ಚುಂಚನಕಟ್ಟೆ: ಧನುಷ್ಕೋಟಿ ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡು
ಮೈಸೂರು, ಜೂನ್.18: ಕಾವೇರಿ ನದಿಯಲ್ಲಿ ಹರಿವು ಹೆಚ್ಚಾಗಿದ್ದು, ಕೆ.ಆರ್.ನಗರ ತಾಲೂಕಿನ ಇತಿಹಾಸ ಪ್ರಸಿದ್ಧ ಚುಂಚನಕಟ್ಟೆ ಬಳಿ ಇರುವ ಪುರಾಣ ಪ್ರಸಿದ್ಧ ಸೀತಾ ಬಚ್ಚಲು ಹಾಗೂ ಧನುಷ್ಕೋಟಿ ಜಲಪಾತ ಭೋರ್ಗರೆಯುತ್ತಿರುವ ದೃಶ್ಯ ನೋಡಲು ಪ್ರವಾಸಿಗರ ದಂಡು ಸಹಸ್ರಾರು ಸಂಖ್ಯೆಯಲ್ಲಿ ಹರಿದು ಬರುತ್ತಿದೆ.
ಭಾನುವಾರ ಬಂತೆಂದರೆ ಇಲ್ಲೊಂದು ಮಿನಿ ಜಾತ್ರೆಯೇ ಸೃಷ್ಟಿಯಾಗಿರುತ್ತದೆ. ಧನುಷ್ಕೋಟಿ ಫಾಲ್ಸ್ನಲ್ಲಿ ಇತ್ತೀಚೆಗೆ ಯುವ ವಿಜ್ಞಾನಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಯಾರೂ ಕೆಳಗೆ ಇಳಿಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ಕಾರಣ ದೇವಾಲಯದ ಬಳಿಯಿಂದಲೇ ಸಾವಿರಾರು ಮಂದಿ ಧನುಷ್ಕೋಟಿ ಜಲಪಾತವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರಿಂದ ಚುಂಚನಕಟ್ಟೆ ದೇವಾಲಯದ ಆವರಣದಲ್ಲಿ ನೂರಾರು ದ್ವಿಚಕ್ರ ವಾಹನಗಳು, ಕಾರ್, ಬಸ್ಗಳು ಸೇರಿದಂತೆ ಇಡೀ ಆವರಣ ವಾಹನಗಳಿಂದ ತುಂಬಿ ಹೋಗಿರುತ್ತದೆ. ಈ ಮಾರ್ಗದ ಮೂಲಕ ಹೋಗುತ್ತಿದ್ದವರು ಕೂಡ ಧನುಷ್ಕೋಟಿ ಜಲಪಾತ ವೀಕ್ಷಿಸಿಕೊಂಡೇ ಮುಂದಕ್ಕೆ ಹೋಗುವ ದೃಶ್ಯ ಸಾಮಾನ್ಯವಾಗಿದೆ.

ಕ್ಷೇತ್ರಕ್ಕೆ ಪ್ರವಾಸಿಗರು ದಂಡು ಬರುತ್ತಿದ್ದಂತೆ ಸ್ಥಳೀಯರು ತಿಂಡಿ ತಿನಿಸಿನ ಅಂಗಡಿಗಳ ಸಂಖ್ಯೆಯೂ ಹೆಚ್ಚಾಗಿದೆ. ಪಾನಿಪೂರಿ, ಚುರುಮುರಿ, ಸುಟ್ಟಜೋಳ, ಹಲಸಿನ ಹಣ್ಣು, ಕಡಲೆಕಾಯಿ, ಮಾವಿನ ಹಣ್ಣು, ಕಬ್ಬಿನ ಜ್ಯೂಸ್ ಖರೀದಿ ಮಾಡಲು ಜನ ಮುಗಿಬೀಳುತ್ತಿದ್ದಾರೆ.
ಜಲವೈಭವವನ್ನು ವೀಕ್ಷಿಸುತ್ತಲೇ ತಿಂಡಿ ತಿನಿಸುಗಳನ್ನು ತಿಂದು ಸಮಯ ಕಳೆಯಲು ಪ್ರವಾಸಿಗರಿಗೆ ಪ್ರಶಸ್ತ ಸ್ಥಳವಾಗಿದೆ ಧನುಷ್ಕೋಟಿ.












Click it and Unblock the Notifications