ಕಾವೇರಿ ಜಲಾನಯನ ಪ್ರದೇಶಗಳು ಜಲಾವೃತ, ಹೆಚ್ಚಿದ ನೀರಿನ ಮಟ್ಟ
ಮೈಸೂರು, ಆಗಸ್ಟ್ 15: ಕಾವೇರಿ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ವ್ಯಾಪಕ ಮಳೆ, ಹೇಮಾವತಿ ಅಣೆಕಟ್ಟೆಯಿಂದ 50 ಸಾವಿರ ಕ್ಯೂಸೆಕ್ ನೀರು ಹೊರ ಹರಿವಿನ ಪರಿಣಾಮ ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರಕ್ಕೆ ಭಾರೀ ಪಮಾಣದಲ್ಲಿ ನೀರು ಹರಿದುಬರುತ್ತಿದ್ದು, 1.08 ಲಕ್ಷ ಕ್ಯೂಸೆಕ್ಸ್ ನೀರನ್ನು ಹೊರ ಬಿಡಲಾಗಿದೆ.
27 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಕೆಆರ್ ಎಸ್ ಅಣೆಕಟ್ಟೆಯಿಂದ ದಾಖಲೆ ಪ್ರಮಾಣದ ನೀರನ್ನು ನದಿಗೆ ಹರಿಸಲಾಗಿದೆ. ಪರಿಣಾಮ ಕಾವೇರಿ ನದಿಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಪಕ್ಷಿಧಾಮ ಜಲಾವೃತವಾಗಿದೆ.
ಹರಿಹರಪುರ ನದಿಯಲ್ಲಿ ಸಿಲುಕಿ ಒದ್ದಾಡಿದ ಎಮ್ಮೆ, ಮುಳುಗಿದ ಸೋಂಪುರ ಸೇತುವೆ
ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಮೇಲಂಚಿನವರೆಗೂ ನೀರು ಬಂದಿದೆ. ಗಂಜಾಂ ನಿಮಿಷಾಂಭ ದೇವಸ್ಥಾನದ ಮೆಟ್ಟಿಲು ದಾಟಿ ಹೊಸ್ತಿಲವರೆಗೂ ನೀರು ಬಂದಿದೆ. ಪಶ್ಚಿಮ ವಾಹಿನಿ ಸ್ನಾನಘಟ್ಟ, ಚೆಕ್ ಪೋಸ್ಟ್ ಬಳಿಯ ಶ್ರೀಸಾಯಿ ಆಶ್ರಮ, ಗೌತಮ ಆಶ್ರಮ ಸೇರಿದಂತೆ ಕಾವೇರಿ ನದಿ ತೀರಪ್ರದೇಶಗಳು ಭಾಗಶಃ ಮುಳುಗಡೆಯಾಗಿವೆ.
ದೊಡ್ಡೇಗೌಡನ ಕೊಪ್ಪಲು ಬಳಿಯ ಗಜಾನನ ಆಶ್ರಮ, ಕಾವೇರಿ ಸಂಗಮ, ಗೋಸಾಯಿ ಘಾಟ್ ನಲ್ಲಿರುವ ದೇವಾಲಯಗಳಿಗೆ ನೀರು ನುಗ್ಗಿದೆ. ಬೋರೇದೇವರ ದೇಗುಲ ಬಹುತೇಕ ಮುಳುಗಡೆಯಾಗಿವೆ. ಸಾರ್ವಜನಿಕರು ನದಿಗೆ ಇಳಿಯದಂತೆ ಸೂಚಿಸಲಾಗಿದೆ.
24 ಗಂಟೆಗಳಲ್ಲಿ ಭಾರೀ ಮಳೆ, ಕರಾವಳಿಯಲ್ಲಿ ಹೈ ಅಲರ್ಟ್
ಜಲಾಶಯದಿಂದ ಈವರೆಗೆ ಹೊರಗೆ ಬಿಟ್ಟ ನೀರು ಹಾಗೂ ಯಾವ ಪ್ರದೇಶದ ಪರಿಸ್ಥಿತಿ ಹೇಗಿದೆ ಎಂಬ ಮಾಹಿತಿಯ ವಿವರ ಇಲ್ಲಿದೆ ನೋಡಿ..
ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆ
ನದಿ ಪಾತ್ರದ ಗ್ರಾಮಗಳಲ್ಲಿನ ಕೃಷಿ ಭೂಮಿಗೂ ನೀರು ನುಗ್ಗಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ. ಕೆಆರ್ಎಸ್ ನಿಂದ ಮಂಗಳವಾರ ಬೆಳಗ್ಗೆ 1 ಲಕ್ಷ ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಬಿಡಲಾಯಿತು. ಸಂಜೆ ವೇಳೆಗೆ 1.08 ಲಕ್ಷ ಕ್ಯೂಸೆಕ್ ಗೆ ತಲುಪಿತು.
