ರೋಹಿಣಿ ಸಿಂಧೂರಿ ವಿರುದ್ಧ ಮತ್ತೋರ್ವ ಶಾಸಕ ಅಸಮಾಧಾನ
ಮೈಸೂರು, ನವೆಂಬರ್ 29: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಮತ್ತೋರ್ವ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಶನಿವಾರ ಮಾಧ್ಯಮದವರ ಜೊತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಹೋದ ಕಡೆಯಲ್ಲಾ ಸರ್ಕಾರದ ವಿರುದ್ದವೇ ನಡೆಯುವ ಪ್ರವೃತ್ತಿ. ಅವರು ಸರ್ಕಾರವನ್ನೇ ಪ್ರಶ್ನಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದಾರೆ ಎಂದು ಶಾಸಕ ತನ್ವೀರ್ ಸೇಠ್ ಆರೋಪಿಸಿದ್ದಾರೆ.
ಈ ಹಿಂದೆ ಸರ್ಕಾರದ ವಿರುದ್ಧವೇ ಕೆಎಟಿಗೆ ಹೋಗಿದ್ದರು. ಸರ್ಕಾರಿ ಸಭೆಯಲ್ಲಿ ಜನಪ್ರತಿನಿಧಿಗಳು ಮಾತನಾಡುವುದು ವೈಯುಕ್ತಿಕವಲ್ಲ. ಜನರ ಸಮಸ್ಯೆಯನ್ನು ಪ್ರಸ್ತಾಪ ಮಾಡುತ್ತಾರೆ ಎಂದರು.

ಶಾಸಕರಿಗೆ ಯಾವ ಸಮಸ್ಯೆಗಳಿಲ್ಲ, ಜನರ ಸಮಸ್ಯೆಗಳನ್ನಷ್ಟೇ ಪ್ರಸ್ತಾಪ ಮಾಡುತ್ತಾರೆ. ಆದರೆ ಅಧಿಕಾರ ಇದೆ ಅಂತ ಪತ್ರ ಬರೆಯೋಕೆ ಆಗುತ್ತಾ? ಅಥವಾ ತಪ್ಪನ್ನು ತಿದ್ದುಕೊಳ್ಳಬೇಕಾ? ಎಂದು ರೋಹಿಣಿ ವಿರುದ್ಧ ತನ್ವೀರ್ ಸೇಠ್ ಅಸಮಾಧಾನ ಹೊರ ಹಾಕಿದ್ದಾರೆ.
ಇತ್ತೀಚಿಗೆ ಅಷ್ಟೇ ಹುಣಸೂರು ಶಾಸಕ ಎಚ್.ಪಿ ಮಂಜುನಾಥ್ ಅವರು ಮೈಸೂರು ಜಿಲ್ಲಾ ಕೆಡಿಪಿ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುತ್ತಿಲ್ಲ ಹಾಗೂ ತಾವು ಬರೆದ ಪತ್ರಕ್ಕೂ ಸ್ಪಂದಿಸಿಲ್ಲ ಎಂದು ಬಹಿರಂಗವಾಗಿ ಆರೋಪಿಸಿದ್ದರು.
ನಂತರ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಎಚ್.ಪಿ ಮಂಜುನಾಥ್ ಆರೋಪಗಳಿಗೆ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದರು. ಇದಕ್ಕೂ ಹುಣಸೂರು ಶಾಸಕ ಅಸಮಾಧಾನ ವ್ಯಕ್ತಪಡಿಸಿದ್ದರು.











Click it and Unblock the Notifications