ವಿಧಾನ ಪರಿಷತ್ ಚುನಾವಣೆ, ಮತ ಹಾಕಿದ್ರೆ ಗ್ರಾಮಜ್ಯೋತಿ ಪ್ರಶಸ್ತಿ!
ಮೈಸೂರು, ಡಿಸೆಂಬರ್,22: ಸ್ಥಳಿಯ ಸಂಸ್ಥೆಗಳಿಂದ ರಾಜ್ಯ ವಿಧಾನಪರಿಷತ್ ಗೆ ಚುನಾವಣೆ ಕಣ ರಂಗೇರಿದೆ. ಗ್ರಾಮಪಂಚಾಯತಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳಿಗೆ ಇದೊಂದು ಸುಗ್ಗಿಯ ಕಾಲವಾಗಿ ಮಾರ್ಪಟ್ಟಿದೆ. ಗ್ರಾಪಂ ಸದಸ್ಯರ ಮನಸೆಳೆದು ಮತ ಪಡೆಯುವ ತಂತ್ರ ಮಾತ್ರ ಭಾರೀ ಜೋರಾಗಿಯೇ ನಡೆಯುತ್ತಿದೆ.
ಚುನಾವಣೆ ನೀತಿ ಸಂಹಿತೆಯನ್ನು ಬದಿಗೊತ್ತಿ ವಾರ್ಮ ಮಾರ್ಗದಲ್ಲಿ ಚುನಾವಣೆ ಗೆಲುವುದಕ್ಕಾಗಿ ಮೈಸೂರು-ಚಾಮರಾಜನಗರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅಯೂಬ್ ಖಾನ್ ಎಂಬುವರು ಅಂಚೆ ಮೂಲಕ ಚಿನ್ನ ಲೇಪಿತ ನಾಣ್ಯ ಮಾದರಿಯ ಪದಕವನ್ನು ಗ್ರಾಮಜ್ಯೋತಿ ಪ್ರಶಸ್ತಿ ಎಂಬ ಘೋಷಣೆಯೊಂದಿಗೆ ಗ್ರಾಪಂ ಸದಸ್ಯರಿಗೆ ನೀಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.[ಎಂ.ಸಿ.ನಾಣಯ್ಯ ತಟಸ್ಥ, ಕೊಡಗಿನಲ್ಲಿ ಜೆಡಿಎಸ್ ಒಡೆದ ಮನೆ!]