ಈ ಹಿನ್ನೆಲೆಯಲ್ಲಿ ನದಿಪಾತ್ರದ ತಗ್ಗು ಪ್ರದೇಶದಲ್ಲಿನ ಜನರಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ ಎಂದು ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಬಸವರಾಜೇಗೌಡ ತಿಳಿಸಿದ್ದಾರೆ.
ಹೈ ಅಲರ್ಟ್ ಘೋಷಣೆ
1991ರಲ್ಲಿ 1.80 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಿದ್ದು, ಈವರೆಗಿನ ದಾಖಲೆ. ಮಂಗಳವಾರ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ 121.95 ಮತ್ತು ಕಬಿನಿ ಜಲಾಶಯದ ನೀರಿನ ಮಟ್ಟ 2276.93 ಅಡಿ ಇತ್ತು. ಇದೀಗ ಹಾರಂಗಿಯಿಂದ 45 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗಿದೆ.
ಕಬಿನಿ ಜಲಾಶಯಕ್ಕೆ 47,900 ಕ್ಯೂಸೆಕ್ಸ್ ಒಳಹರಿವು ಇದ್ದು, 45 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಕೆಆರ್ ಎಸ್ ಮತ್ತು ಕಬಿನಿ ಹೊರ ಹರಿವು ಸೇರಿ 1.70 ಲಕ್ಷ ಕ್ಯೂಸೆಕ್ ಗೂ ಹೆಚ್ಚು ನೀರು ನದಿಯಲ್ಲಿ ಹರಿದು ಹೋಗುತ್ತಿದ್ದು, ತಮಿಳುನಾಡಿನ ಮೆಟ್ಟೂರು ಅಣೆಕಟ್ಟೆ ತಲುಪುತ್ತಿದೆ. ಪರಿಣಾಮ, ಮೆಟ್ಟೂರು ಭಾಗದ 9 ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ರಂಗನತಿಟ್ಟು ಪಕ್ಷಿಧಾಮದಲ್ಲಿ ಹೆಚ್ಚಿದ ನೀರಿನ ಮಟ್ಟ
ಜುಲೈ ಮೊದಲ ವಾರವೇ ಜಲಾಶಯ ಭರ್ತಿಯಾಗಿ ಮಂಡ್ಯ ರೈತರಲ್ಲಿ ಹರ್ಷ ಉಂಟುಮಾಡಿತ್ತು. ಜು.14ರಂದು 20 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗಿತ್ತು. ಜು.20ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಾಗಿನ ಅರ್ಪಿಸಿದ ನಂತರದ ದಿನಗಳಲ್ಲಿ ಹೊರಹರಿವಿನ ಪ್ರಮಾಣ 82 ಸಾವಿರ ಕ್ಯೂಸೆಕ್ ಗೆ ಏರಿಸಲಾಗಿತ್ತು.
ಜಲಾಶಯದ ಪ್ಲಸ್ 103 ಮಟ್ಟದ 56 ಗೇಟ್ಗಳ ಮೂಲಕ 1 ಲಕ್ಷದ 7 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಜಲಾಶಯದ ತಗ್ಗಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮದಲ್ಲಿ ನದಿ ನೀರಿನ ಮಟ್ಟ ಹೆಚ್ಚಿದೆ.
ಪಕ್ಷಿಧಾಮ ಪ್ರವೇಶ ನಿಷೇಧ
ಮಂಗಳವಾರ ಬೆಳಗ್ಗೆಯಿಂದ ಪ್ರವಾಸಿಗರಿಗೆ ಪಕ್ಷಿಧಾಮ ಪ್ರವೇಶ ನಿಷೇಧಿಸಲಾಗಿದೆ. ಐಬಿಸ್, ಕಾರ್ಮೊರೆಂಟ್, ಹೆರಾನ್, ಇಗ್ರೆಟ್ಸ್ ಜಾತಿಯ ಪಕ್ಷಿಗಳು ಎತ್ತರದ ಮರಗಳ ಮೇಲೆ ಆಶ್ರಯ ಪಡೆದಿವೆ.
ಪಕ್ಷಿ ಸಂಕುಲಕ್ಕೆ ಯಾವುದೇ ಅಪಾಯ ಉಂಟಾಗಿಲ್ಲ ಎಂದು ಪಕ್ಷಿಧಾಮದ ಡಿಆರ್ ಎಫ್ಒ ಪುಟ್ಟಮಾದೇಗೌಡ ತಿಳಿಸಿದ್ದಾರೆ. 1992ರ ನಂತರ ಕಾವೇರಿ ನದಿ ಈ ಪ್ರಮಾಣದಲ್ಲಿ ತುಂಬಿ ಹರಿಯುತ್ತಿದೆ.