ಸಹಜ ಸ್ಥಿತಿಗೆ ಮರಳಿದ ನಂಜನಗೂಡು: ಖುಷಿಯಾದ ಜನರು
Recommended Video

ಮೈಸೂರು, ಆಗಸ್ಟ್ 20: ಪ್ರವಾಹದಿಂದ ನಲುಗಿದ್ದ ನಂಜನಗೂಡು ಪಟ್ಟಣ ಸೇರಿದಂತೆ ಹಲವು ಪ್ರದೇಶಗಳು ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಇದರಿಂದ ಜನ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಕೇರಳದ ವೈನಾಡಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದ ಕಾರಣ ಭಾರೀ ಪ್ರಮಾಣದಲ್ಲಿ ನೀರು ಹರಿದು ಜಲಾಶಯ ಸೇರಿದ ಕಾರಣ ಹೆಚ್ಚುವರಿ ನೀರನ್ನು ಅಧಿಕ ಪ್ರಮಾಣದಲ್ಲಿ ಬಿಡಲಾಗಿತ್ತು. ಇದರಿಂದ ಕಪಿಲಾ ನದಿಯಲ್ಲಿ ಪ್ರವಾಹವುಂಟಾಗಿ ನಂಜನಗೂಡು ಪಟ್ಟಣಕ್ಕೆ ನುಗ್ಗಿತ್ತು. ಹೀಗಾಗಿ ಸಂಚಾರ ಬಂದ್ ಆಗುವುದರೊಂದಿಗೆ ಹಲವು ಅವಘಡಗಳು ಸಂಭವಿಸಿದ್ದವು.
ಇದೀಗ ಪ್ರವಾಹ ಇಳಿಮುಖವಾಗಿರುವುದರಿಂದ ವಾಹನ ಸವಾರರು, ವ್ಯಾಪಾರಸ್ಥರು ಖುಷಿಯಾಗಿದ್ದಾರೆ.
ಇನ್ನು ನಂಜನಗೂಡು ಮೈಸೂರು ರಾಷ್ಟ್ರೀಯ ಹೆದ್ದಾರಿ 766 ಮಲ್ಲನಮೂಲೆ ಮಠದ ಬಳಿ ರಸ್ತೆಗೆ ನೀರು ಹರಿದು ಸಂಚಾರ ಅಸ್ತವ್ಯಸ್ತಗೊಂಡು ಮೈಸೂರು-ನಂಜನಗೂಡು ಮಾರ್ಗವನ್ನು ಬದಲಿಸಲಾಗಿತ್ತು.

ನೀರಿನ ಪ್ರಮಾಣ ಕಡಿಮೆಯಾದ ಹಿನ್ನೆಲೆಯಲ್ಲಿ ಎಂದಿನಂತೆ ಸಂಚಾರ ಪುನರಾರಂಭಗೊಂಡಿದೆ. ಮುಡಿಕಟ್ಟೆ ಪಕ್ಕ ಸ್ನಾನಘಟ್ಟ, ಪರಶುರಾಮ ದೇವಸ್ಥಾನ, ಸ್ವಾಮಿ ಅಯ್ಯಪ್ಪ ದೇವಸ್ಥಾನ, ಭಕ್ತಿ ಮಾರ್ಗ, ದಾಸೋಹ ಭವನದ ಮುಂಭಾಗ ಜಲಾವೃತ್ತಗೊಂಡು ಭಕ್ತಾದಿಗಳು ಪರದಾಡುವಂತಾಗಿತ್ತು. ಪ್ರವಾಹ ಇಳಿಮುಖದಿಂದಾಗಿ ಭಕ್ತಾದಿಗಳು ದೇವರ ದರ್ಶನವನ್ನು ಸುಗಮವಾಗಿ ಮಾಡುತ್ತಿದ್ದಾರೆ.

ಗಂಜಿ ಕೇಂದ್ರದಲ್ಲಿ 82 ಜನ ನಿರಾಶ್ರಿತರಿಗೆ ವ್ಯವಸ್ಥೆ ಮಾಡಿದ್ದು, ಇನ್ನೆರಡು ದಿನ ಪರಿಸ್ಥಿತಿಯನ್ನು ನೋಡಿ ಅವರನ್ನು ಸ್ಥಳಾಂತರಿಸಲಾಗುವುದೆಂದು ತಹಸೀಲ್ದಾರ್ ದಯಾನಂದರವರು ತಿಳಿಸಿದ್ದಾರೆ.












Click it and Unblock the Notifications