ಪುಸ್ತಕ ರೂಪಕ್ಕಿಳಿದ 'ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ'
ಮೈಸೂರು, ಡಿಸೆಂಬರ್ 6: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ರಾಜಕೀಯ ಕಥೆಗಳೇ ಹಾಗೆ; ಕುತೂಹಲಕಾರಿ, ರೋಮಾಂಚಕ ಮತ್ತು ಆಸಕ್ತಿಕರ. ಇದನ್ನು ಪುಸ್ತಕ ರೂಪಕ್ಕಿಳಿಸಿದ್ದಾರೆ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್.
ಮೈಸೂರು ಭಾಗದ ರಾಜಕೀಯದ 'ಗೂಗಲ್ ' ಎಂದೇ ತಮ್ಮ ಶಿಷ್ಯರಿಂದ ಕರೆಸಿಕೊಳ್ಳುವ ಪ್ರಸನ್ನ ಕುಮಾರ್ 'ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ'ದ ಪುಸ್ತಕ ಬರೆದಿದ್ದಾರೆ.
ಚುನಾವಣೆ ಹೊತ್ತಲ್ಲೇ ಬಿಡುಗಡೆಯಾಗಲಿರುವ ಈ ಪುಸ್ತಕದಲ್ಲಿ ಅವರು ಮೈಸೂರು - ಚಾಮರಾಜನಗರದ ರಾಜಕೀಯ ಮತ್ತು ಚುನಾವಣೆಯ ವಿವರಗಳನ್ನು ದಾಖಲಿಸಿದ್ದಾರೆ.
ಇದೇ ಶುಕ್ರವಾರ ಅಂದರೆ ಡಿಸೆಂಬರ್ 8ರಂದು ಈ ಪುಸ್ತಕ ಬಿಡುಗಡೆಯಾಗಲಿದೆ. ಮೈಸೂರಿನ ಕಲಾಮಂದಿರದಲ್ಲಿ ಡಿಸೆಂಬರ್ 8 ರ ಸಂಜೆ 4.30 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಕೃತಿಯ ಕುರಿತು ಹಿರಿಯ ಪತ್ರಕರ್ತ ಕೃಷ್ಣ ಪ್ರಸಾದ್ ಕಾರ್ಯಕ್ರಮದಲ್ಲಿ ವಿವರ ನೀಡಲಿದ್ದಾರೆ. ಸಚಿವರಾದ ಎಚ್.ಸಿ ಮಹದೇವಪ್ಪ, ತನ್ವೀರ್ ಸೇಠ್, ಗೀತಾ ಮಹದೇವಪ್ರಸಾದ್ ಹಾಗೂ ಮೈಸೂರು-ಚಾಮರಾಜನಗರ ಭಾಗದ ಹೆಚ್ಚಿನ ಶಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.