ಮೈಸೂರು; ಅಧಿಕಾರಿಗಳ ವರ್ಗಾವಣೆ, ಮೂಡಾ ಆಯುಕ್ತರು ಎತ್ತಂಗಡಿ
ಮೈಸೂರು, ಜೂನ್ 20; ಮೈಸೂರಿನಲ್ಲಿ ಅಧಿಕಾರಿಗಳ ವರ್ಗಾವಣೆ ಮುಂದುವರೆದಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಆಯುಕ್ತರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿದ್ದ ಡಾ. ಡಿ. ಬಿ. ನಟೇಶ್ ದಿಢೀರ್ ವರ್ಗಾವಣೆಗೊಂಡಿದ್ದಾರೆ. ಶೀಲವಂತ ಶಿವಕುಮಾರ್ ಮುಡಾದ ನೂತನ ಆಯುಕ್ತರಾಗಿ ನೇಮಕಗೊಂಡಿದ್ದಾರೆ.
ರೋಹಿಣಿ ಸಿಂಧೂರಿ ಮತ್ತು ಶಿಲ್ಪಾನಾಗ್ ವಿಚಾರ ರಾಜ್ಯದಲ್ಲಿ ದೊಡ್ಡಮಟ್ಟದ ಚರ್ಚೆಗೆ ಕಾರಣವಾಗಿತ್ತು. ಇಬ್ಬರೂ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿತ್ತು. ಇದಾದ ಬಳಿಕ ಕೂಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಲವು ಅಧಿಕಾರಿಗಳನ್ನ ವರ್ಗಾವಣೆ ಮಾಡಲಾಗಿತ್ತು.

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ಮುಡಾ ಆಯುಕ್ತರನ್ನು ವರ್ಗಾವಣೆ ಮಾಡಲಾಗಿದೆ. ಮೈಸೂರಿನ ಮುಡಾ ವ್ಯಾಪ್ತಿಯ ಹಲವು ಕಡೆಗಳಲ್ಲಿ ನಡೆದಿದೆ ಎನ್ನಲಾಗಿರುವ ಭೂ ಅಕ್ರಮ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿತ್ತು.
ಪ್ರಾಧಿಕಾರದ ವ್ಯಾಪ್ತಿಯಲ್ಲಿ ಭೂ ಅಕ್ರಮ ನಡೆದಿರುವ ಬಗ್ಗೆ ನಟೇಶ್ ತಪ್ಪೊಪ್ಪಿಕೊಂಡಿದ್ದರು. ಅಲ್ಲದೇ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶಗಳ ಬೆನ್ನಲ್ಲೇ ನಟೇಶ್ ನೀಡಿದ್ದ ಹೇಳಿಕೆ ಮುಡಾ ಅಧ್ಯಕ್ಷರು ಸೇರಿದಂತೆ ಕೆಲವು ಜನಪ್ರತಿನಿಧಿಗಳಿಗೆ ಮುಜುಗರ ಉಂಟುಮಾಡಿತ್ತು.
ಈ ಎಲ್ಲಾ ಅಕ್ರಮಗಳ ಬೆನ್ನಲ್ಲೇ ಮುಡಾ ಆಯುಕ್ತ ನಟೇಶ್ ಎತ್ತಂಗಡಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಬ್ ಪಂತ್, ರೋಹಿಣಿ ಸಿಂಧೂರಿ, ಶಿಲ್ಪಾನಾಗ್, ಡಿಎಚ್ಓ ಡಾ. ಟಿ. ಅಮರನಾಥ್ ಬಳಿಕ ನಟೇಶ್ ವರ್ಗಾವಣೆಗೊಂಡಿದ್ದಾರೆ.












Click it and Unblock the Notifications