ಬಂದ್ ಬೆಂಬಲಿಸಿದ್ದಕ್ಕೆ ಕಾಂಗ್ರೆಸ್-ಜೆಡಿಎಸ್ ಜಾಲಾಡಿದ ಪ್ರತಾಪ್ ಸಿಂಹ
Recommended Video
ಮೈಸೂರು, ಸೆಪ್ಟೆಂಬರ್ 10 : ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಭಾರತ್ ಬಂದ್ ಗೆ ಕರೆ ನೀಡಿರುವುದನ್ನು ಒಪ್ಪುವುದಕ್ಕೆ ಸಾಧ್ಯವೇ ಇಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಎದುರಿಸಲಾಗದೆ ವಿಪಕ್ಷಗಳು ಮಾಡಿರುವ ಈ ತಂತ್ರಕ್ಕೆ ಬಗ್ಗುವುದಿಲ್ಲ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಭಾರತ್ ಬಂದ್ ಕರೆಗೆ ಸೋಮವಾರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಋಣ ತೀರಿಸಲು ಜೆಡಿಎಸ್ ಸಹ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದೆ. ಪ್ರಧಾನಿ ಮೋದಿ ಅವರನ್ನು ನೇರವಾಗಿ ಎದುರಿಸಲಾಗದೆ ಈ ರೀತಿ ಬಂದ್ ಗೆ ಬೆಂಬಲ ಕೊಡುತ್ತಿದ್ದಾರೆ. ಮೋದಿ ಮೇಲಿನ ಪುಕ್ಕಲುತನದಿಂದ ಬಂದ್ ಮಾಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸೋಲಿಸಲು ನಾವೆಲ್ಲ ಒಂದಾಗಿದ್ದೇವೆ: ರಾಹುಲ್ ಗಾಂಧಿ
ರಾಜ್ಯದ ಜನರ ಬಗ್ಗೆ ಕಾಳಜಿ ಇದ್ದರೆ ಕುಮಾರಸ್ವಾಮಿ ಅವರೇ ಪೆಟ್ರೋಲ್ ಮೇಲಿನ ತೆರಿಗೆ ಕಡಿಮೆ ಮಾಡಲಿ. ಕೇವಲ ಶೇ 9ರಷ್ಟು ಮಾತ್ರ ಕಡಿಮೆ ಮಾಡಿ. ಮಾಜಿ ಪ್ರಧಾನಿ ದೇವೇಗೌಡರೇ ಮೊದಲು ನಿಮ್ಮ ಗಿಮಿಕ್ ಪಾಲಿಟಿಕ್ಸ್ ನಿಲ್ಲಿಸಿ. ನಿಮ್ಮ ಮಗನಿಗೆ ಸ್ವಲ್ಪ ಬುದ್ಧಿ ಹೇಳಿ. ರುಪಾಯಿ ಮೌಲ್ಯ ಯಾವ ರೀತಿ ಬದಲಾವಣೆ ಆಗುತ್ತದೆ ಎಂಬುದನ್ನು ವಿವರಿಸಿ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಹಿಂಬಾಗಿಲಿನಿಂದ ಆಡಳಿತ ನಡೆಸುತ್ತಿದೆ. ಇನ್ನೂ 50 ವರ್ಷ ಕಳೆದರೂ ಕಾಂಗ್ರೆಸ್ ಪ್ರತಿಭಟನೆ ಮಾಡಲಿ. ದಿನವೂ ಪ್ರತಿಭಟನೆ ಮಾಡಿದರೂ ಅಲ್ಲಿಯೇ ಇರುತ್ತಾರೆ . ಮುಂದಿನ 50 ವರ್ಷ ಆಡಳಿತ ನಡೆಸುವುದು ಬಿಜೆಪಿ ಸರಕಾರವೇ ಎಂದು ಲೇವಡಿ ಮಾಡಿದರು.
ಭಾರತ್ ಬಂದ್ LIVE: ಬಿಹಾರದಲ್ಲಿ ಮಗು ಸಾವು: ರಾಹುಲ್ ಹೊಣೆ ಎಂದ ಬಿಜೆಪಿ
ಮೂರು ತೆರಿಗೆ ಲೂಟಿ ಮಾಡುತ್ತಿರುವುದು ರಾಜ್ಯ ಸರಕಾರಗಳು. ಪೆಟ್ರೋಲ್, ಮದ್ಯ ಹಾಗೂ ರಿಯಲ್ ಎಸ್ಟೇಟ್ ಮೂರರ ಮೇಲೆ ಅತಿ ಹೆಚ್ಚು ತೆರಿಗೆ ಹಾಕುತ್ತಿದ್ದಾರೆ. ಈ ಮೂರರ ಮೇಲೆ ತೆರಿಗೆ ಹಾಕಿ ಲೂಟಿ ಮಾಡಲಾಗುತ್ತದೆ ಎಂದರು.
ಈ ವೇಳೆ ವಸತಿ ಸಚಿವ ಯು ಟಿ.ಖಾದರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಹಿಂದೊಮ್ಮೆ 'ಬಂದ್ ಮಾಡಿದವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು' ಎಂದು ಖಾದರ್ ಹೇಳಿದ್ದರು. ಆದರೆ ಈಗ ಅವರು ಚಪ್ಪಲಿ ಎಲ್ಲಿಟ್ಟಿದ್ದಾರೆ? ಈಗ ಯಾರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಎಂದು ಪ್ರಶ್ನಿಸಿದರು.