ಮೈಸೂರಿನ ರಸ್ತೆ ಮಧ್ಯೆ ಇರುವೆ ಕಟ್ಟಿದೆ ಸಣ್ಣ ಸೇತುವೆ!
ಮೈಸೂರು, ಡಿಸೆಂಬರ್ 24 : ಗುಂಡಿಯನ್ನು ಮುಚ್ಚುವಂತೆ ನಗರಪಾಲಿಕೆಯ ಗಮನ ಸೆಳೆಯಲು 'ಕಾವಾ' ಕಲಾವಿದರು ನಗರದಲ್ಲಿ ವಿನೂತನ ಪ್ರಯತ್ನ ನಡೆಸಿದ್ದಾರೆ.ಇಲ್ಲಿನ ನಜರಬಾದಿನಲ್ಲಿ ರಸ್ತೆ ಮಧ್ಯೆ ಇರುವ ಗುಂಡಿಯಿಂದ ದೈತ್ಯ ಇರುವೆ ಹೊರ ಬರುತ್ತಿರುವಂತೆ ಪ್ರತಿಕೃತಿಯನ್ನು ನಿಲ್ಲಿಸಿದ್ದಾರೆ.
ಇದನ್ನು ಕಂಡು ನಿಜವಾದ ಇರುವೆಯೇ ಇರಬೇಕು ಎಂದು ನಾಗರಿಕರು ಹೌಹಾರಿದ್ದಾರೆ. ನಗರಪಾಲಿಕೆ ಅಧಿಕಾರಿಗಳ ಗಮನಸೆಳೆಯಲು ಈ ರೀತಿ ಭಿನ್ನ ಪ್ರಯತ್ನವನ್ನು ಕಲಾವಿದರು ಮಾಡಿದ್ದಾರೆ. ಚಾಮರಾಜೇಂದ್ರ ಅಕಾಡೆಮಿ ಆಫ್ ವಿಷುವಲ್ ಆರ್ಟ್ಸ್ (ಕಾವಾ) ವಿದ್ಯಾರ್ಥಿಗಳು ರಸ್ತೆಯಲ್ಲಿ ನಿರ್ಮಾಣವಾದ ಗುಂಡಿಗಳಿಂದ ಅನಾಹುತಗಳು, ಅಪಘಾತಗಳು ಸಂಭವಿಸಬಾರದೆಂಬ ಕಾರಣಕ್ಕಾಗಿ ಈ ವಿನೂತನ ಪ್ರಯತ್ನ ಮಾಡಿದ್ದಾರೆ.

ರಸ್ತೆ ಮೇಲೆ ಬೃಹತ್ ಕಟ್ಟಿರುವೆಗಳ ಪ್ರತಿಬಿಂಬ ರಚಿಸಿ, ಗುಂಡಿ ಒಳಗಡೆಯಿಂದ ಕಟ್ಟಿರುವೆ ಬರುವಂತಹ ಆಕೃತಿಯನ್ನು 3ಡಿಯಲ್ಲಿ ರೂಪಿಸಿ ತೋರಿಸಿದ್ದಾರೆ. ಈ ಚಿತ್ರವನ್ನು ನೋಡಿದರೆ ನಿಜವಾಗಿಯೂ ಇರುವೆಗಳು ಇರುವಂತೆ ಕಾಣಿಸಿದ್ದರಿಂದ ರಸ್ತೆಯಲ್ಲಿ ಕೊಂಚ ಜಾಗೃತೆಯಿಂದ ಜನರು ಸಂಚರಿಸಿದ ಪ್ರಸಂಗ ಸಹ ನಡೆಯಿತು.

ಮೈಸೂರಿನ ನಜರ್ಬಾದ್ ರಸ್ತೆಯಲ್ಲಿ ಗುಂಡಿಗಳ ಸಾಮ್ರಾಜ್ಯವೇ ನಿರ್ಮಾಣವಾಗಿದೆ. ರಸ್ತೆಯ ಮಧ್ಯೆ ಎಲ್ಲಿ ನೋಡಿದರೂ ಗುಂಡಿಗಳೇ ಕಾಣಸಿಗುತ್ತದೆ. ಹೀಗಾಗಿ ಕಾವಾ ವಿದ್ಯಾರ್ಥಿಗಳು ಈ ಕುರಿತು ಜಾಗೃತಿ ಮೂಡಿಸಲು ಗುಂಡಿಯಿಂದ ಇರುವೆಗಳು ಹೊರಬರುತ್ತಿರುವಂತೆ ಮಾಡಿದ ಆಕೃತಿಗಳು ಎಲ್ಲರ ಗಮನ ಸೆಳೆಯುವಂತೆ ಮಾಡಿತು.












Click it and Unblock the Notifications