್ಸು ಮಾಡುವ ಮುನ್ನ ಸ್ನಾನ, ಜಪ ಮಾಡಲು ನದಿ ಅವಶ್ಯಕತೆಯಿರುವುದರಿಂದ ಅವರು ನದಿಗಾಗಿ ಹುಡುಕಾಡುತ್ತಾರೆ. ಈ ವೇಳೆ ಅವರಿಗೆ ಅಲ್ಲಿಯೇ ಗುಪ್ತಗಾಮಿನಿಯಾಗಿ ಹರಿಯುವ ಕಾವೇರಿ ನದಿ ಕಾಣಿಸುವುದಿಲ್ಲ. ಹೀಗಾಗಿ ನಾರಾಯಣನನ್ನು ಕುರಿತು ತಪಸ್ಸು ಮಾಡಲು ಆರಂಭಿಸುತ್ತಾರೆ.
ತೃಣಬಿಂಧು ಮಹರ್ಷಿಗಳ ತಪಸ್ಸಿಗೆ ಒಲಿದ ನಾರಾಯಣ ಗುಪ್ತಗಾಮಿನಿಯಾದ ಹರಿಯುತ್ತಿದ್ದ ಕಾವೇರಿಯನ್ನು ತೋರಿಸುತ್ತಾನೆ. ಅಷ್ಟೇ ಅಲ್ಲದೆ ತ್ರೇತಾಯುಗದಲ್ಲಿ ರಾಮನ ಅವತಾರವೆತ್ತಿ ರಾವಣನನ್ನು ಸಂಹಾರ ಮಾಡಿ ನಿಮ್ಮ ಇಷ್ಟಾರ್ಥವನ್ನು ನೆರವೇರಿಸಿಕೊಡುತ್ತೇನೆಂದು ಮಾತು ನೀಡುತ್ತಾನೆ. ಕಾಲಾಂತರದಲ್ಲಿ ತ್ರೇತಾಯುಗದಲ್ಲಿ ಶ್ರೀರಾಮ, ಸೀತೆ ಲಕ್ಷ್ಮಣರಾದಿಯಾಗಿ ವಾನರ ಸೇನೆಯು ಲಂಕೆಯಲ್ಲಿ ರಾವಣನನ್ನು ಸಂಹಾರ ಮಾಡಿ ಹಿಂತಿರುಗುವಾಗಿ ಈ ಕ್ಷೇತ್ರಕ್ಕೆ ಬರುತ್ತಾರೆ.
ಈಜುವ ಪ್ರಯತ್ನ ಮಾಡಲೇ ಬೇಡಿ
ಈ ವೇಳೆ ಲಕ್ಷ್ಮಣನಿಗೆ ರಾಮ ಬಂಡೆಯನ್ನು ಒಡೆಯಲು ಹೇಳುತ್ತಾನೆ. ಲಕ್ಷ್ಮಣ ಹೊಡೆದ ಬಾಣಕ್ಕೆ ಬಂಡೆ ಚೂರಾಗಿ ಒಡೆದು ಅದರ ನಡುವಿನಿಂದ ಕಾವೇರಿ ಉಕ್ಕಿ ಹರಿಯುತ್ತಾಳೆ. ಹೀಗೆ ಲಕ್ಷ್ಮಣ ಬಾಣ ಬಿಟ್ಟ ಸ್ಥಳದಲ್ಲಿ ಸೃಷ್ಟಿಯಾದ ಜಲಧಾರೆಯೇ ಧನುಷ್ಕೋಟಿ ಜಲಪಾತವಾಗಿದ್ದು, ಇಲ್ಲಿಯ ಮತ್ತೊಂದು ವಿಶೇಷತೆ ಏನೆಂದರೆ ಈ ಜಲಪಾತ ಎಷ್ಟೇ ಭೋರ್ಗರೆದು ಸುತ್ತಮುತ್ತಲ ಜನರ ಕಿವಿಗೆ ಅಪ್ಪಳಿಸಿದರೂ ಸಮೀಪದ ರಾಮದೇವರ ದೇವಾಲಯದ ಗರ್ಭಗುಡಿಗೆ ಆ ಶಬ್ದವೇ ಕೇಳಿಸುವುದಿಲ್ಲವಂತೆ.
ಇನ್ನು ಈ ಜಲಪಾತವು ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿಗೆ ಹತ್ತಿರದ ಚುಂಚನಕಟ್ಟೆ ಬಳಿಯಿದ್ದು, ಮೈಸೂರಿನಿಂದ 54ಕಿ.ಮೀ.ದೂರದಲ್ಲಿದೆ. ಕಾವೇರಿ ನದಿ ವಿಶಾಲ ಬಂಡೆಗಳ ನಡುವೆ ಸುಮಾರು 400 ಅಡಿ ಅಗಲವಾಗಿ 60 ಅಡಿ ಎತ್ತರದಿಂದ ಧುಮುಕುವ ಮೂಲಕ ಜಲಪಾತ ಸೃಷ್ಟಿಯಾಗಿದೆ. ಇದೀಗ ಇದೇ ಸ್ಥಳದಲ್ಲಿ ಜಲಪಾತೋತ್ಸವ ನಡೆಯುತ್ತಿರುವುದರಿಂದ ಎಲ್ಲರ ದೃಷ್ಠಿ ಅತ್ತ ನೆಟ್ಟಿರುವುದಂತು ನಿಜ.












Click it and Unblock the Notifications