ಚುನಾವಣೆಯ ನಾಡಿ ಬಡಿತವನ್ನು ಚೆನ್ನಾಗಿ ಅರಿತಿರುವ ಕೆಲವು ಗ್ರಾಪಂ ಸದಸ್ಯರು ಒಂದಷ್ಟು ಹಣ ಮಾಡಿಕೊಳ್ಳುವ ತಯಾರಿಯಲ್ಲಿದ್ದಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಿಂದ ಘಟಾನುಘಟಿಗಳೇ ಸ್ಪರ್ಧಿಸಿದ್ದು, ಇವರನ್ನು ಸರಿಸಿ ಪಕ್ಷೇತರ ಅಭ್ಯರ್ಥಿಗಳು ಮತದಾರ ಪ್ರಭುಗಳನ್ನು ಓಲೈಸಿಕೊಳ್ಳುವುದು ಸುಲಭದ ಕೆಲಸವಲ್ಲ ಎಂದು ತಿಳಿದು ವಿವಾದದಲ್ಲಿ ಸಿಲುಕಿದ್ದು, ಇದರ ಪರಿಣಾಮ ಪ್ರಜಾಪ್ರತಿನಿಧಿ ಕಾಯಿದೆ 123(1) ಮತ್ತು ಭಾರತ ದಂಡ ಸಂಹಿತೆ171ಬಿ, 171ಸಿ ಅಡಿ ಪ್ರಕರಣ ದಾಖಲಾಗಿದೆ.
ಮೊದಲು ಎಲ್ಲಿ ಪ್ರಕರಣ ಬೆಳಕಿಗೆ ಬಂತು?
ಮೊದಲು ನಂಜನಗೂಡಿನಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಕಳಲೆ ಗ್ರಾಮದ ಅಂಚೆ ಕಚೇರಿಯ ನಾರಾಯಣ್ ಸಿಂಗ್ ಎಂಬುವರು ನೀಡಿದ ಮಾಹಿತಿ ಮೇರೆಗೆ ತಹಸೀಲ್ದಾರ್ ಎಚ್.ರಾಮಪ್ಪ ಅವರು ಅಂಚೆ ಕಚೇರಿಗೆ ಭೇಟಿ ನೀಡಿ ಗ್ರಾಪಂ ಸದಸ್ಯರಿಗೆ ಕಳುಹಿಸಲಾಗಿದ್ದ ಸುಮಾರು 133 ಲಕೊಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಬಳಿಕ ಪಕ್ಷೇತರ ಅಭ್ಯರ್ಥಿ ಅಯೂಬ್ ಖಾನ್ ವಿರುದ್ಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.[ಪರಿಷತ್ ಚುನಾವಣೆ : ಕಣದಲ್ಲಿರುವ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ]
ಎಲ್ಲೆಲ್ಲಿ ಕಳುಹಿಸಿದ್ದಾರೆ?
ಹುಣಸೂರು, ಕೆ.ಆರ್.ನಗರ ತಾಲೂಕಿನ ಗ್ರಾಪಂ ಸದಸ್ಯರಿಗೂ ಇದೇ ರೀತಿ ಕಳುಹಿಸಲಾಗಿದೆ. ಒಂದೇ ದಿನ ಒಂದೇ ಮಾದರಿಯ, ಭಾರ ಹೊಂದಿದ ನೂರಾರು ಲಕೋಟೆಗಳು ಅಂಚೆ ಕಚೇರಿಗೆ ಬಂದಿದ್ದರಿಂದ ಅಂಚೆ ಅಧಿಕಾರಿಗಳು ಅಚ್ಚರಿಗೊಂಡಿದ್ದರು. ನಂಜನಗೂಡಿನಲ್ಲಿ ಪ್ರಕರಣ ಬೆಳಕಿಗೆ ಬಂದಿದ್ದರಿಂದ ಎಲ್ಲ ಅಂಚೆ ಕಚೇರಿಗಳಿಗೆ ಮಾಹಿತಿ ನೀಡಿ ಲಕೋಟೆಗಳ ಬಟವಾಡೆಯನ್ನು ತಡೆಹಿಡಿಯಲಾಗಿತ್ತು.
ಹುಣಸೂರು ಉಪವಿಭಾಗದ ಸಹಾಯಕ ಆಯುಕ್ತೆ ಡಾ. ಸೌಜನ್ಯರವರು ತಹಸೀಲ್ದಾರ್ ಗೆ ನೀಡಿದ ಸೂಚನೆ ಮೇರೆಗೆ ತಹಸೀಲ್ದಾರ್ ಮತ್ತು ಪಟ್ಟಣ ಪೊಲೀಸರು ಸುಮಾರು 203 ಲಕೋಟೆಗಳನ್ನು ವಶಪಡಿಸಿಕೊಂಡಿದ್ದು, ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಇನ್ನುಳಿದಂತೆ ಕೆ.ಆರ್.ನಗರದಲ್ಲಿ 304, ಪಿರಿಯಾಪಟ್ಟಣದಲ್ಲಿ 178 ಲಕೋಟೆಗಳನ್ನು ವಶಪಡಿಸಿಕೊಳ್ಳಲಾಗಿದೆ.[ಡಿಸೆಂಬರ್ 27ರ ವಿಧಾನಪರಿಷತ್ ಚುನಾವಣೆ ಬಗ್ಗೆ ತಿಳಿಯಿರಿ]

ಲಕೋಟೆಯಲ್ಲೇನಿದೆ ಗೊತ್ತಾ?
ಪಕ್ಷೇತರ ಅಭ್ಯರ್ಥಿ ಅಯೂಬ್ ಖಾನ್ ಅವರು ನೀಡಿರುವ ಚಿನ್ನಲೇಪಿತ ತಗಡಿನ ಪದಕ ನೀಡಿ ಇದು ಗ್ರಾಮ ಜ್ಯೋತಿ ಪ್ರಶಸ್ತಿ ಪದಕ. ಇದು ಅವರ ಚಿಕ್ಕಪ್ಪ ನಜೀರ್ ಸಾಬ್ ಅವರ ಹೆಸರಿನಲ್ಲಿ ಗ್ರಾಪಂ ಸದಸ್ಯರಿಗೆ ನೀಡಲಾಗುತ್ತಿರುವ ಪ್ರಶಸ್ತಿ. ಇದನ್ನು ಸ್ವೀಕರಿಸಿ, ಚುನಾವಣೆಯಲ್ಲಿ ತನಗೆ ಮತ ನೀಡುವಂತೆ ಕರಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.[ಪರಿಷತ್ ಚುನಾವಣೆ : ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ]
ಒಂದು ಕಡೆ ಕದ್ದುಮುಚ್ಚಿ ಮತದಾರರಿಗೆ ಹಣ, ಹೆಂಡ, ಅಮೂಲ್ಯ ವಸ್ತುಗಳನ್ನು ನೀಡಿ ಸೆಳೆಯುವ ಪ್ರಯತ್ನ ಮಾಡುತ್ತಿದ್ದರೂ ಅದು ಬೆಳಕಿಗೆ ಬರುತ್ತಿಲ್ಲ. ಆದರೆ ವಿಭಿನ್ನವಾಗಿ ಮತದಾರರನ್ನು ಸೆಳೆಯಲು ಹೋದ ಅಯೂಬ್ ಖಾನ್ ಈಗ ಪ್ರಕರಣ ಎದುರಿಸುವಂತಾಗಿದೆ.












Click it and Unblock the Notifications